RNI NO. KARKAN/2006/27779|Monday, June 16, 2025
You are here: Home » breaking news » ಮೂಡಲಗಿ:ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ

ಮೂಡಲಗಿ:ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ 

ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ

ಮೂಡಲಗಿ ಅ 14 : ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಮುಂದಿರುವ ಗುರಿಯಾಗಿದ್ದು, ಪಕ್ಷಬೇಧ ಮರೆತು ತಾಲೂಕಿನ ಅಭಿವೃದ್ಧಿಗಾಗಿ ಹೊಸ ಮುನ್ನುಡಿಯನ್ನು ಬರೆಯೋಣ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಶನಿವಾರ ಸಂಜೆ ಜರುಗಿದ ಕಾರ್ಯಕರ್ತರ ಅಭಿನಂದನಾ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದ ಅವರು, ಚುನಾವಣೆಗಳು ಈಗಾಗಲೇ ಮುಗಿದಿದ್ದು, ಇನ್ನೇನಿದ್ದರೂ ನಮ್ಮ ಗಮನ ಅಭಿವೃದ್ಧಿಗಾಗಿ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಮೂಡಲಗಿ ತಾಲೂಕನ್ನು ನಂದನವನವನ್ನಾಗಿ ಪರಿವರ್ತಿಸುವುದೇ ನನ್ನ ಧ್ಯೇಯವಾಗಿದೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆ ನಂತರ ಜರುಗಿದ ಮೂಡಲಗಿ ಪುರಸಭೆ ಚುನಾವಣೆಯಲ್ಲಿ ಮೂಡಲಗಿ-ಗುರ್ಲಾಪೂರ ಪಟ್ಟಣದ ಮತದಾರರು ತಮ್ಮ ಮೇಲಿಟ್ಟಿರುವ ಪ್ರೀತಿ-ವಿಶ್ವಾಸದಿಂದ ಈ ಚುನಾವಣೆಯಲ್ಲಿ ನಮಗೆ ಬಹುಮತ ಕಲ್ಪಿಸಿಕೊಟ್ಟಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ಈ ಚುನಾವಣೆ ನಡೆದರೂ ಕಳೆದ ವಿಧಾನಸಭೆ ಚುನಾವಣೆಗಿಂತ 4 ತಿಂಗಳ ಅವಧಿಯಲ್ಲಿ 5 ಸಾವಿರ ಮತದಾರರು ನಮ್ಮೊಂದಿಗೆ ಗುರುತಿಸಿಕೊಂಡಿದ್ದಾರೆ. ಇದರಿಂದ ಮೂಡಲಗಿಯಲ್ಲಿ ಭಾರಿ ಪರಿವರ್ತನೆಯಾಗಿ ಪುರಸಭೆಯಲ್ಲಿ ನಾವು ಅಧಿಕಾರ ಚುಕ್ಕಾಣಿ ಹಿಡಿಯಲು ಕಾರಣವಾಯಿತು. ನನ್ನ ಪ್ರಕಾರ 23 ರಲ್ಲಿ 18 ಸ್ಥಾನಗಳು ನಮಗೆ ಲಭಿಸಬೇಕಿತ್ತು. ಆದರೆ 15 ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುವ ನಮ್ಮ ಗುಂಪಿಗೆ ಇನ್ನೂ 3 ಸ್ಥಾನಗಳಲ್ಲಿ ಜಯ ಸಿಗಬೇಕಿತ್ತು. ಆದರೆ ನಮ್ಮೊಳಗಿನ ಗುಂಪುಗಾರಿಕೆಯಿಂದಲೇ ನಮ್ಮ ಮೂವರು ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.
ವಿರೋಧಿಗಳಿಗೆ ಪಾಶ್ಚಾತಾಪ : ಕಳೆದ ಮೇ 12 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧಿಗಳು ಬಾಲಚಂದ್ರ ಜಾರಕಿಹೊಳಿ ಅವರು ಸೋಲುತ್ತಾರೆಂದು ಹೇಳಿಕೊಂಡು ಓಡಾಡುತ್ತಿದ್ದರು. ಸಾಕಷ್ಟು ವದಂತಿಗಳನ್ನು ಹಬ್ಬಿಸುತ್ತಿದ್ದರು. ಆದರೆ ಈ ಚುನಾವಣೆಯಲ್ಲಿ 47 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿದ್ದಂತೆಯೇ ಇನ್ನು ನಮಗೆ ಬಾಲಚಂದ್ರ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ವಿರೋಧಿಗಳು ಬಂದಿದ್ದಾರೆ. ಎಲ್ಲಿಯವರೆಗೆ ದೇವರು, ತಾಯಿ-ತಂದೆ ಹಾಗೂ ಜನರ ಆಶೀರ್ವಾದ ನನ್ನ ಮೇಲಿರುತ್ತದೆಯೋ ಅಲ್ಲಿಯವರೆಗೆ ನನಗೆ ಸೋಲೇ ಎಂಬುದು ಇಲ್ಲ. ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ. ಇದನ್ನು ಅಹಂದಿಂದ ಹೇಳುತ್ತಿಲ್ಲ. ಜನರು ನನ್ನ ಮೇಲಿಟ್ಟಿರುವ ಅಗಾಧವಾದ ಪ್ರೀತಿ-ವಿಶ್ವಾಸದಿಂದ ಹೇಳುತ್ತಿದ್ದೇನೆ. ಕ್ಷೇತ್ರದ ಮತದಾರರ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದೆ ಎಂದು ಅವರು ಹೇಳಿದರು.
ಬಸವಣ್ಣ ನಮಗೆ ಪ್ರೇರಣೆ : 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮಾದರಿಯಲ್ಲಿ ಒಂದುವರೆ ದಶಕದಿಂದ ಅರಭಾವಿ ಕ್ಷೇತ್ರದಲ್ಲಿ ಸರ್ವ ಸಮಾಜದವರನ್ನು ಒಗ್ಗೂಡಿಸಿ ಅವರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಥಾನಮಾನ ನೀಡಲಾಗಿದೆ. ಎಂದಿಗೂ ಜಾತಿ ಆಧಾರದಲ್ಲಿ ರಾಜಕೀಯ ಮಾಡಿಲ್ಲ. ಎಲ್ಲರೂ ನನ್ನವರು ಎಂಬ ಬಸವಣ್ಣನವರು ಬೋಧಿಸಿದ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ಸಹೋದರತ್ವ ಭಾವನೆಯಿಂದ ನಡೆಯುತ್ತಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಹಶೀಲ್ದಾರ ನಿಯುಕ್ತಿ : ಮೂಡಲಗಿ ತಾಲೂಕಿಗೆ ವಿವಿಧ ಇಲಾಖೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹಂತ-ಹಂತವಾಗಿ ನೇಮಕ ಮಾಡಿಸಲಾಗುವುದು. ಮೂಡಲಗಿಗೆ ಪೂರ್ಣ ಪ್ರಮಾಣದ ತಹಶೀಲ್ದಾರ ಅವರನ್ನು ನಿಯುಕ್ತಿಗೊಳಿಸಲು ಪತ್ರ ಬರೆಯಲಾಗಿದೆ. ಇಷ್ಟರಲ್ಲಿಯೇ ತಹಶೀಲ್ದಾರ ಅವರು ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಮಠಕ್ಕೆ ಭೇಟಿ : ಇದಕ್ಕೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಥಳೀಯ ಶಿವಬೋಧರಂಗ ಮಠಕ್ಕೆ ಭೇಟಿ ನೀಡಿ ಶ್ರೀಪಾದಬೋಧ ಸ್ವಾಮಿಗಳ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದ ಸ್ವಾಮಿಗಳು ಮೂಡಲಗಿ ಹೊಸ ತಾಲೂಕಿನ ಅಭಿವೃದ್ಧಿಗಾಗಿ ಹಲವು ಉಪಯುಕ್ತ ಸಲಹೆಗಳನ್ನು ನೀಡಿದರು.
ಮುಖಂಡರಾದ ಡಿ.ಬಿ. ಪಾಟೀಲ, ವೀರಣ್ಣಾ ಹೊಸೂರ, ನಿಂಗಪ್ಪ ಫಿರೋಜಿ, ಅಪ್ಪಾಸಾಬ ಹೊಸಕೋಟಿ, ಬಸವಪ್ರಭು ನಿಡಗುಂದಿ, ಅಜೀಜ ಡಾಂಗೆ, ರವಿ ಸಣ್ಣಕ್ಕಿ, ಸಂತೋಷ ಸೋನವಾಲ್ಕರ, ಭೀಮಶಿ ಸಣ್ಣಕ್ಕಿ, ವಿಜಯ ಸೋನವಾಲ್ಕರ, ಮಲೀಕ ಹುಣಶ್ಯಾಳ, ಪುರಸಭೆಯ ನೂತನ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಆಯಾ ಸಮಾಜಗಳ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: