ಗೋಕಾಕ:ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ : ಡಾ: ರಾಜೇಂದ್ರ ಸಣ್ಣಕ್ಕಿ

ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ : ಡಾ: ರಾಜೇಂದ್ರ ಸಣ್ಣಕ್ಕಿ
ಗೋಕಾಕ ಎ 18 : ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ನಿರ್ದೇಶಕ ಡಾ: ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಶನಿವಾರದಂದು ತಾಲೂಕಿನ ಬಿಲಕುಂದಿ ಗ್ರಾಮದ ಶ್ರೀ ಗೋಕಾಕ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 2017-18ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದಶಮಾನೋತ್ಸವ ಮತ್ತು ಬಿಳ್ಕೋಡುವ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಿಕ್ಷಕರು ಸಂಸ್ಕಾರವನ್ನು ಬೆಳೆಸಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಅತೀ ಅವಶ್ಯವಾಗಿದೆ. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಜವಾಬ್ದಾರಿ ಪಾಲಕರಲ್ಲಿದೆ. ಮಕ್ಕಳ ಉಜ್ಚಲ ಭವಿಷ್ಯವನ್ನು ರೂಪಿಸಲಿಕ್ಕೆ ಇಂತಹ ಶಿಕ್ಷಣ ಸಂಸ್ಥೆಗಳು ಪೂರಕವಾಗಿವೆ. ಅಲ್ಲದೇ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಇಂದು ಈ ಸಂಸ್ಥೆ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ. ಶಾಲೆಯು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡಲಾಗುತ್ತಿದ್ದು ಪಾಲಕರು ಇಂತಹ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ ಉತ್ತಮ ಪ್ರಜೆಯನ್ನಾಗಿಸಿ ಎಂದು ಕರೆ ನೀಡಿದರು.
ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪಿಯನ್ ಸ್ಪರ್ಧಾಳು ಘೋಡಗೇರಿಯ ಲಕ್ಷ್ಮೀ ತಳವಾರ ಅವರು ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ನಮ್ಮಂತಹ ಬಡ ಕಲಾವಿದೆಗೆ ಇಂತಹ ಶಿಕ್ಷಣ ಸಂಸ್ಥೆಗಳು ನಮ್ಮನ್ನು ಕರೆಯಿಸಿ ಸನ್ಮಾನ ಮಾಡಿ ಗೌರವಿಸುವುದು ನಿಜ್ಜಕ್ಕೂ ನಾನು ಎಂದಿಗೂ ಮರೆಯುವುದಿಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಈ ಸಂಸ್ಥೆ ಮಾಡಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಕೂಡಾ ಏನಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ರಾಜ್ಯದ ಜನತೆಯ ಆಶೀರ್ವಾದದಿಂದ ಇಂದು ನಾನು ಸಂಗೀತ ಕಲಾವಿದೆಯಾಗಿ ತಮ್ಮ ಮುಂದೆ ನಿಂತಿದ್ದೇನೆ. ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವಂತಹ ಕಾರ್ಯ ಎಲ್ಲರೂ ಮಾಡಬೇಕಾಗಿದೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಕಲೆಯನ್ನು ಕೂಡಾ ಬೆಳೆಸಿರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಮ.ಬಳಿಗಾರ ಮಾತನಾಡಿ ಶಿಕ್ಷಣ ಸಂಸ್ಥೆಯು ಕಳೆದ 10 ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರ ಎಲ್ಲ ಸಹಕಾರದಿಂದ ಶಿಕ್ಷಣ ಸಂಸ್ಥೆಯು ಉತ್ತುಂಗಕ್ಕೆ ಬೆಳೆಯಲು ಸಹಾಯ ಸಹಕಾರ ನೀಡಬೇಕೆಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಬಿಲಕುಂದಿಯ ಸಿದ್ಧಾರೂಢಮಠದ ಮಾತೋಶ್ರೀ ಶಾಂತಮ್ಮಾತಾಯಿ ವಹಿಸಿ ಆಶೀರ್ವಚನ ನೀಡಿದರು. ವೇದಿಕೆ ಮೇಲೆ ತಾ.ಪಂ ಸದಸ್ಯೆ ನೀಲವ್ವ ಶಿ. ಬಳಿಗಾರ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಸಪ್ಪ ಕಳ್ಳಿಗುದ್ದಿ, ವಿ.ವೈ.ಕೊಳದೂರ, ಶಿವನಗೌಡ ಪಾಟೀಲ, ವಿಕ್ರಮ ಅಂಗಡಿ, ಪ್ರಕಾಶ ಹಾದಿಮನಿ, ಲಲಿತ ಭಂಡಾರಿ ಹಾಗೂ ಮಹಾನಿಂಗಪ್ಪ ನಾಯ್ಕ, ಮಹಾದೇವ ಭಂಗಿ, ಪ್ರಭು ಇಟ್ನಾಳ, ಶಿವಪ್ಪ ಕಳ್ಳಿಗುದ್ದಿ, ಮಹಾದೇವ ಹೊಸತೋಟ, ಪ್ರೋ: ಮಲ್ಲಿಕಾರ್ಜುನ ಹೊಟ್ಟಿನ್ನವರ, ಪಂಡಿತಗೌಡ ನಾಯ್ಕರ, ಗುರುನಾಥ ಜೊತ್ತೇನ್ನವರ, ವಿಠ್ಠಲ ಸವದತ್ತಿ, ಮಲ್ಲಪ್ಪ ಬಳಿಗಾರ, ಶಿವಲಿಂಗಪ್ಪ ರಾ.ಬಳಿಗಾರ, ಭಾರತಿ ಚಿಪ್ಪಲಕಟ್ಟಿ ಸೇರಿದಂತೆ ಇತರರು ಇದ್ದರು.
ಸಂತೋಷ ಜಾರಕಿಹೊಳಿ ಸ್ವಾಗತಿಸಿದರು. ಸುವರ್ಣ ಅಂಬಿಗ ನಿರೂಪಿಸಿದರು. ಮುಖ್ಯೋಪಾಧ್ಯಾಯ ಪಾಂಡುರಂಗ ನಾಯ್ಕ ವರದಿ ವಾಚನಗೈದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಮತ್ತು ಮನರಂಜನಾ ಕಾರ್ಯಕ್ರಮ ಜರುಗಿದವು.