RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಸಾಂಸ್ಕೃತಿಕ ಕ್ಷೇತ್ರದಲ್ಲಿ ಗೋಕಾಕ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸುತ್ತಿರುವುದು ಶ್ಲಾಘನೀಯ : ಎಐಸಿಸಿ ಕಾರ್ಯದರ್ಶಿ ಸತೀಶ

ಗೋಕಾಕ:ಸಾಂಸ್ಕೃತಿಕ ಕ್ಷೇತ್ರದಲ್ಲಿ ಗೋಕಾಕ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸುತ್ತಿರುವುದು ಶ್ಲಾಘನೀಯ : ಎಐಸಿಸಿ ಕಾರ್ಯದರ್ಶಿ ಸತೀಶ 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿರುವ ಎಐಸಿಸಿ ಕಾರ್ಯದರ್ಶಿ ಸತೀಶ

ಸಾಂಸ್ಕೃತಿಕ ಕ್ಷೇತ್ರದಲ್ಲಿ ಗೋಕಾಕ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸುತ್ತಿರುವುದು ಶ್ಲಾಘನೀಯ : ಎಐಸಿಸಿ ಕಾರ್ಯದರ್ಶಿ ಸತೀಶ

ಗೋಕಾಕ ಮಾ 5: ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಗೋಕಾಕ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಎ.ಆಯ್.ಸಿ.ಸಿ. ಕಾರ್ಯದರ್ಶಿ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ರವಿವಾರದಂದು ಇಲ್ಲಿಯ ಕೆ.ಎಲ್.ಇ. ಯ ಶಾಲಾ ಆವರಣದಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ ದೇಶದಲ್ಲಿ ಪ್ರಥಮ ಪ್ರಯತ್ನವಾಗಿ ಗೋಕಾಕಿನ ಖ್ಯಾತ ಗಾಯಕ ರಿಯಾಜ ಚೌಗಲಾ ನಡೆಸಿಕೊಟ್ಟ ಸಿಂಪೋನಿ ಆರ್ಕೆಸ್ಟ್ರಾದ ಲೈವ್ ಗಾಯನ ಸಂಗೀತ ಸಮಾರಂಭದ ಘನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಂಫೋನಿ ಆಕೇಸ್ಟ್ರಾ ದೊಂದಿಗೆ ಲೈವ ಗಾಯನ ಮಾಡುತ್ತಿರುವ ಗಾಯಕ ರಿಯಾಜ ಚೌಗಲಾ

ಕಳೆದ ಸುಮಾರು ಎರಡು ದಶಕಗಳಿಂದ ವಿವಿಧ ರಂಗಗಳಲ್ಲಿ ಅಡಗಿರತಕ್ಕಂತಹ ಸೂಕ್ತ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದರಿಂದ ಇಂದು ಇಂತಹ ಐತಿಹಾಸಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿದೆ. ಗೋಕಾಕಿನ ಮಹ್ಮದರಫೀ ಎಂದೇ ಪದನಾಮವನ್ನು ಹೊಂದಿರುವ ರಿಯಾಜ ಚೌಗಲಾ ರವರು ಸಂಗೀತ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವುದು ಶ್ಲಾಘನೀಯ.

ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ರಾಮದುರ್ಗ ಶಾಸಕ ಅಶೋಕ್ ಪಟ್ಟಣ

ತಾನು ಬೆಳೆಯುವದರೊಂದಿಗೆ ಇನ್ನೂ ಹಲವಾರು ಪ್ರತಿಭಾವನ್ವಿತ ಕಲಾವಿದರನ್ನು ಬೆಳೆಸುವುದರೊಂದಿಗೆ ಇನ್ನೂ ಹೆಚ್ಚಿನ ಸೇವೆ ರಿಯಾಜರಿಂದ ಆಗಬೇಕಾಗಿದೆ. ಆ ದಿಶೆಯಲ್ಲಿ ಅವರು ಮತ್ತು ಅವರ ತಂಡದವರು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ವಹಿಸಿ ಮಾತನಾಡಿದ ಶೂನ್ಯ ಸಂಪಾದನಮಠದ ಮ.ನಿ.ಪ್ರ. ಮುರುಘರಾಜೇಂದ್ರ ಮಹಾಸ್ವಾಮಿಗಳು ಕಳೆದ ಎರಡು ದಶಕಗಳ ಹಿಂದೆ ಬ್ಯಾಂಡ್ ಕಂಪನಿಯಲ್ಲಿ ಹಾಡುವ ಒಬ್ಬ ಸಾಮಾನ್ಯ ಹುಡುಗ ಇಂದು ಸಂಗೀತ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವುದು ಗೋಕಾಕ ನಾಡಿನ ಹೆಮ್ಮೆ. ಸಂಗೀತದ ತವರು ಎಂದು ಕರೆಯಿಸಿಕೊಳ್ಳುತ್ತಿದ್ದ ಧಾರವಾಡ ನಗರವನ್ನು ಮೀರಿಸುವ ಮಟ್ಟಕ್ಕೆ ಗೋಕಾಕಿನ ಪ್ರತಿಭೆಗಳು ಆಯಾ ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೈಯುತ್ತಿದ್ದಾರೆ. ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ನಾವೆಲ್ಲ ಮಾಡಬೇಕೆಂದು ಶ್ರೀಗಳು ಹೇಳಿದರು.
ಸರ್ಕಾರದ ಮುಖ್ಯ ಸಚೇತಕ ರಾಮದುರ್ಗ ಶಾಸಕ ಅಶೋಕ ಪಟ್ಟಣ ಮಾತನಾಡಿ ರಾಜಕೀಯ ಜಂಟಾಟಗಳ ಮಧ್ಯೆ ಸ್ವಲ್ಪ ಮನೋಲ್ಲಾಸ ಹೊಂದಲು ನಾನು ಸಹ ಸಂಗೀತ ನುಡಿಸುವುದನ್ನು ಕಲಿತಿದ್ದೇನೆ. ಮುಂದೆ ನಡೆಯುವ ಚುನಾವಣೆಯಲ್ಲಿ ಏನೂ ಹೇಳಲು ಬರುವುದಿಲ್ಲ. ಅಧಿಕಾರ ಸಿಕ್ಕರೆ ಜನಸೇವೆ ಮಾಡುತ್ತೇನೆ. ಆಕಸ್ಮಾತ ಏನಾದರೂ ಏರುಪೇರಾದರೆ ಯಾವುದಾದರೂ ಆರ್ಕೆಸ್ಟ್ರಾ ತಂಡ ಸೇರಿ ಸಂಗೀತ ನುಡಿಸುತ್ತೇನೆ ಎಂದು ಗೇಲಿ ಮಾಡಿ ಸಭೀಕರನ್ನು ನಗೆಗಡಲಿನಲ್ಲಿ ತೇಲಿಸಿ ಎಲ್ಲರ ಗಮನ ಸೆಳೆದರು.


ಸತೀಶ್ ಜಾರಕಿಹೊಳಿ ಅವರಿಂದ ಪ್ರೇರಣೆ ಪಡೆದು ನಾನು ಸಹ ಕಳೆದ ಎರಡು ವರ್ಷಗಳಿಂದ ರಾಮದುರ್ಗದಲ್ಲಿ ದೇಹದಾಡ್ರ್ಯ ಸ್ಪರ್ಧೆ ಮತ್ತು ಗಾಯನ ಸ್ಪರ್ಧೆಗಳನ್ನು ಹಮ್ಮಿಕೊಂಡು ರಾಮದುರ್ಗ ತಾಲೂಕಿನ ಯುವಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕಮಾನ್ಯ ಸಿಂಪೊನಿ ಆರ್ಕೆಸ್ಟ್ರಾದ ಸುಮಾರು 50 ಕ್ಕೂ ಹೆಚ್ಚು ಕಲಾವಿದರು ಹಳೆ ಕಾಲದ ವಿವಿಧ ವಾದ್ಯಗಳನ್ನು ನುಡಿಸಿದರು ರಿಯಾಜ ಚೌಗಲಾ ಸುಮಾರು 15 ಕ್ಕೂ ಹೆಚ್ಚು ಹಳೆ ಮತ್ತು ಹೊಸ ಗೀತೆಗಳನ್ನು ಹಾಡಿ ಜನಮನ ಸೆಳೆದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ ಮಾಜಿ ಶಾಸಕ ಶಾಮ್ ಘಾಟಗೆ, ಅಶೋಕ ಪೂಜೇರಿ, ಕ.ಸಾ.ಪ. ತಾಲೂಕಾಧ್ಯಕ್ಷ ಮಹಾಂತೇಶ ತಾವಂಶಿ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ, ಕೆ.ಎಲ್.ಇ. ನಿರ್ದೇಶಕ ಜಯಾನಂದ ಮುನ್ನೋಳಿ, ಶ್ರೀಮತಿ ಅನುಪಮಾ ಕೌಶಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಗಾಯಕ ರಿಯಾಜ ಚೌಗಲಾ ಅವರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಶಕೀಲ ಜಕಾತಿ ಮತ್ತು ಪ್ರಲ್ಹಾದ ಪಾಟೀಲ ನಿರೂಪಿಸಿ ವಂದಿಸಿದರು.

Related posts: