ಗೋಕಾಕ:ಲಾಕ್ಡೌನ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದಕೊಂಡು ವ್ಯಾಪಾರ ಮಾಡಿ: ಎಮ್.ಎಮ್.ನದಾಫ
ಲಾಕ್ಡೌನ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದಕೊಂಡು ವ್ಯಾಪಾರ ಮಾಡಿ: ಎಮ್.ಎಮ್.ನದಾಫ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 15 :
ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆಯು ಬುಧವಾರದಂದು ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ ಮಾತನಾಡಿ, ಕೋವಿಡ್-19 ವೈರಸ್ ಸೋಂಕಿನ ಲಾಕ್ಡೌನ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದಕೊಂಡು ವ್ಯಾಪಾರ ಮಾಡಬೇಕು. ರೈತರಿಗೆ ಯಾವುದೇ ಕೃಷಿ ಪರಿಕರಗಳಾದ ರಸಗೊಬ್ಬರ, ಬೀಜ ಮತ್ತು ಕೀಟನಾಶಕಗಳ ಪೂರೈಕೆಯಲ್ಲಿ ತೊಂದರೆಯಾಗಬಾರದು. ಭಾರತ ಸರ್ಕಾರವು ಕೃಷಿ ಚಟುವಟಿಕೆಗಳಿಗೆ, ಕೃಷಿ ಪರಿಕರಗಳ ಸಾಗಾಟ ಮತ್ತು ದಾಸ್ತಾನು ಹಾಗೂ ವಿತರಣೆಗೆ ಯಾವುದೇ ನಿರ್ಬಂಧವಿಲ್ಲವೆಂದು ನಿರ್ದೇಶನ ನೀಡಿದ್ದಾರೆಂದು ಸಭೆಯಲ್ಲಿ ತಿಳಿಸಿದರು.
ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು, ಸರಿಯಾದ ಸಮಯಕ್ಕೆ ಪೂರೈಸಬೇಕು. ಅಲ್ಲದೆ ಪರವಾಣಿಗೆ ನವೀಕರಣ ಅವಧಿ ಮುಕ್ತಾಯವಾಗುವ 15ದಿನ ಮೊದಲು ನವೀಕರಣ ಮಾಡಿಸಿಕೊಳ್ಳಬೇಕು. ಯೂರಿಯಾ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಂತಹ ಕೃಷಿ ಪರಿಕರ ಮಾರಾಟಗಾರರ ವಿರುದ್ದ ಕ್ರಮ ಕೈಗೊಳಲಾಗುವುದು. ಮತ್ತು ಒಂದು ವೇಳೆ ಯಾವುದೇ ಮಾರಾಟಗಾರರು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಸಾಬೀತಾದಲ್ಲಿ ತಮ್ಮ ಪರವಾಣಿಗೆಯನ್ನು ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೆಶಕರು ಖಡಕ್ಕಾಗಿ ಸೂಚಿಸಿದರು.
ಇದೇ ಸಂದರ್ಭದಲ್ಲಿ 2020-21 ನೇ ಸಾಲಿನ ಮುಂಗಾರು ಹಂಗಾಮಿನ ಗೋಕಾಕ ಹಾಗೂ ಮೂಡಲಗಿ ತಾಲೂಕಿಗೆ ಬೇಕಾಗುವ ಬೀಜ ರಸಗೊಬ್ಬರ ಹಾಗೂ ಕೀಟನಾಶಕಗಳ ಬೇಡಿಕೆಯನ್ನು ಮಾರಾಟಗಾರರಿಂದ ಪಡೆಯಲಾಯಿತು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಲೀಲಾ ಕೌಜಗೇರಿ, ಎಸ್.ಬಿ.ಕರಗಣ್ಣಿ, ಶಂಕರ ಹಳದಮನಿ, ವಿದ್ಯಾ ಪಾಲಕಿ, ಶೈಲಜಾ ಬೆಳಂಕಿಮಠ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಬಾಬಾಜಿ ಭರಮಗೌಡ, ತಾಂತ್ರಿಕ ಕೃಷಿ ಅಧಿಕಾರಿಗಳು ಹಾಗೂ ಆತ್ಮ ಸಿಬ್ಬಂದಿಯವರು ಇದ್ದರು.