ಮೂಡಲಗಿ:15 ಮೀಟರ ರಸ್ತೆ ಅಗಲೀಕರಣ ಬದಲಾಗಿ 12 ಮೀಟರ ರಸ್ತೆಯನ್ನು ಅಗಲೀಕರಣ : ಶಾಸಕ ಬಾಲಚಂದ್ರ
15 ಮೀಟರ ರಸ್ತೆ ಅಗಲೀಕರಣ ಬದಲಾಗಿ 12 ಮೀಟರ ರಸ್ತೆಯನ್ನು ಅಗಲೀಕರಣ : ಶಾಸಕ ಬಾಲಚಂದ್ರ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮೇ 17 :
ಕಲ್ಲೋಳಿ ಪಟ್ಟಣದ ಸಾರ್ವಜನಿಕರ ಒತ್ತಾಸೆಯ ಮೇರೆಗೆ ಈಗಿರುವ ರಸ್ತೆ ಮಧ್ಯದಿಂದ 15 ಮೀಟರ ರಸ್ತೆ ಅಗಲೀಕರಣ ಬದಲಾಗಿ 12 ಮೀಟರ ರಸ್ತೆಯನ್ನು ಅಗಲೀಕರಣ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.
ಇಲ್ಲಿಗೆ ಸಮೀಪದ ಕಲ್ಲೋಳಿ ಪಟ್ಟಣದ ಹೊರವಲಯದಲ್ಲಿರುವ ಬಿಜೆಪಿ ಮುಖಂಡ ಈರಪ್ಪ ಕಡಾಡಿ ನಿವಾಸದಲ್ಲಿ ಗುರುವಾರ ರಾತ್ರಿ ಜರುಗಿದ ಮುಖಂಡರ ಹಾಗೂ ಪಟ್ಟಣ ಪಂಚಾಯತ ಸಮೀತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಜತ್ತ-ಜಾಂಬೋಟಿ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಜತ್ತ-ಜಾಂಬೋಟಿ ರಸ್ತೆ ನಿರ್ಮಾಣಕ್ಕೆ ಈ ಮೊದಲು ಸರ್ಕಾರ 280 ಕೋಟಿ ರೂ. ವೆಚ್ಚ ನಿಗದಿಪಡಿಸಿದೆ. ಈಗಾಗಲೇ ಪ್ರಗತಿಯಲ್ಲಿದೆ. ಕಲ್ಲೋಳಿ ಪಟ್ಟಣದ ಸಾರ್ವಜನಿಕರ ಬೇಡಿಕೆಯಂತೆ ರಸ್ತೆಯ ಮಧ್ಯದ ವಿಭಾಜಕವನ್ನು 12 ಮೀಟರ ಅಗಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ರಸ್ತೆ ನಿರ್ಮಾಣದಲ್ಲಿ ಅಂಗಡಿ ಮುಗ್ಗಟ್ಟು ಕಳೆದುಕೊಳ್ಳುವ ಸಣ್ಣಪುಟ್ಟ ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ರಸ್ತೆ ಅಭಿವೃದ್ಧಿಯಿಂದ ಕೆಲವರಿಗೆ ಅನ್ಯಾಯವಾಗಬಹುದು. ಆದರೂ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ರಸ್ತೆಯ ಮಧ್ಯದ ವಿಭಾಜಕ(ಡಿವೈಡರ್) ನಿರ್ಮಾಣಕ್ಕೆ ತಮ್ಮ ಸಹಕಾರ ನೀಡುವಂತೆ ಅವರು ಮನವಿ ಮಾಡಿಕೊಂಡರು.
