ಗೋಕಾಕ:ಕ್ಷೇತ್ರದ ಸರ್ವಾಂಗೀಣ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ : ಶಾಸಕ ಬಾಲಚಂದ್ರ

ಕ್ಷೇತ್ರದ ಸರ್ವಾಂಗೀಣ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ : ಶಾಸಕ ಬಾಲಚಂದ್ರ
ಗೋಕಾಕ ಮೇ 8 : ಅರಭಾಂವಿ ಕ್ಷೇತ್ರದ ವಿಕಾಸಕ್ಕೆ ಕಳೆದ 14 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ. ಅಭಿವೃದ್ದಿ ಕಾರ್ಯಗಳಲ್ಲಿ ಎಂದಿಗೂ ಯಾವ ಬೇಧ-ಭಾವ ಮಾಡಿಲ್ಲ, ಮುಂದೆಯೂ ಮಾಡುವದಿಲ್ಲ. ಎಲ್ಲ ಸಮುದಾಯಗಳನ್ನು ಒಗ್ಗಟ್ಟಿನಿಂದ ಒಂದುಗೂಡಿಸುವ ಮೂಲಕ ಸಾಮಾಜಿಕ ನ್ಯಾಯ ಪರಿಪಾಲನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಅರಭಾವಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸೋಮವಾರ ಸಂಜೆ ತಾಲೂಕಿನ ಕೌಜಲಗಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ, ಟಿಪ್ಪು ಸುಲ್ತಾನ ವೃತ್ತದಲ್ಲಿ ಮಾತನಾಡುತ್ತಿದ್ದ ಅವರು, ಎಂದಿಗೂ ಪಕ್ಷಪಾತ, ಹಾಗೂ ಜಾತಿಬೇಧ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
ಕೌಜಲಗಿ ಭಾಗಕ್ಕೆ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೋಟ್ಯಾಂತರ ರೂ ವೆಚ್ಚದ ನಾನಾ ಪ್ರಗತಿ ಕಾರ್ಯಗಳನ್ನು ಈಗಾಗಲೇ ಮಾಡಿದ್ದೇನೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ವಿವಿಧ ಸಮಾಜಗಳ ಬೇಡಿಕೆಗಳಿಗೆ ಈಗಾಗಲೇ ಸ್ಪಂದಿಸಲಾಗಿದೆ. ಜನರ ಹಾಗೂ ಕ್ಷೇತ್ರದ ಅಭಿವೃದ್ದಿಗೆ ನನ್ನ ಜೀವ ಮುಡಪಾಗಿಟ್ಟಿದ್ದೇನೆಂದು ಹೇಳಿದರು.
ಮರುಳಾಗಬೇಡಿ: ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿರುವಾಗ ವಿರೋಧ ಪಕ್ಷದವರು ಬಂದು ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ಕೇವಲ ನನ್ನನ್ನು ಟೀಕಿಸುವುದೊಂದೇ ಅವರ ಪ್ರಮುಖ ಅಜೆಂಡಾವಾಗಿದೆ. ಟೀಕಿಸುವುದರಿಂದ ಯಾವದೇ ಪ್ರಯೋಜನವಾಗುವದಿಲ್ಲ. ಅವರಿಗೆ ಕ್ಷೇತ್ರದ ಅಭಿವೃದ್ದಿಗಿಂತ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಾ, ಜನರನ್ನು ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕೇವಲ ಚುನಾವಣೆಗೊಮ್ಮೆ ಬಂದು ಹೋಗುವ ಇಂತವರಿಗೆ ತಕ್ಕ ಉತ್ತರ ನೀಡಿ. ದಿನನಿತ್ಯ ಸಾರ್ವಜನಿಕ ಅಹವಾಲುಗಳನ್ನು ನನ್ನ ಗೃಹ ಕಚೇರಿ ಸಿಬ್ಬಂದಿ ಸ್ವೀಕರಿಸಿ ಪರಿಹಾರ ಕಂಡುಕೊಳ್ಳುತ್ತಿದೆ. ನಾನು ಮಧ್ಯಾಹ್ನ 12 ರಿಂದ ರಾತ್ರಿ 3 ಗಂಟೆಯ ತನಕ ಸಾರ್ವಜನಿಕರನ್ನು ಭೇಟಿ ಮಾಡುತ್ತೇನೆ. ವಿರೋಧಿಗಳಂತೆ 15 ದಿವಸ ಕ್ಷೇತ್ರಕ್ಕೆ ಬಂದು ನಾಪತ್ತೆಯಾಗುವ ಜಾಯಮಾನ ನನ್ನದಲ್ಲ, ಇದನ್ನು ನಮ್ಮ ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು. ಟೀಕೆಗಳನ್ನು ಮಾಡುವ ಮುನ್ನ ಮೊದಲು ತಾವೇನೂ ಎಂಬುದನ್ನು ಅರಿತುಕೊಳ್ಳಬೇಕು. ಈ ಚುನಾವಣೆಯು ಧರ್ಮ ಮತ್ತು ಅಧರ್ಮದ ಮಧ್ಯೆ ನಡೆಯುವ ಕಾಳಗವಾಗಿದೆ. ಜನತೆ ಯಾವುದೇ ಮಾತಿಗೆ ಮರುಳಾಗದೇ ನನ್ನ ಮೇಲೆ ನಂಬಿಕೆಯನ್ನಿಟ್ಟು ಜನ ಸೇವೆಗಾಗಿ ಮತ್ತೊಮ್ಮೆ ಹರಿಸುವಂತೆ ಮತದಾರರಲ್ಲಿ ಕೋರಿದರು.
ಕಲ್ಮಡ್ಡಿ ಯೋಜನೆ ಅನುಷ್ಠಾನ: ಕೌಜಲಗಿ ಭಾಗದ ರೈತ ಸಮುದಾಯದ ಪ್ರಮುಖ ಬೇಡಿಕೆಯಾಗಿರುವ ಕಲ್ಮಡ್ಡಿ ಯಾತ ನೀರಾವರಿ ಯೋಜನೆ ಅನುಷ್ಠಾನ ಈಗಾಗಲೇ ಪ್ರಗತಿಯಲ್ಲಿದೆ. 128 ಕೋಟಿ ರೂಗಳ ವೆಚ್ಚದ ಕಾಮಗಾರಿಗೆ ಕೇವಲ ಸರ್ಕಾರದ ಅನುಮೋದನೆ ಮಾತ್ರ ಬಾಕಿ ಇದ್ದು, ಚುನಾವಣೆ ಮುಗಿದ ಬಳಿಕ 2 ತಿಂಗಳೊಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಕೌಜಲಗಿ ತಾಲೂಕು ರಚನೆಗೆ ಪ್ರಯತ್ನ: ಮುಂದಿನ ದಿನಗಳಲ್ಲಿ 40 ವರ್ಷಗಳ ಪ್ರಮುಖ ಬೇಡಿಕೆಯಾಗಿರುವ ಕೌಜಲಗಿ ತಾಲೂಕು ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಇದರ ಜೊತೆಗೆ ಗೋಕಾಕ ಪ್ರತ್ಯೇಕ ಜಿಲ್ಲಾ ರಚನೆಗೆ ಹೋರಾಟ ಮಾಡಲಾಗುವುದು. ಮೂಡಲಗಿ ತಾಲೂಕು ರಚನೆಯಲ್ಲಿ ನಾನೇ ಪ್ರಮುಖ ಪಾತ್ರ ವಹಿಸಿ ಹೊಸ ತಾಲೂಕು ಮಾಡಿಕೊಂಡು ಬಂದಿದ್ದೇನೆ. ಎಷ್ಟು ದಿನಗಳು ಕುಳಿತರೂ ವಿರೋಧಿಗಳಿಗೆ ತಾಲೂಕು ಮಾಡಲಿಕ್ಕೆ ಆಗುತ್ತಿರಲಿಲ್ಲ. ಮೂಡಲಗಿ ತಾಲೂಕು ರಚನೆಯ ಹೋರಾಟದಲ್ಲಿ ಕೆಲವರು ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡರು ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿದ್ದರಿಂದಲೇ ಮತ ಕೇಳುತ್ತಿದ್ದೇನೆ, ಬೇರೆಯವರಂತೆ ಟೀಕಿಸಿ ಮತ ಕೇಳುತ್ತಿಲ್ಲ, ಯಡಿಯೂರಪ್ಪನವರು ಈಚೆಗೆ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪಕ್ಷ ಅಧಿಕಾರಕ್ಕೆ ಏರಿದ 24 ಗಂಟೆಗಳಲ್ಲಿ ರೈತರ 1 ಲಕ್ಷ ರೂ ವರಗೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು. ಸುಭದ್ರ ಸರ್ಕಾರ ರಚನೆಗೆ ಹಾಗೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಸ್ ನಿಲ್ದಾಣದಿಂದ ಬಸವೇಶ್ವರ ಪೇಟೆ, ಕುಂದಣಗಾರ ರಸ್ತೆ ಮೂಲಕ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಎಮ್.ಆರ್.ಭೋವಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಲೋಕನ್ನವರ, ಗ್ರಾ.ಪಂ ಅಧ್ಯಕ್ಷ ನೀಲಪ್ಪ ಕಿವಟಿ ಮಾತನಾಡಿ, ಕೆಲವರು ಕ್ಷೇತ್ರದಲ್ಲಿ ಜಾತಿ ರಾಜಕೀಯ ಮಾಡುತ್ತಿದ್ದಾರೆ. ನಮಗೆ ಜಾತಿ ಮುಖ್ಯವಲ್ಲ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿರುವ ಹಾಗೂ ಬಸವಣ್ಣನವರ ಅನುಭವ ಮಂಟಪದ ಆಧಾರದಲ್ಲಿ ಸರ್ವ ಜನಾಂಗಕ್ಕೂ ಒಳಿತನ್ನು ಬಯಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯವನ್ನು ಮೆಚ್ಚಿ ನಾವೆಲ್ಲ ಅವರೊಂದಿಗೆ ಇದ್ದು ಆನೆಬಲವನ್ನು ತುಂಬೋಣವೆಂದು ಹೇಳಿದರು.
ಮುಖಂಡರಾದ ಅಶೋಕ ಪರುಶೆಟ್ಟಿ, ಎಸ್.ಆರ್.ಭೋವಿ, ಪರಮೇಶ್ವರ ಹೊಸಮನಿ, ಅಶೋಕ ಉದ್ದಪ್ಪನವರ, ಝಾಕೀರ ಜಮಾದಾರ, ಶಾಂತಪ್ಪ ಹಿರೇಮೇತ್ರಿ, ರಾಯಪ್ಪ ಬಳೋಲದಾರ, ಮಕ್ತುಂಸಾಬ ಖಾಜಿ, ಸಿದ್ದಪ್ಪ ಹಳ್ಳೂರ, ನಾರಾಯಣ ಅರಮನಿ, ಡಿ.ಜೆ.ಮುಲ್ತಾನಿ, ಸುಭಾಶ ಕೌಜಲಗಿ, ಅಶೋಕ ಹೊಸಮನಿ, ಬಸು ಹಿರೇಮಠ, ಶ್ರೀಶೈಲ್ ಗಾಣಿಗೇರ, ಮಂಜು ಸಣ್ಣಕ್ಕಿ, ರವೀಂದ್ರ ಶಾ, ಮಹಾಂತಪ್ಪ ಶಿವನಮಾರಿ, ಬಸವರಾಜ ಲೋಕನ್ನವರ, ಅಡಿವೆಪ್ಪ ದಳವಾಯಿ, ಮಹಾದೇವ ಬುದ್ನಿ, ಸೇರಿದಂತೆ ಅನೇಕ ಪ್ರಮುಖರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.