ಘಟಪ್ರಭಾ:ಸಹಕಾರಿ ಸಂಘಗಳು ರೈತರ ಬೆನ್ನಲುಬಾಗಿ ನಿಲ್ಲಬೇಕು : ಗುರುದೇವ ದೇವರು
ಸಹಕಾರಿ ಸಂಘಗಳು ರೈತರ ಬೆನ್ನಲುಬಾಗಿ ನಿಲ್ಲಬೇಕು : ಗುರುದೇವ ದೇವರು
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 29 :
ರೈತರು ದೇಶದ ಬೆನ್ನಲಬು. ಆದರೆ ಸಹಕಾರಿ ಸಂಘಗಳು ರೈತರ ಬೆನ್ನಲುಬಾಗಿ ನಿಲ್ಲಬೇಕು. ರೈತನು ದೇಶದ ಆಸ್ತಿ ಆತನನ್ನು ಯಾರು ಕಡೆಗಣಿಸಬಾರದು ಹಾಗೂ ರೈತನಾದವನು ಸಹಕಾರಿ ಬ್ಯಾಂಕಿನಿಂದ ಪಡೆದ ಸಾಲವನ್ನು ದುರುಪಯೋಗ ಪಡಿಸಿಕೊಳ್ಳದೆ ತಮ್ಮ ಅಭಿವೃದ್ಧಿಗಾಗಿ ಬಳಸಿಕೊಂಡು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿ ಸಹಕಾರಿ ಕ್ಷೇತ್ರವನ್ನು ಬೆಳೆಸಬೇಕೆಂದು ಕಮತೇನಟ್ಟಿ ಪ್ರಭುಲಿಂಗೇಶ್ವರ ಸಂಸ್ಥಾನ ಮಠದ ಗುರುದೇವ ದೇವರು ಹೇಳಿದರು.
ಅವರು ಶನಿವಾರದಂದು ದುಪದಾಳ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸಾಲ ವಿತರಣಾ ಸಮಾರಂಭದ ಸಾನಿದ್ಯವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡರಾದ ಅಂಬಿರಾವ್ ಪಾಟೀಲ ಉದ್ಘಾಟಿಸಿ ಪ್ರಾಥಮಿಕ ಕೃಷಿ ಪತ್ತಿನ ಸಂಘದಿಂದ ರೈತರಿಗೆ ನೀಡಲಾದ 2 ಕೋಟಿ 80 ಲಕ್ಷ ರೂಪಾಯಿಗಳ ಸಾಲವನ್ನು ವಿತರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಧುಪದಾಳ ಗಾ.ಪಂ ಮಾಜಿ ಅಧ್ಯಕ್ಷ ಎಸ್.ಐ.ಬೆನವಾಡಿ ಮಾತನಾಡಿದರು. ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಮಹೇಶ ಪಾಟೀಲ, ತಾ.ಪ.ಸದಸ್ಯ ಲಗಮಣ್ಣ ನಾಗಣ್ಣವರ, ಡಿ.ಎಮ್.ದಳವಾಯಿ, ಮನೀಷ ಶೆಟ್ಟಿ, ಹನಮಂತ ಗಾಡಿವಡ್ಡರ, ಸುಧೀರ ಜೋಡಟ್ಟಿ, ರಾಮಣ್ಣ ಹುಕ್ಕೇರಿ, ಪ್ರದೀಪ ಕುಲಕರ್ಣಿ ಕಾರ್ಯದರ್ಶಿ ಎಸ್.ಎಸ್.ನಾಯ್ಕ ಹಾಜರಿದ್ದರು.