ಗೋಕಾಕ:ಯಾತ್ರಿ ನಿವಾಸಕ್ಕೆ 75 ಲಕ್ಷ ರೂ.ಗಳ ಅನುದಾನ ಮಂಜೂರು : ಶಾಸಕ ಬಾಲಚಂದ್ರ ಭರವಸೆ
ಯಾತ್ರಿ ನಿವಾಸಕ್ಕೆ 75 ಲಕ್ಷ ರೂ.ಗಳ ಅನುದಾನ ಮಂಜೂರು : ಶಾಸಕ ಬಾಲಚಂದ್ರ ಭರವಸೆ
ಗೋಕಾಕ ಫೆ 6 : ಬಲಭೀಮ ದೇವಸ್ಥಾನದ ಯಾತ್ರಿ ನಿವಾಸಕ್ಕೆ 75 ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಿಸುವುದಾಗಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಗೋಸಬಾಳ ಗ್ರಾಮದಲ್ಲಿ ರವಿವಾರ ರಾತ್ರಿ ಬೀರಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರವಾಸೋದ್ಯಮ ಇಲಾಖೆಯಿಂದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ತಿಂಗಳೊಳಗೆ ಕಾಮಗಾರಿಗೆ ಮಂಜೂರಾತಿ ದೊರೆಯಲಿದೆ. ಗೋಸಬಾಳ ಬಲಭೀಮ ದೇವಸ್ಥಾನವು ಐತಿಹಾಸಿಕವಾಗಿದ್ದು, ಭಕ್ತರಿಗೆ ಅನುಕೂಲ ಕಲ್ಪಿಸಲು ಯಾತ್ರಿ ನಿವಾಸ ನಿರ್ಮಾಣವಾಗಲಿದೆ ಎಂದರು.
ಬೀರಸಿದ್ಧೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೂ ಮುಂದಿನ ದಿನಗಳಲ್ಲಿ ನೆರವು ಕಲ್ಪಿಸಿಕೊಡಲಾಗುವುದು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ಘಟಕ ಹಾಗೂ ಶಾಲೆಗೆ ಎರಡು ಹೊಸ ಕೊಠಡಿಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.
ಈ ಭಾಗಕ್ಕೆ ಅಗತ್ಯವಿರುವ ಕಲ್ಮಡ್ಡಿ ಯಾತ ನೀರಾವರಿ ಅನುಷ್ಠಾನಕ್ಕೆ ಬದ್ಧರಿರುವುದಾಗಿ ಹೇಳಿದ ಅವರು, ಈಗಾಗಲೇ ಸರ್ಕಾರದ ಬಳಿ ಪ್ರಸ್ತಾವನೆ ಇದೆ ಎಂದರು.
ಧರ್ಮವನ್ನು ನಂಬಿ ಬದುಕುತ್ತಿರುವ ನಾವುಗಳು ಎಲ್ಲ ಜಾತಿ-ಜನಾಂಗದವರು ದೇವರನ್ನು ಪೂಜಿಸುತ್ತಿದ್ದೇವೆ. ದೇವರಿಂದಲೇ ಎಲ್ಲವೂ ನಡೆಯುತ್ತಿದೆ. ಧರ್ಮವನ್ನು ನಾವು ಕಾಪಾಡಿದರೆ, ನಮ್ಮನ್ನು ಧರ್ಮ ಕಾಪಾಡುತ್ತದೆ ಎಂದು ಹೇಳಿದರು. ಹಿಡಕಲ್ ಜಲಾಶಯದಿಂದ ಫೆ.12 ರಿಂದ 20 ದಿನಗಳವರೆಗೆ ರೈತರ ಬೆಳೆಗಳಿಗಾಗಿ ನೀರು ಹರಿಸಲಾಗುವುದು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ತಪಸಿಯ ಸುರೇಶ ಮಹಾರಾಜರು, ಸುಣಧೋಳಿಯ ಶಿವಾನಂದ ಸ್ವಾಮಿಗಳು ವಹಿಸಿದ್ದರು.
ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಗೋಸಬಾಳ ಗ್ರಾಪಂ ಅಧ್ಯಕ್ಷ ಶಿವಲಿಂಗ ಬಳಿಗಾರ, ಗ್ರಾಪಂ ಮಾಜಿ ಅಧ್ಯಕ್ಷ ರಾಮಯ್ಯಾ ಮಠದ, ಸತ್ತೆಪ್ಪ ಹೊಸಟ್ಟಿ, ಬಾಳಪ್ಪ ಬುಳ್ಳಿ, ಗೌಡಪ್ಪ ನಾಯ್ಕರ, ರಮೇಶ ದಳವಾಯಿ, ಸಿದ್ಧಾರೂಢ ಮೆಳ್ಳಿಕೇರಿ, ನಿಂಗಪ್ಪ ಹೊಸಟ್ಟಿ, ಹನಮಂತ ಕೋಟಿ, ಮಾಯಪ್ಪ ಸಿಂಗಾಡಿ, ಶಿವಾನಂದ ಬುಳ್ಳಿ, ಮುಂತಾದವರು ಉಪಸ್ಥಿತರಿದ್ದರು.