RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಸುರೇಶ ಅಂಗಡಿ ಕೇಂದ್ರದಲ್ಲಿ ಸಚಿವರಾಗುತ್ತಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ

ಗೋಕಾಕ:ಸುರೇಶ ಅಂಗಡಿ ಕೇಂದ್ರದಲ್ಲಿ ಸಚಿವರಾಗುತ್ತಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ 

ಸುರೇಶ ಅಂಗಡಿ ಕೇಂದ್ರದಲ್ಲಿ ಸಚಿವರಾಗುತ್ತಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 21 :

 

ಕ್ಷೇತ್ರದಲ್ಲಿ ಯಾರೂ ಎಷ್ಟೇ ಒತ್ತಡಗಳನ್ನು ಹೇರಿದರೂ ಯಾವುದೇ ಗೊಂದಲಕ್ಕೀಡಾಗದೇ, ನೀವೆಲ್ಲ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರಿಗೆ ಫರ್ಮಾನು ಹೊರಡಿಸಿದರು.
ಶನಿವಾರ ಸಂಜೆ ಇಲ್ಲಿಗೆ ಸಮೀಪದ ಮೆಳವಂಕಿ ಗ್ರಾಮದಲ್ಲಿ ಜರುಗಿದ ಮೆಳವಂಕಿ ಜಿಲ್ಲಾ ಪಂಚಾಯತ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಸುರೇಶ ಅಂಗಡಿ ಅವರಿಗೆ ನಮ್ಮ ಕ್ಷೇತ್ರದಿಂದ ಹೆಚ್ಚಿನ ಮತಗಳ ಮುನ್ನಡೆ ನೀಡಿ ಅವರನ್ನು ಲೋಕಸಭೆಗೆ ಕಳುಹಿಸಲು ಆಶೀರ್ವಾದ ನೀಡುವಂತೆ ಕೋರಿದರು.
ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷ ಆಡಳಿತ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿಸಿರುವ ಅವರು, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಘೋಷಣೆ ಮೂಲಕ ಭಾರತದ ಸರ್ವಾಂಗೀಣ ಏಳ್ಗೆಗೆ ಪ್ರಧಾನಿಯವರು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಭಾರತದ ನವ ನಿರ್ಮಾಣಕ್ಕೆ ಕೈ ಜೋಡಿಸುವ ಅವಕಾಶ ಮತ್ತೇ ನಮಗೆ ಬಂದಿದ್ದು, ಮೋದಿ ಅವರು ಮತ್ತೊಮ್ಮೆ ದೇಶದ ಬಲಿಷ್ಠ ನಾಯಕರಾಗಿ ಆಯ್ಕೆಯಾಗಲು ನಾವೆಲ್ಲರೂ ಬಿಜೆಪಿಗೆ ಮತ ಹಾಕಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಸಂಸದ ಸುರೇಶ ಅಂಗಡಿ ಅವರು ಕಳೆದ ಮೂರು ಅವಧಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿದ್ದಾರೆ. ಸುರೇಶ ಅಂಗಡಿ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಕಳುಹಿಸಿದರೆ ಬೆಳಗಾವಿ ಕ್ಷೇತ್ರ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನಿಚ್ಛಳ ಬಹುಮತ ಪಡೆದು ಅಧಿಕಾರ ರಚಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಅಂಗಡಿ ಸಚಿವರಾಗುತ್ತಾರೆಂದು ಬಾಲಚಂದ್ರ ಜಾರಕಿಹೊಳಿ ಅವರು ಭವಿಷ್ಯ ನುಡಿದರು.
ಭಾರತಕ್ಕೆ ವಿಶ್ವದಲ್ಲಿ ಮಾನ್ಯತೆ ದೊರಕಿಸಿಕೊಟ್ಟ ಮೋದಿ ಅವರನ್ನು ಮತ್ತೇ ಅಧಿಕಾರಕ್ಕೆ ತರಬೇಕಾದರೆ ಬಿಜೆಪಿಗೆ ಅಮೂಲ್ಯ ಮತ ನೀಡಿ. ಏ.23 ರಂದು ನಡೆಯುವ ಚುನಾವಣೆಯಲ್ಲಿ ಅಂಗಡಿಯವರ ಶೇಜ್ ನಂ. 1 ಇದ್ದು, ಸ್ವಚ್ಛ, ಪಾರದರ್ಶಕ, ಪ್ರಗತಿಪರ ಆಡಳಿತಕ್ಕಾಗಿ ಕಮಲ ಗುರ್ತಿನ ಮುಂದೆ ಬಟನ್ ಒತ್ತಿ ಅಂಗಡಿಯವರನ್ನು ಆರಿಸಿ ತರಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ರಾಮಣ್ಣಾ ಕಾಪಸಿ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಮುಖಂಡರಾದ ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ಅಲ್ಲಪ್ಪ ಕಂಕಣವಾಡಿ, ಸತ್ತೆಪ್ಪ ಬಬಲಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಲ್.ಎನ್. ಬೂದಿಗೊಪ್ಪ, ಮೆಳವಂಕಿ ಜಿಲ್ಲಾ ಪಂಚಾಯತ ಕ್ಷೇತ್ರದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: