ಗೋಕಾಕ:ಖ್ಯಾತ ಅಂತರ್ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಮುರಗೋಡ (ಭೀ.ಮು) ಇನ್ನಿಲ್ಲ
ಖ್ಯಾತ ಅಂತರ್ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಮುರಗೋಡ (ಭೀ.ಮು) ಇನ್ನಿಲ್ಲ
ಗೋಕಾಕ ಅ 5 : ಖ್ಯಾತ ಅಂತರ್ ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಫಕೀರಪ್ಪ ಮುರಗೋಡ( 82) ಇವರು ದಿ.5ರಂದು ಸಂಜೆ 5.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಮುರಗೋಡರು ಆಸ್ಪತ್ರೆಗೆ ದಾಖಲಾಗಿದ್ದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಭೀಮರಾವ್ ಅವರ ಅಂತ್ಯಕ್ರೀಯೆಯು ಗೋಕಾಕ ನಗರದಲ್ಲಿ ದಿ.6ರಂದು ಮಧ್ಯಾಹ್ನ 12 ಗಂಟೆಗೆ ಹರಳಯ್ಯ ಸಮಾಜದ ರುದ್ರಭೂಮಿಯಲ್ಲಿ ಜರುಗಲಿದೆ. ದಿ.6ರಂದು ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪ್ರಾರ್ಥಿವ ಶರೀರದ ಸಾರ್ವಜನಿಕರ ಹಾಗೂ ಕಲಾವಿದರ, ಅಭಿಮಾನಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭೀಮರಾವ್ ಮುರಗೋಡರು ಕಲಾ ಜಗತ್ತಿನಲ್ಲಿ ತಮ್ಮದೇ ಆದ ಮಹತ್ವದ ಸ್ಥಾನಪಡೆದುಕೊಂಡಿದ್ದಾರೆ. ತಾವು ಚಿತ್ರಿಸಿದ ತೈಲವರ್ಣದ ಭಾವಚಿತ್ರಗಳು ರಾಷ್ಟ್ರಪತಿ ಭವನ, ಸಂಸತ್ ಭವನ, ಅಮೆರಿಕದ ಶ್ವೇತಭವನ ಹಾಗೂ ರಶಿಯಾದ ರಾಷ್ಟ್ರಪತಿ ಭವನ ಅಲಂಕರಿಸುವಂಥ ಸೌಭಾಗ್ಯ ಸಿದ್ಧಿಸಿದ್ದಾರೆ. ಇಂತಹ ಕಲೆ ಕೆಲವೇ ಕೆಲವು ಕಲಾವಿದರಿಗೆ ಮಾತ್ರ ದೇವರು ಕೊಡುಗೆಯಾಗಿ ನೀಡಿದ್ದಾನೆ ಎಂದರೆ ತಪ್ಪಾಗಲಾರದು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿಂದಿಕುರಬೇಟ ಕುಗ್ರಾಮದ ಬಡ ಶರಣ ಕುಟುಂಬದಲ್ಲಿ ಜನಿಸಿದ ಮುರಗೋಡ ಅವರು, ಬದುಕಿನ ಮೂಲಭೂತ ಮೌಲಿಕ ಗುಣಗಳಾದ ದೈನ್ಯತೆ, ನಮ್ರತೆ ಹಾಗೂ ದೀನ ದಲಿತರ ಸೇವೆಗಳನ್ನು ಮೈಗೊಡಿಸಿಕೊಂಡಿದ್ದಾರೆ. ತಂದೆ ಫಕೀರಪ್ಪ ಮುರಗೋಡ (ಶಾಲಾ ಮಾಸ್ತರ) ಹಾಗೂ ತಾಯಿ ಶ್ರೀಮತಿ ಯಲ್ಲವ್ವ ಮುರಗೋಡರಿಂದ ಮಾದರಿಯಾಗಿಟ್ಟುಕೊಂಡಿದ್ದು, ಮಹಾತ್ಮರ ಹಾಗೂ ಸಾಧುಸಂತರ ವಿವಿಧ ಆದರ್ಶಗಳನ್ನು ಬಸವಣ್ಣನವರ ಕಾಯಕ ತತ್ವವನ್ನು ಒಪ್ಪಿ ಪ್ರತಿದಿನ 18 ಗಂಟೆಗಳಿಗೂ ಹೆಚ್ಚು ಕಾಲ ಕಲಾ ಸಾಧನೆಯಲ್ಲಿ ತೊಡಗಿಸಿಕೊಂಡು ಸಾಧನೆ ಮೆರೆದಿದ್ದಾರೆ.
ಅಂತರಾಷ್ಟ್ರೀಯ ಚಿತ್ರಕಲಾವಿದ ತಮ್ಮ ಇಳಿಯ ವಯಸ್ಸಿನಲ್ಲಿಯೂ ಮೊದಲಿನಂತೆ ಕ್ರೀಯಾಶೀಲತೆ ಹೊಂದಿ ಕಲಾರಾಧಕರಾದನೆಯಲ್ಲಿ ತೊಡಗಿಸಿಕೊಂಡವರು.
