ಬೆಳಗಾವಿ:ಕುಂದಾ ನಗರಿಗೆ ತಟ್ಟಿದ ಬಂದ್ ಬಿಸಿ : ಬಸ್ ಸಂಚಾರ ಸ್ತಬ್ಧ
ಕುಂದಾ ನಗರಿಗೆ ತಟ್ಟಿದ ಬಂದ್ ಬಿಸಿ : ಬಸ್ ಸಂಚಾರ ಸ್ತಬ್ಧ
ಬೆಳಗಾವಿ ಸೆ 10 : ತೈಲ ಬೆಲೆ ಏರಿಕೆ ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದಗೆ ಕುಂದಾ ನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಬಸ್ ಸಂಚಾರ ಸ್ತಬ್ಧಗೊಂಡಿದೆ. ಸುತ್ತಲಿನ ಗ್ರಾಮಗಳಿಗೆ ನಿನ್ನೆ ರಾತ್ರಿ ಹೋಗಿದ್ದ ಬಸ್ಗಳು ಮಾತ್ರ ಬಸ್ ನಿಲ್ದಾಣಕ್ಕೆ ಬರುತ್ತಿವೆ. ಉಳಿದಂತೆ ಇಲ್ಲಿಂದ ಬಸ್ ಎಲ್ಲಿಯೂ ಹೊರಟಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಕೆಎಸ್ಆರ್ಟಿಸಿ ನೌಕರರ ಸಂಘ, ಲಾರಿ ಮಾಲೀಕರ ಹಾಗೂ ಚಾಲಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ.
ಕುಂದಾ ನಗರಿಯಲ್ಲಿ ಬೆಳಗಾವಿ-ಗೋಕಾಕ ರಾಜ್ಯ ಹೆದ್ದಾರಿ ತಡೆದು ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ಮಾಡಲಾಯಿತು. ತೈಲ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಹೆದ್ದಾರಿ ಮೇಲೆ ಮಾನವ ಸರಪಳಿ ನಿರ್ಮಿಸಿ, ಸಂಚಾರ ತಡೆದು ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.