RNI NO. KARKAN/2006/27779|Sunday, August 9, 2026
You are here: Home » breaking news » ಗೋಕಾಕ:ವಿಶೇಷಚೇತನರಿಗೆ 33 ದ್ವಿಚಕ್ರ ವಾಹನ ವಿತರಿಸಿದ ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ವಿಶೇಷಚೇತನರಿಗೆ 33 ದ್ವಿಚಕ್ರ ವಾಹನ ವಿತರಿಸಿದ ಸಚಿವ ಸತೀಶ ಜಾರಕಿಹೊಳಿ 

ವಿಶೇಷಚೇತನರಿಗೆ 33 ದ್ವಿಚಕ್ರ ವಾಹನ ವಿತರಿಸಿದ ಸಚಿವ ಸತೀಶ ಜಾರಕಿಹೊಳಿ

ಗೋಕಾಕ ಆ 9 : ನಗರದ ಗೃಹ ಕಚೇರಿಯ ಹಿಲ್‌ ಗಾರ್ಡನ್‌ನಲ್ಲಿ ರವಿವಾರದಂದು ಯಮಕನಮರಡಿ ವಿಧಾನಸಭಾ ಕ್ಷೇತ್ರದ ವಿಶೇಷಚೇತನರಿಗಾಗಿ ಶಾಸಕರ ಅನುದಾನದಡಿ ಮಂಜೂರಾದ 33 ದ್ವಿಚಕ್ರ ವಾಹನಗಳನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಫಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ವಿಶೇಷಚೇತನರ ಸ್ವಾವಲಂಬನೆ, ಸುಗಮ ಸಂಚಾರ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ನೆರವು ಮಹತ್ವದ ಹೆಜ್ಜೆಯಾಗಿದೆ. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಗೌರವ ಹಾಗೂ ಸ್ವಾವಲಂಬನೆಯ ಬದುಕು ದೊರೆಯಬೇಕು ಎಂಬ ಆಶಯದೊಂದಿಗೆ ಜನಪರ ಕಾರ್ಯಗಳು ನಿರಂತರವಾಗಿ ಸಾಗಲಿವೆ ಎಂದರು.

ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರೂ ಸಹ ಇತರರಂತೆ ಸಮಾಜದಲ್ಲಿ ಎಲ್ಲ ಅವಕಾಶಗಳನ್ನು ಪಡೆದು ಶಿಕ್ಷಣ, ಉದ್ಯೋಗ ಹಾಗೂ ಬದುಕಿನ ಹಕ್ಕುಗಳನ್ನು ಹೊಂದಿದ್ದಾರೆ. ವಿಕಲಚೇತನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಕಲಚೇತನರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಸರಕಾರ ಮಾಡಲಿದೆ. ಅವರ ಮೇಲೆ ಎಲ್ಲರೂ ವಿಶೇಷ ಪ್ರೀತಿ ಹಾಗೂ ಗೌರವ ತೋರಬೇಕಿದೆ. ವಿಕಲಚೇತನರಲ್ಲಿ ಅಸಾಧಾರಣ ಪ್ರತಿಭೆಗಳಿವೆ. ಇತರರಲ್ಲಿ ಇದರ ಕಲೆ ಮತ್ತು ಪ್ರತಿಭೆಗಳು ವಿಶೇಷಚೇತನರಲ್ಲಿ ಕಾಣಸಿಗುತ್ತವೆ. ಇಂದು ಅವರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ ನಾಡಿಗೆ ಹಾಗೂ ದೇಶಕ್ಕೆ ದೊಡ್ಡ ಹೆಸರು ತಂದುಕೊಡುವ ಮೂಲಕ ಅನೇಕ ಸಾಧನೆಗಳನ್ನು ಮಾಡುತ್ತಿದ್ದಾರೆ. ಅವರು ಮತ್ತಷ್ಟು ಸಾಧನೆ ಮಾಡಲು ಸರಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ವಿಠ್ಠಲ ಪರಸನ್ನವರ, ವಿನೋದ ಡೊಂಗರೆ, ಪಾಂಡು ರಂಗಸುಭೆ, ಸಂಜು ನಾಯಕ, ಶಿವು ಪಾಟೀಲ, ಪ್ರವೀಣ್ ಗುಡ್ಡಾಕಾಯಿ, ವಿವೇಕ ಜತ್ತಿ, ಮಹೇಶ್ ಉಣ್ಣಿ, ಸಾಯನ್ನವರ, ಮಂಜು ಸನದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: