ಗೋಕಾಕ:ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ಭಾವಿಸಿ : ಮುರುಘರಾಜೇಂದ್ರ ಮಹಾಸ್ವಾಮಿ

ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ಭಾವಿಸಿ : ಮುರುಘರಾಜೇಂದ್ರ ಮಹಾಸ್ವಾಮಿ
ಗೋಕಾಕ ಜೂ, 23 ;- ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ತಿಳಿದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಪೀಠದ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವಪರಿಸರ ದಿನಾಚರಣೆ ಹಾಗೂ ಪಾಲಕರ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡಲು ಈ ಸಂಸ್ಥೆ ಶ್ರಮಿಸುತ್ತಿದೆ. ಪಾಲಕರು ತಮ್ಮ ಮಕ್ಕಳ ಶಿಕ್ಷಣದತ್ತ ಹೆಚ್ಚಿನ ಗಮನ ನೀಡಿ, ಅವರಿಗೆ ಮನೆಗಳಲ್ಲಿ ಉತ್ತಮ ವಾತಾವರಣ ಕಲ್ಪಿಸಿ ಒಳ್ಳೆಯ ಸಂಸ್ಕಾರವನ್ನು ನೀಡುವಂತೆ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಈ ಸಂಸ್ಥೆಯಿಂದ ಉಚಿತ ಆಸ್ಪತ್ರೆ, ಬಡ ಮಕ್ಕಳಿಗಾಗಿ ಅನ್ನ ದಾಸೋಹವನ್ನು ಪ್ರಾರಂಭಿಸಲಾಗುವುದು.
ಪರಿಸರ ರಕ್ಷಣೆಯಿಂದ ಜೀವಿಗಳ ರಕ್ಷಣೆ ಸಾಧ್ಯ. ಜನತೆ ಪೌರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಪರಿಸರ ರಕ್ಷಣೆ ಹಾಗೂ ಯೋಗವನ್ನು ಆಚರಣೆಗೆ ತರುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್.ಕುಲಕರ್ಣಿ ಅವರು ಮಾತನಾಡುತ್ತ, ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣವನ್ನು ಸಾರ್ವಜನಿಕಗೊಳಿಸಿ ಹಲವಾರು ಯೋಜನೆಗಳೊಂದಿಗೆ ಸರ್ಕಾರ ಶ್ರಮಿಸುತ್ತಿದ್ದು, ಪಾಲಕರು ಇದರ ಸದುಪಯೋಗದಿಂದ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿರಿ ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ, ಉಪ ವಲಯ ಅರಣ್ಯಾಧಿಕಾರಿ ಎಚ್.ಎಸ್.ಇಂಗಳಗಿ, ಆಡಳಿತಾಧಿಕಾರಿ ಅಡಿವೇಶ ಗವಿಮಠ ಸೇರಿದಂತೆ ಪಾಲಕರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ಶಿಕ್ಷಕಿ ರೇಖಾ ಹೂಲಿ ಸ್ವಾಗತಿಸಿ, ವಂದಿಸಿದರು.