ಮೂಡಲಗಿ:ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರು : ಶಾಸಕ ಬಾಲಚಂದ್ರ
ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರು : ಶಾಸಕ ಬಾಲಚಂದ್ರ
ಮೂಡಲಗಿ ಜ 22: ಕುಡಿಯುವ ನೀರಿನ ಅನುಕೂಲಕ್ಕೋಸ್ಕರ ಸಣ್ಣ ನೀರಾವರಿ ಇಲಾಖೆಯಿಂದ ಘಟಪ್ರಭಾ ನದಿಗೆ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ರವಿವಾರ ರಾತ್ರಿ ಇಲ್ಲಿಗೆ ಸಮೀಪದ ಪಟಗುಂದಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿಪರ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಈ ಯೋಜನೆಯಿಂದ ಮೂಡಲಗಿ ಪಟ್ಟಣ, ಪಟಗುಂದಿ, ತುಕ್ಕಾನಟ್ಟಿ, ರಾಜಾಪೂರ, ಗುಜನಟ್ಟಿ, ಜೋಕಾನಟ್ಟಿ ಹಾಗೂ ಧರ್ಮಟ್ಟಿ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಆಗಲಿದೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗ್ರಾಮಸ್ಥರು ಕಂಬಳಿ, ಮೈಸೂರು ಪೇಟ ಧರಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸುತ್ತಿರುವುದು.
ಜೊತೆಗೆ ಕೊಳವೆಬಾವಿ, ಬಾವಿಗಳ ಅಂತರ್ಜಲಮಟ್ಟ ಹೆಚ್ಚಲಿದೆ. ಬೇಸಿಗೆ ಕಾಲದಲ್ಲಿ ಜಟೀಲವಾಗುವ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಫೆಬ್ರುವರಿ ತಿಂಗಳಲ್ಲಿ ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಅರಭಾವಿ ಮತಕ್ಷೇತ್ರದಲ್ಲಿ ಈಗಾಗಲೇ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಪಡಿಸಲಾಗುತ್ತಿದೆ. ರೈತರಿಗೆ ಅಗತ್ಯವಿರುವ ಹೊಲಗಳ ರಸ್ತೆಗಳನ್ನು ಮಾರ್ಚ ತಿಂಗಳೊಳಗೆ ಮುಗಿಸಲಾಗುತ್ತಿದೆ. ಮೂಡಲಗಿಗೆ ಸಂಪರ್ಕ ಕಲ್ಪಿಸುವ ಪಟಗುಂದಿ, ಕಮಲದಿನ್ನಿ ಹಾಗೂ ಸುಣಧೋಳಿ ರಸ್ತೆಗಳನ್ನು ಸುಧಾರಣೆ ಮಾಡಲಾಗುವುದು ಎಂದು ಹೇಳಿದರು.
1992 ರಿಂದ ಅರಭಾವಿ ಮತಕ್ಷೇತ್ರದ ಜನರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ. ನಮ್ಮ ನಿಮ್ಮಗಳ ಸಂಬಂಧ ಕೇವಲ ಶಾಸಕ-ಮತದಾರರ ಸಂಬಂಧವಲ್ಲ. ಸ್ನೇಹ-ಸಹೋದರತ್ವ ಭಾವನೆಯನ್ನು ಮೂಡಿಸಿಕೊಂಡು ಎಲ್ಲದಕ್ಕೂ ಮಿಗಿಲಾದ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದೇವೆ. ನನಗೆ ಅಧಿಕಾರ ಮುಖ್ಯವಲ್ಲ. ಜನರ ಪ್ರೀತಿ-ವಿಶ್ವಾಸವೇ ಮುಖ್ಯ. ಶಾಸಕನಾಗಿದ್ದುಕೊಂಡು ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮನೋಭಾವನೆಯಿಂದ ಕಳೆದ 14 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ.ಗಳ ನಾನಾ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷ ಹಾಗೂ ಜಾತಿಗಳನ್ನು ನೋಡಿಲ್ಲ. ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಆಯಾ ಸಮಾಜಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಸಗೌಡ ಪಾಟೀಲ, ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಹನಮಂತ ತೇರದಾಳ, ಪಟಗುಂದಿ ಗ್ರಾಪಂ ಅಧ್ಯಕ್ಷೆ ಉಜ್ವಲಾ ಪಾಟೀಲ, ನಾಯ್ಕಪ್ಪ ಪಾಟೀಲ, ರಾಮನಗೌಡ ಪಾಟೀಲ, ರಾವಸಾಹೇಬ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಣ್ಣಾ ಕಸ್ತೂರಿ, ಹನಮಂತ ನಾಯಿಕ, ರಾಜು ಕಸ್ತೂರಿ, ಮೂಡಲಗಿಯ ಸಂತೋಷ ಸೋನವಾಲ್ಕರ, ಚನಗೌಡ ಪಾಟೀಲ, ಜಡೆಪ್ಪ ಮಂಗಿ, ಮಾನಿಕ ಬೋಳಿ, ಮಹಾದೇವ ಬಿಜಗುಪ್ಪಿ, ಪರಸಪ್ಪ ಉಪ್ಪಾರ, ಪರಶುರಾಮ ಸನದಿ, ನೂರಅಹ್ಮದ ಫಿರಜಾದೆ, ಪ್ರಕಾಶ ಬಾಗೇವಾಡಿ, ಪಾರೇಶ ಹುಕ್ಕೇರಿ, ಪಡದಯ್ಯ ಹಿರೇಮಠ, ಗಂಗಪ್ಪ ಹಂಜಿ, ಪಿ.ಎನ್.ನಾಯಿಕ, ಪ್ರಭಾಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಬಸಗೌಡ ಪಾಟೀಲ, ಬಾಳೇಶ ಬನಹಟ್ಟಿ, ಲಕ್ಷ್ಮಣ ತೆಳಗಡೆ, ಗ್ರಾಪಂ ಸದಸ್ಯರು, ಸಹಕಾರಿಗಳು, ಮುಖಂಡರು, ಅಧಿಕಾರಿಗಳು, ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 40 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಮ ಪಂಚಾಯತಿ ಕಟ್ಟಡ, 15 ಲಕ್ಷ ರೂ. ವೆಚ್ಚದ ಒಂದು ಲಕ್ಷ ಲೀ ಕುಡಿಯುವ ನೀರಿನ ಸಾಮಥ್ರ್ಯ ಹೊಂದಿರುವ ಜಲಸಂಗ್ರಹಾಲಯವನ್ನು ಉದ್ಘಾಟಿಸಿದರು. 14 ಲಕ್ಷ ರೂ. ವೆಚ್ಚದ 2 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಶಾಸಕರನ್ನು ಸತ್ಕರಿಸಿದರು.