ಗೋಕಾಕ:ಚಿಕ್ಕನಂದಿ ಕ್ರಾಸ್ ನಲ್ಲಿ ಸಾರಿಗೆ ಇಲಾಖೆಯ ಬಸ್ ನಿಲುಗಡೆ ಮಾಡುವಂತೆ ಆಗ್ರಹಿಸಿ ಮನವಿ
ಚಿಕ್ಕನಂದಿ ಕ್ರಾಸ್ ನಲ್ಲಿ ಸಾರಿಗೆ ಇಲಾಖೆಯ ಬಸ್ ನಿಲುಗಡೆ ಮಾಡುವಂತೆ ಆಗ್ರಹಿಸಿ ಮನವಿ
ಗೋಕಾಕ ಜ 16 : ತಾಲೂಕಿನ ಚಿಕ್ಕನಂದಿ ಕ್ರಾಸ್ಗೆ ಸಾರಿಗೆ ಇಲಾಖೆಯ ಬಸ್ ನಿಲುಗಡೆ ಮಾಡುವಂತೆ ಆಗ್ರಹಿಸಿ ಬುಧವಾರದಂದು ಇಲ್ಲಿಯ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಘಟಕದ ವ್ಯವಸ್ಥಾಪಕರಿಗೆ ಕರ್ನಾಟಕ ಯುವ ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಚಿಕ್ಕನಂದಿ,ಹಿರೇನಂದಿ ಹಾಗೂ ಪಂಚನಾಯ್ಕನಹಟ್ಟಿ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಗೋಕಾಕ ನಗರಕ್ಕೆ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದು ಬಸ್ ಇಲ್ಲದ ಕಾರಣ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಕೆಲ ವಿದ್ಯಾರ್ಥಿಗಳು ಕಾಲೇಜು ವಿದ್ಯಾಭಾಸ ಬಿಟ್ಟು ಮನೆಯಲ್ಲಿ ಇದ್ದಾರೆ. ಚಿಕ್ಕನಂದಿ ಕ್ರಾಸ್ ಮೂಲಕ ಹಾಯ್ದು ಹೋಗುವ ಎಲ್ಲ ಘಟಕಗಳ ಬಸ್ ಗಳನ್ನು ಚಿಕ್ಕನಂದಿ ಕ್ರಾಸ್ ನಲ್ಲಿ ನಿಲ್ಲಿಸಬೇಕು. ಚಿಕ್ಕನಂದಿ ಕ್ರಾಸ್ ಬಳಿ ಕೋರಿಕೆ ಮೇರಿಗೆ ಬಸ್ ಗಳನ್ನು ನಿಲ್ಲಿಸುವ ಫಲಕಗಳನ್ನು ಹಾಕಬೇಕು. ಮಧ್ಯಾಹ್ನ 3 ಗಂಟೆಗೆ ಗೋಕಾಕದಿಂದ ಚಿಕ್ಕನಂದಿ,ಹಿರೇನಂದಿ ಹಾಗೂ ಪಂಚನಾಯ್ಕನಹಟ್ಟಿ ಗ್ರಾಮಗಳಿಗೆ ಹೆಚ್ಚುವರಿ ಬಸ್ನ್ನು ಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಯುವ ಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಪಣ್ಣಾ ಚೌಕಶಿ, ಜಿಲ್ಲಾಧ್ಯಕ್ಷ ವೀರಣ್ಣ ಸಂಗಮನವರ, ಚಿಕ್ಕನಂದಿ ಘಟಕ ಅಧ್ಯಕ್ಷ ಚೇತನ ಹತ್ತಿಕಟಗಿ, ಸಂಜು ಹತ್ತಿಕಟಗಿ, ಗಿರೀಶ ಗೌಡರ, ಶಿವಾನಂದ ಪೂಜೇರಿ, ಸುಭಾಸ ಸುಣಧೋಳಿ, ಯಲ್ಲಾಲಿಂಗ ಗೌಡರ,ಗೋಪಾಲ ಯಡ್ರಾಂವಿ ಸೇರಿದಂತೆ ಕರ್ನಾಟಕ ಯುವ ಸೇನೆಯ ನೂರಾರು ಕಾರ್ಯಕರ್ತರು ಇದ್ದರು.
