ಗೋಕಾಕ:ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಕಿವಿಮಾತು
ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಕಿವಿಮಾತು
ಗೋಕಾಕ ಜ 20: ಅರಭಾವಿ ಕ್ಷೇತ್ರದಲ್ಲಿ ನಮ್ಮ ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಅದರ ಬಗ್ಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಶನಿವಾರ ಸಂಜೆ ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮತಕ್ಷೇತ್ರದ “ನವಭಾರತಕ್ಕಾಗಿ ನವಕರ್ನಾಟಕ ಜನಪರ ಶಕ್ತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ವಿರೋಧಿಗಳು ಅಲ್ಲಲ್ಲಿ ಕೂಡಿಕೊಂಡು ಸಭೆಗಳನ್ನು ನಡೆಸುತ್ತಿದ್ದರೆ ಅಂತಹ ಸಭೆಗಳ ಬಗ್ಗೆ ಯಾವುದನ್ನು ನನ್ನ ಗಮನಕ್ಕೆ ತರಬೇಡಿ. ಬಿಜೆಪಿ ತತ್ವ ಸಿದ್ಧಾಂತದನ್ವಯ ಪಕ್ಷದ ಕಾರ್ಯಕ್ರಮಗಳನ್ನು ವರಿಷ್ಠರ ಸೂಚನೆ ಮೇರೆಗೆ ಮಾಡುತ್ತಿದ್ದೇವೆ.
ಸಂಘಟನೆಯನ್ನು ಅತ್ಯಂತ ಚುರುಕಿನಿಂದ ಕೈಗೊಳ್ಳಲಾಗುತ್ತಿದೆ. ಯಾರು ಎಷ್ಟೇ ಕುತಂತ್ರ ಮಾಡಿದರೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ಕಳೆದ ಬಾರಿಗಿಂತ ಈ ಬಾರಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸುತ್ತೇನೆಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಅರಭಾವಿ ಮತಕ್ಷೇತ್ರದ ಪ್ರಮುಖ 31 ಬೇಡಿಕೆಗಳ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಲಾಗಿದೆ. ಈ ಎಲ್ಲ ಬೇಡಿಕೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಈಡೇರಿಸುವ ಭರವಸೆ ಅವರು ನೀಡಿದ್ದಾರೆ. ಈಗ ಮತಕ್ಷೇತ್ರದ ಚುನಾವಣೆ ಪ್ರಣಾಳಿಕೆಯಲ್ಲಿ ಎಲ್ಲ ಕಾರ್ಯಕರ್ತರು ನೀರಾವರಿ ಕ್ಷೇತ್ರಕ್ಕೆ ಆಧ್ಯತೆ ನೀಡಬೇಕು. ಜಿಆರ್ಬಿಸಿ ಹಾಗೂ ಜಿಎಲ್ಬಿಸಿ ಕಾಲುವೆಗಳ ಆಧುನೀಕರಣಕ್ಕೆ ಎಲ್ಲರೂ ಒತ್ತಾಯಿಸಬೇಕು. ಈಗಾಗಲೇ ಜಿಎಲ್ಬಿಸಿಗೆ 650 ಕೋಟಿ ರೂ.ಗಳ ಸರ್ಕಾರ ಕಾಯ್ದಿರಿಸಿದೆ. ಅದರಂತೆ ಜಿಆರ್ಬಿಸಿ ಕಾಲುವೆಯ ಆಧುನೀಕರಣಕ್ಕೆ ಅನುದಾನ ನೀಡಿ ಕಾಲುವೆಗಳ ದುರಸ್ತಿಯನ್ನು ಕೈಗೊಳ್ಳುವಂತೆ ಕೋರಿದರು.
ಪ್ರತಿ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ಜನರಿಗೆ ಬಿಂಬಿಸುವ ಕೆಲಸ ಮಾಡಬೇಕು. ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಪಕ್ಷದ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಮಗದುಮ್ಮ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮುಂದಿನ ಚುನಾವಣೆಯಲ್ಲಿ ಲಕ್ಷ ಮತಗಳ ಅಂತರದಿಂದ ಜಯಗಳಿಸಲು ಕಾರ್ಯಕರ್ತರು ಈಗಿನಿಂದಲೇ ತಯ್ಯಾರಿ ನಡೆಸುವಂತೆ ಮನವಿ ಮಾಡಿಕೊಂಡರು.
ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ ವಹಿಸಿದ್ದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೂಳಪ್ಪ ಹೊಸಮನಿ, ಗುರುಪಾದ ಕಳ್ಳಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಬಸಗೌಡ ಪಾಟೀಲ, ಶಿವನಗೌಡ ಪಾಟೀಲ, ಬಸವಂತ ಕಮತಿ, ಹಣಮಂತ ತೇರದಾಳ, ಮಲ್ಲು ಪಾಟೀಲ, ಅಶೋಕ ಖಂಡ್ರಟ್ಟಿ, ಪರ್ವತಗೌಡ ಪಾಟೀಲ, ಬಾಬು ನಾಯ್ಕ, ಕೆಂಚನಗೌಡ ಪಾಟೀಲ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ರಾಮಣ್ಣಾ ಹಂದಿಗುಂದ, ಡಿ.ಜೆ. ಮುಲ್ತಾನಿ, ಸಿದ್ದಯ್ಯಾ ಹಿರೇಮಠ, ಪ್ರೇಮಾ ಬಂಢಾರಿ, ತಾಪಂ ಸದಸ್ಯರು, ಜನಪ್ರತಿನಿಧಿಗಳು, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಸ್ವಾಗತಿಸಿದರು. ರೇವಣ್ಣಾ ಕನಕಿಕೋಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾರತಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.