ಗೋಕಾಕ:ನಧಾಪ ಪಿಂಜಾರ ಸಮಾಜ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ : ರಾಜ್ಯಾಧ್ಯಕ್ಷ ಎಚ್ ಜಲಿಲಸಾಬ ಆಗ್ರಹ
ನಧಾಪ ಪಿಂಜಾರ ಸಮಾಜ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ : ರಾಜ್ಯಾಧ್ಯಕ್ಷ ಎಚ್ ಜಲಿಲಸಾಬ ಆಗ್ರಹ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 29 :
30 ಲಕ್ಷ ಜನಸಂಖ್ಯೆ ಇರುವ ಅತ್ಯಂತ ಹಿಂದುಳಿದ ನಧಾಪ ಪಿಂಜಾರ ಸಮಾಜ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ನಧಾಪ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಎಚ್ ಜಲಿಲಸಾಬ ಹೇಳಿದರು
ರವಿವಾರದಂದು ನಗರದ ಸಮುದಾಯ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು
ಶೈಕ್ಷಣಿಕ ,ಸಾಮಾಜಿಕ ಹಾಗೂ ಆರ್ಥಿಕವಾಗಿ ಪಿಂಜಾರ ಸಮಾಜದ ಅಭಿವೃದ್ದಿ ಹೊಂದಬೇಕಾದರೆ ಸರಕಾರದ ಸಹಾಯ ಸಹಕಾರ ಅಗತ್ಯವಾಗಿದ್ದು, ಅಲೆ ಅಲೆಮಾರಿಯಂತೆ ಊರೂರು ಅಲೆಯುತ್ತಿರುವ ನಧಾಪ ಪಿಂಜಾರ ಸಮಾಜ ಶೆಯೋಭಿವೃದ್ದಿಗೆ ಕಳೆದ ಹಲವಾರು ವರ್ಷಗಳಿಂದ ಸರಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದರು ಸಹ ಸರಕಾರಗಳು ತಮ್ಮ ಬೇಡಿಕೆಗಳನ್ನು ಪೂರೈಸಲು ಹಿಂದೆಟ್ಟು ಹಾಕುತ್ತಾ ಬಂದಿವೆ. ಆದರೆ ಯಡಿಯೂರಪ್ಪ ಅವರ ಸರಕಾರ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಸಹಕರಿಸುತ್ತಿರುವ ಹಾಗೆ ನಮ್ಮ ನಧಾಪ ಪಿಂಜಾರ ಸಮಾಜವನ್ನು ಅಭಿವೃದ್ಧಿ ಪಡಿಸಲು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ನಜೀರ ಶೇಖ್ ಮಾತನಾಡಿ ಮೂಲತಃ ಅರಳೆ ಗಾದಿ ಉದ್ಯೋಗವನ್ನು ಅವಲಂಭಿಸಿರುವ ನಧಾಪ ಪಿಂಜಾರ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಬರುವ ಡಿಸೆಂಬರ್ 1 ರಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳಲ್ಲಿ ಪಿಂಜಾರ ಸಮಾಜ ಭಾಂಧವರು ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು , ಸಮಾಜ ಭಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ಎಚ್.ಇ ದಾದಾಕಲಂದರ , ಮೌಲಾಸಾಬ ನಧಾಪ, ಮುದ್ದಸರ್ ನಧಾಪ , ಜಾಕೀರ ನಧಾಪ ಸೇರಿದಂತೆ ಇತರರು ಇದ್ದರು.