ಕನ್ನಡ ಭಾರತಿ ಯಲ್ಲಿ ನಾಟಕ, ಚಲನಚಿತ್ರ, ಛಾಯಾಚಿತ್ರ, ಸಾಹಿತ್ಯೇತ್ಯಾದಿ ಹಲವು ಕಲಾಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದರೂ ಇವರ ತಪಸ್ಸಾಧನೆ ಪರಾಕಾಷ್ಠೆ ಮುಟ್ಟಿರುವುದು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಖ್ಯಾತಿಯನ್ನು ತಂದಿತ್ತಿರುವುದು ತೈಲವರ್ಣ ಭಾವಚಿತ್ರ,ಕಲೆ ಹಾಗೂ ಸೂಕ್ಷ್ಮ ತೈಲವರ್ಣ ಚಿತ್ರಕಲೆ.ಇವರು ಬರೆದ ತೈಲವರ್ಣ ಚಿತ್ರ ಹಾಗೂ ಇವರು ತಗೆದ ಛಾಯಾಚಿತ್ರವನ್ನು ಅಕ್ಕಪಕ್ಕದಲ್ಲಿಟ್ಟಾಗ ಯಾವುದು ನಿಜ ಯಾವುದು ಬರೆದಿದ್ದು ಎಂದು ಗುರುತಿಸುವುದೆ ಕಷ್ಟವಾಗುತ್ತದೆ.
ಇದರಿಂದ ಇವರ ಕಲಾಸಿದ್ಧಿ ಯಾವ ಮಟ್ಟವನ್ನು ತಲುಪಿದೆ ಎಂಬುದು ಹೊಗಳಲಸಾಧ್ಯ. ಭಾರತದ ಸುಮಾರು ಎಲ್ಲಾ ರಾಷ್ಟ್ರಗಳ ತೈಲವರ್ಣದ ಪೂರ್ಣ ಭಾವಚಿತ್ರಗಳಲ್ಲದೆ ದೇಶ ವಿದೇಶಗಳ ಮಹಾ ಪುರುಷರಾದ ಬಿಲ್ ಕ್ಲಿಂಟನ್, ಕೆನ್ನೆತ್ ಕೌಂಡ, ಫೋಪ್ ಜಾನ್ ಪೌಲ್-11, ರಾಜಕುಮಾರಿ ಡಯಾನಾ, ನೆಲ್ಸನ್ ಮಂಡೆಲಾ, ಶ್ರೀಮತಿ ಸುಬ್ಬುಲಕ್ಷ್ಮೀ, ಇಂದಿರಾಗಾಂಧಿ, ವಾಜಪೇಯಿ, ಲತಾ ಮಂಗೇಶಕರ್ ಮೊದಲಾದ ಗಣ್ಯರ ಜೀವಂತ ಅಚ್ಚನ್ನು ತಮ್ಮ ಕಲಾಕುಂಚದಿಂದ ಬಿಡಿಸಿದ್ದಾರೆ.
ಎದುರು ಎದುರು ಕುಳಿತಂತೆ ದಿಢೀರ್ ಚಿತ್ರರಚನೆ ಮಾಡುವ ಇವರ ಕಲಾಕೌಶಲ್ಯ ಎಂಥವರನ್ನೂ ವಿಸ್ಮಯಗೊಳಿಸದಿರಲಾರದು. ಇವರು ಸಣ್ಣ ಸಣ್ಣ ವಸ್ತುಗಳಾದ ನಾಣ್ಯ, ಕಪ್ಪೆಚಿಪ್ಪು, ದಂತದ ಚೂರು, ಉಂಗುರುದ ಹರಳು, ಧಾನ್ಯಗಳು ಕೊನೆಗೆ ತಮ್ಮ ಉದ್ದುದ್ದ ಉಗುರಿನ ಮೇಲ್ಮೈ ಮೇಲೆಯೂ ತಮ್ಮ ಕಲಾ ಪರಿಣತೆ ಮೂಡಿಸಿದ್ದಾರೆ.
ನಿಷ್ಪ್ರಯೋಜಕವೆಂದು ಬಿಸಾಡುವ ಕಸ, ಸಣ್ಣ ಪುಟ್ಟ ಚೂರುಗಳಿಗೂ ಜೀವ ತುಂಬಿ ಕಲೆಯ ಮೆರುಗನ್ನು ನೀಡಿದ್ದಾರೆ. ಇವರಿಗೆ ಇವರ ಕಲಾಪ್ರದರ್ಶನಗಳಿಂದ ಪ್ರಶಸ್ತಿಗಳು ಮನೆಯ್ನನು ಅಲಂಕರಿಸಿವೆ. 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೋಕಾಕದ ಶೂನ್ಯ ಸಂಪಾದನಮಠದಿಂದ ನೀಡಿದ ಕಾಯಕಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ಸಂದಿದೆ.