ಗೋಕಾಕ:ಡಾ|| ಎಮ್ ಎನ್ ಮಳವಡೆ ಅವರಿಂದ ರೈತರಿಗೆ ರೋಗ ಬಾಧೆಗಳ ಕುರಿತು ಜಾಗೃತಿ ಕಾರ್ಯಕ್ರಮ
ಡಾ|| ಎಮ್ ಎನ್ ಮಳವಡೆ ಅವರಿಂದ ರೈತರಿಗೆ ರೋಗ ಬಾಧೆಗಳ ಕುರಿತು ಜಾಗೃತಿ ಕಾರ್ಯಕ್ರಮ
ಗೋಕಾಕ ಅ 2 : ಕೃಷಿ ಇಲಾಖೆ ಆತ್ಮ ಯೋಜನೆಯಡಿ ರೈತರಿಗೆ ಸೈನಿಕ ಹುಳು ಕುರಿತು ತಾಲೂಕಿನ ಬಳೋಬಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ|| ಎಮ್ ಎನ್ ಮಳವಡೆ ರೈತರಿಗೆ ಗೋವಿನಜೋಳ ಬೇಸಾಯ ಕ್ರಮ, ಕಬ್ಬು, ಅರಿಶಿಣ, ಕಾಯಿಪಲ್ಲೆ ಬೆಳೆಗಳ ಕೀಟ ಮತ್ತು ರೋಗ ಬಾಧೆಗಳ ಕುರಿತು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎ. ಡಿ.ಸವದತ್ತಿ ಅವರು ಮಾತನಾಡಿ, ರೈತರಿಗೆ ಕಬ್ಬಿನಲ್ಲಿ ಗೊಣ್ಣೆಹುಳು, ಗೋವಿನಜೋಳದಲ್ಲಿ ಲದ್ದಿ ಹುಳುವಿನ ನಿಯಂತ್ರಣದ ಸಲುವಾಗಿ ಕೀಟನಾಶಕಗಳನ್ನು ರೈತ ಸಂಪರ್ಕ ಕೇಂದ್ರ ಕೌಜಲಗಿ, ಅರಭಾಂವಿ ಮತ್ತು ಗೋಕಾಕ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಮತ್ತು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಲು ರೈತರಿಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಎಚ್.ಕೆ.ಜಮಾದಾರ, ಅವರು ಮಾತನಾಡಿ ಲದ್ದಿ ಹುಳುವಿಗೆ ರಾಮಬಾಣವಾದ ವಿಷಪಾಷಾಣ ತಯಾರಿಸುವ ವಿಧಾನವನ್ನು ಪ್ರತಿ ಎಕರೆಗೆ 2 ಕೆ.ಜಿ ಬೆಲ್ಲ 5 ಲೀಟರ ನೀರಿನಲ್ಲಿ ಕರಗಿಸಿ ಅದಕ್ಕೆ 250ಎಮ್.ಎಲ್ ಮೋನೋಕ್ರೋಟೋಪಾಸ್ ಕೀಟನಾಶಕ ಬೆರೆಸಿ ಈ ದ್ರಾವಣವನ್ನು 20ಕೆ.ಜಿ ಭತ್ತ ಅಥವಾ ಗೋಧಿ ತೌಡಿನೊಂದಿಗೆ ಮಿಶ್ರಣ ಮಾಡಿ ಈ ಮಿಶ್ರಣವನ್ನು ರಾತ್ರಿಯಿಡಿ ಕಳಿಯಲು ಬಿಟ್ಟು ಮರುದಿನ ಸಾಯಂಕಾಲ ಬೆಳೆಯ ಸುಳಿ ಹಾಗೂ ಎಲೆಗಳ ಮೇಲೆ ಎರೆಚಿದ್ದಲ್ಲಿ ಕೀಡೆಗಳು ವಿಷಪಾಷಾಣಕ್ಕೆ ಬೇಗನೆ ಆಕರ್ಶಿತಗೊಂಡು ತಿನ್ನುವುದರಿಂದ ಬಹುಬೇಗನೆ ಹತೋಟಿ ಸಾದ್ಯವಾಗುತ್ತದೆ ಎಂದು ರೈತರಿಗೆ ಮನವರಿಕೆ ಮಾಡಿದರು.
ಬಿ.ಎಸ್.ಕೊಳದೂರ ಅವರು ಮಾತನಾಡುತ್ತಾ ಕೀಟಭಾಧೆ ಕಂಡು ತಕ್ಷಣ ತುರ್ತಾಗಿ ಹಾಗೂ ಸಾಮೂಹಿಕವಾಗಿ ರೈತ ಬಾಂಧವರು ಹತೋಟಿ ಕ್ರಮ ಕೈಗೊಳ್ಳುವುದರಿಂದ ಕೀಟವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಛಾಯಾ ಪಾಟೀಲ ಇವರು ಆತ್ಮ ಯೋಜನೆಯ ಗುಂಪುಗಳ ರಚನೆ, ರೈತರ ತರಬೇತಿಗಳು, ಯಶೊಗಾಥೆಗಳ ಅನುಷ್ಠಾನದ ಕುರಿತು ರೈತರಿಗೆ ತಿಳಿಸಿದರು, ಹಾಗೂ ಕಾರ್ಯಕ್ರಮದಲ್ಲಿ ಪಂಚಾಯತಿ ಸದಸ್ಯರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಪೂರ್ಣಿಮಾ ಓಡ್ರಾಳೆ ಸ್ವಾಗತಿಸಿದರು, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ವಿನೋದ ಬಾಗಿಮನಿ ವಂದಿಸಿದರು,