RNI NO. KARKAN/2006/27779|Thursday, March 19, 2026
You are here: Home » breaking news » ಖಾನಾಪುರ:ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಸೇರ್ಪಡೆಗೆ : ಯುವ ಮೋರ್ಚಾ ವಿರೋಧ

ಖಾನಾಪುರ:ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಸೇರ್ಪಡೆಗೆ : ಯುವ ಮೋರ್ಚಾ ವಿರೋಧ 

ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ 
ಸೇರ್ಪಡೆಗೆ : ಯುವ ಮೋರ್ಚಾ ವಿರೋಧ
ಖಾನಾಪುರ ಜು 4 : ಶಾಂತತೆ ಮತ್ತು ಸಹಬಾಳ್ವೆಗೆ ಹೆಸರಾದ ಖಾನಾಪುರದ ಕನ್ನಡಿಗರು ಮತ್ತು ಮರಾಠಿ ಭಾಷಿಕರ ನಡುವೆ ರಾಜಕೀಯ ವಿಷಬೀಜ ಬಿತ್ತಿ ರಾಜ್ಯದ ವಿರುದ್ಧ ವಿವಾದಾತ್ಮಕ ಘೋಷಣೆ ಕೂಗುವ ನಾಡದ್ರೋಹಿ ಶಾಸಕ ಅರವಿಂದ ಪಾಟೀಲರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಬಿಜೆಪಿ ಯುವ ಮೋರ್ಚಾದ ರಾಜ್ಯ ಘಟಕ ತೀವ್ರವಾಗಿ ವಿರೋಧಿಸುತ್ತದೆ ಎಂದು ಪಕ್ಷದ ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.

ಪಟ್ಟಣದ ಶಾಂತಿನಿಕೇತನ ಶಾಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಮುಕ್ತ ಕಬ್ಬಡ್ಡಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರದ ಗದ್ದುಗೆ ಏರಲು ಅರವಿಂದ ಪಾಟೀಲರು ಅಮಾಯಕ ಮರಾಠಿಗರನ್ನು ತಮ್ಮ ಮತ ಗಳಿಕೆಯ ಅಸ್ತ್ರಮಾಡಿಕೊಂಡು ಅವರಿಗೆ ಗಡಿ ವಿವಾದದ ಬಗ್ಗೆ ಸುಳ್ಳು ನಂಬಿಕೆಗಳನ್ನು ಹುಟ್ಟಿಸಿದ್ದಾರೆ. ತಮಗೆ ಕನ್ನಡ ಮಾತನಾಡಲು ಬಂದರೂ ಸಭೆ ಸಮಾರಂಭಗಳಲ್ಲಿ ಮರಾಠಿ ಮಾತನಾಡಿ ಕನ್ನಡಿಗರ ಭಾವನೆಗಳನ್ನು ಕೆಣಕುತ್ತಿದ್ದಾರೆ. ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ರಾಜ್ಯದ ಜನರ ಸಹನೆ ಕೆಣಕುತ್ತಿದ್ದಾರೆ. ಇಂತಹ ನಾಡದ್ರೋಹಿ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪಕ್ಷದ ಕೆಲ ನಾಯಕರು ಮುಂದಾಗಿದ್ದಾರೆ ಎಂಬ ವದಂತಿಯಿದ್ದು, ಇದನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಯುವ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಅಭಿಜಿತ ಚಾಂದಿಲಕರ, ಕಾರ್ಯದರ್ಶಿ ವಿರೇಶ ದೇವರಮನಿ, ಮುಖಂಡರಾದ ಸುಭಾಶ ಗುಳಶೆಟ್ಟಿ, ವಿಠ್ಠಲ ಹಲಗೇಕರ, ಸಂಜಯ ಕಂಚಿ ಹಾಗೂ ಇತರರು ಇದ್ದರು.

Related posts: