ಗೋಕಾಕ:ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ : ಶಾಸಕ ಬಾಲಚಂದ್ರ

ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ : ಶಾಸಕ ಬಾಲಚಂದ್ರ
ಗೋಕಾಕ ಮಾ 13 : ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ. ನಮ್ಮ ಕಳೆದುಹೋದ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಜಾತ್ರೆಗಳಲ್ಲಿ ಎಲ್ಲರೂ ಪಾಲ್ಗೊಂಡು ತನು-ಮನದ ಸೇವೆ ಸಲ್ಲಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಇತ್ತೀಚೆಗೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಜಾತ್ರೆಗಳಲ್ಲಿ ಭಾಗಿಯಾದರೆ ನಮ್ಮ ಮನಕ್ಕೆ ಸುಖ-ಶಾಂತಿ ಲಭಿಸುತ್ತದೆ. ದೇವರ ಕೃಪೆಗೆ ನಾವೆಲ್ಲರೂ ಪಾತ್ರರಾಗಬೇಕು ಎಂದು ಹೇಳಿದರು.
ಯಾತ್ರಿ ನಿವಾಸ : ಗೋಸಬಾಳದ ಮಾರುತಿ ದೇವಸ್ಥಾನದ ಯಾತ್ರಿ ನಿವಾಸ ನಿರ್ಮಾಣಕ್ಕೆ 50 ಲಕ್ಷ ರೂ. ಹಾಗೂ ಸಂಗೊಳ್ಳಿ ರಾಯಣ್ಣಾ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದರು.
ಸೋಲೇ ಎಂಬುದಿಲ್ಲ : ದೇವರ ಹಾಗೂ ಜನರ ಆಶೀರ್ವಾದ ಇರುವವರೆಗೂ ನನಗೆ ಸೋಲೇ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಸೋಲೇ ಎಂಬುದು ಇಲ್ಲವೇ ಇಲ್ಲ. ಬೆರಳೆಣಿಕೆಯಷ್ಟಿರುವ ಕೆಲ ವಿರೋಧಿಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಈಗ ಜನರ ನೆನಪಾಗುತ್ತಿದೆ. ಅಂತಹವರು ಏನೇನೋ ಗಾಳಿ ಸುದ್ಧಿಗಳನ್ನು ತೇಲಿ ಬಿಡುತ್ತಿರುತ್ತಾರೆ. ಅಂತಹ ವದಂತಿಗಳಿಂದ ನನ್ನ ಗೆಲುವಿಗೆ ಯಾವ ಪರಿಣಾಮವೂ ಬೀರುವುದಿಲ್ಲ. ಈಗಾಗಲೇ ನನ್ನ ಕಾರ್ಯಕರ್ತರು ನನ್ನ ಗೆಲುವಿಗೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲು ರಣತಂತ್ರ ಹೂಡುತ್ತಿದ್ದಾರೆ. ನನ್ನ ವಿರುದ್ಧ ಸ್ಪರ್ಧೆಗಿಳಿಯುವ ಅಭ್ಯರ್ಥಿಗಳು ತಮ್ಮ ಠೇವಣಿ ಉಳಿಸಿಕೊಳ್ಳಲು ಪ್ರಯತ್ನಿಸುವಂತೆ ಸವಾಲು ಹಾಕಿದ ಅವರು, ವಿರೋಧಿಗಳನ್ನು ಮನೆಗೆ ಕಳುಹಿಸುವ ಸ್ಪಷ್ಟ ಸೂಚನೆ ನೀಡಿದರು.
ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಅರಭಾವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ಸಲವೂ ರಾಜ್ಯದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವ ಮೂಲಕ ಹೊಸ ಇತಿಹಾಸ ದಾಖಲಿಸಲಿದ್ದಾರೆಂದು ಹೇಳಿದರು.
ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಸ್ವಾಮಿಗಳು, ಗ್ರಾಪಂ ಅಧ್ಯಕ್ಷ ಶಿವಲಿಂಗ ಬಳಿಗಾರ, ಗ್ರಾಪಂ ಮಾಜಿ ಅಧ್ಯಕ್ಷ ರಾಮಯ್ಯಾ ಮಠದ, ಗೌಡಪ್ಪ ಪಾಟೀಲ, ಸತ್ತೆಪ್ಪ ಹೊಸಟ್ಟಿ, ರಮೇಶ ದಳವಾಯಿ, ಬಾಳಪ್ಪ ಬುಳ್ಳಿ, ಸಿದ್ಧಾರೂಢ ಮಳ್ಳಿಕೇರಿ, ಬೆಟಗೇರಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಅಶೋಕ ಬಂಡಿವಡ್ಡರ, ಮುಂತಾದವರು ಉಪಸ್ಥಿತರಿದ್ದರು.