ಖಾನಾಪುರ:ಖಾನಾಪುರದಲ್ಲಿ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಅಂಜಲಿ ಚಾಲನೆ
ಖಾನಾಪುರದಲ್ಲಿ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಅಂಜಲಿ ಚಾಲನೆ
ನಮ್ಮ ಬೆಳಗಾವಿ ಸುದ್ದಿ , ಖಾನಾಪೂರ ಜ 30 :
ಇಂದಿನಿಂದ ಫೆಬ್ರುವರಿ ೧6 ರವರೆಗೆ ತಾಲೂಕಿನಲ್ಲಿ ಜರುಗುವ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಸಂಸದೀಯ ಕಾರ್ಯದರ್ಶಿಗಳು ಹಾಗೂ ಖಾನಾಪೂರ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳಕರ ಅವರು ಗೊಪೂಜೆ ಮಾಡಿ ಚಾಲನೆ ನೀಡಿದರು.
ತಾಲೂಕಿನಲ್ಲಿ ಒಟ್ಟು 79850 ಜಾನುವಾರುಗಳಿಗೆ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಿದ್ದು ಮನೆಮನೆಗೆ ತೆರಳಿ ಲಸಿಕೆ ಹಾಕಲು 6 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದ ಮುಖ್ಯಸ್ಥರಾಗಿ ಪಶುವೈದ್ಯಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ತಂಡದ ವೇಳಾಪಟ್ಟಿಯನ್ನು ತಯಾರಿಸಿದ್ದು ದಿನವೊಂದಕ್ಕೆ 4 ರಿಂದ 5 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲಾಗುವದು. ಲಸಿಕೆಯ ಕಾರ್ಯಕ್ರಮಕ್ಕಾಗಿ ಅವಶ್ಯಕ ಸಾಮಗ್ರಿಗಳನ್ನು ಲಸಿಕೆದಾರರಿಗೆ ಪೂರೈಸಲಾಗಿದೆ ಎಂದು ಸಹಾಯಕ ನಿರ್ದೇಶಕ ಡಾ ಗುರುರಾಜ ಮನಗೂಳಿ ತಿಳಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳಕರ ಅವರು ಗ್ರಾಮೀಣ ಜನರಿಗೆ ತಿಳುವಳಿಕೆ ನೀಡಿ ಶೇಕಡಾ 100% ರಷ್ಟು ಲಸಿಕೆ ಹಾಕಲು ಎಲ್ಲ ಅಧಿಕಾರಿಗಳು ಮತ್ತು ಲಸಿಕೆ ಸಿಬ್ಬಂದಿಗೆ ಕರೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿ ಹಾಗೂ ತಾಲೂಕು ಲಸಿಕಾ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಯಕ್ಕುಂಡಿಯವರು ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಪಶುಸಂಗೋಪನೆ ಇಲಾಖೆಯ ಎಲ್ಲ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬೇಸಿಗೆಯಲ್ಲಿ ಜಾನುವಾರುಗಳಿಗೆ ಹಸಿರುಮೇವು ಕೊರತೆ ನೀಗಿಸಲು ಜಾನುವಾರು ಮತ್ತು ನೀರಾವರಿ ಹೊಂದಿದ ರೈತರಿಗೆ ಮೇವಿನ ಬೀಜಗಳ ಮಿನಿಕಿಟ್ ಗಳನ್ನು ಶಾಸಕರ ಅಮೃತ ಹಸ್ತದಿಂದ ವಿತರಿಸಲಾಯಿತು.