ರಸ್ತೆ ಅಭಿವೃದ್ಧಿಯಿಂದ ಕಲ್ಲೋಳಿ ಪಟ್ಟಣ ಬಹು ಸುಂದರವಾಗಿ ಕಾಣುತ್ತದೆ. ಜೊತೆಗೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುತ್ತದೆ. ಅರಭಾವಿ ಮತಕ್ಷೇತ್ರದ ಮುಖ್ಯ ರಸ್ತೆಯ ಮೂಲಕ ಹಾಯ್ದು ಹೋಗುವ ಜತ್ತ-ಜಾಂಬೋಟಿ ರಸ್ತೆ ನಿರ್ಮಾಣದಿಂದ ಪಟ್ಟಣವು ಸುಧಾರಣೆಗೊಳ್ಳುತ್ತದೆ ಎಂದು ಹೇಳಿದರು.
ಹಿಡಕಲ್ ಜಲಾಶಯದಿಂದ ನೀರು ಹರಿಸಿ : ಹಿಡಕಲ್ ಜಲಾಶಯದಿಂದ ಜಿಎಲ್ಬಿಸಿ ಮತ್ತು ಜಿಆರ್ಬಿಸಿ ಕಾಲುವೆಗಳಿಗೆ ಮತ್ತು ಘಟಪ್ರಭಾ ನದಿಗೆ ಕುಡಿಯುವ ನೀರಿಗಾಗಿ ನೀರನ್ನು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಆಗ್ರಹಿಸಿದರು.
ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಬೇಸಿಗೆಯ ಬವಣೆಯಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮೇ 24 ರಿಂದ ಘಟಪ್ರಭಾ ನದಿಗೆ ನೀರು ಬಿಡಲಾಗುತ್ತಿದೆ. ಈಗಾಗಲೇ ಹಿಡಕಲ್ ಜಲಾಶಯದಲ್ಲಿ 4.15 ಟಿಎಂಸಿ ನೀರು ಸಂಗ್ರಹವಿದೆ. ಘಟಪ್ರಭಾ ನದಿ ಜೊತೆ ಜಿಎಲ್ಬಿಸಿ ಮತ್ತು ಜಿಆರ್ಬಿಸಿ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನೀರನ್ನು ಹರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಪ್ರತಿದಿನ ತಲಾ 2000 ಕ್ಯೂಸೇಕ್ಸ್ನಂತೆ 5 ದಿನಗಳವರೆಗೆ ನೀರನ್ನು ಹರಿಸುವುದರಿಂದ ಈ ಕಾಲುವೆಗಳ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗುತ್ತದೆ. ತೆರೆದ ಬಾವಿ ಮತ್ತು ಕೊಳವೆ ಬಾವಿಗಳು ರಿಚಾರ್ಜ ಆಗುತ್ತವೆ. ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಉದ್ಭವಿಸಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಅರಣ್ಯ ಮತ್ತು ಪರಿಸರ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಬಸಗೌಡ ಪಾಟೀಲ, ಈರಪ್ಪ ಕಡಾಡಿ, ಕಾಂಗ್ರೇಸ್ ಮುಖಂಡ ಬಾಳಪ್ಪ ಬೆಳಕೂಡ, ಹಿರಿಯ ಸಹಕಾರಿ ಭೀಮಪ್ಪ ಕಡಾಡಿ, ಯುವ ಮುಖಂಡರಾದ ಸುಭಾಸ ಕುರಬೇಟ, ರಾವಸಾಬ ಬೆಳಕೂಡ, ಪ್ರಭಾಶುಗರ ನಿರ್ದೇಶಕ ಮಹಾಂತೇಶ ಕಪ್ಪಲಗುದ್ದಿ, ತಾಪಂ ಮಾಜಿ ಸದಸ್ಯ ಅಶೋಕ ಮಕ್ಕಳಗೇರಿ, ತಾಪಂ ಮಾಜಿ ಅಧ್ಯಕ್ಷ ಉಮೇಶ ಬೂದಿಹಾಳ, ಬಸವಂತ ದಾಸನವರ, ವಸಂತ ತಹಶೀಲ್ದಾರ, ಬಸಪ್ಪ ಯಾದಗೂಡ, ಪಟ್ಟಣ ಪಂಚಾಯತಿ ಸದಸ್ಯರು, ಮುಖಂಡರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.