RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಗೋಕಾಕ:ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ 

ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಗೋಕಾಕ ಜ 6: ಗೋಕಾಕ ತಾಲೂಕಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಭೆ ಇಂದು ಕೌಜಲಗಿ ಪಟ್ಟಣದಲ್ಲಿ ಜರುಗಿತು. ರವಿವಾರ ಫೆಬ್ರುವರಿ 4 ರಂದು ಜರುಗುವ ಸಮ್ಮೇಳನದ ರೂಪು-ರೇಷೆಗಳನ್ನು ಚರ್ಚಿಸಿ ಸಿದ್ಧಪಡಿಸಲಾಯಿತು.
ಪೂರ್ವ ಸಭೆಯ ಅಧ್ಯಕ್ಷತೆಯನ್ನು ಪಟ್ಟಣದ ಅರ್ಬನ್ ಬ್ಯಾಂಕ್ ಚೇರಮನ್ನರಾದ ಡಾ.ರಾಜೇಂದ್ರ ಯ. ಸಣ್ಣಕ್ಕಿ ಅವರು ವಹಿಸಿ ಮಾತನಾಡುತ್ತ ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಿರುವುದಕ್ಕೆ ಗೋಕಾಕ ಕಸಾಪ ಘಟಕಕ್ಕೆ ಧನ್ಯವಾದಗಳು. ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಮಹಾಲಿಂಗ ಮಂಗಿ ಅವರಿಗೆ ಅಭಿನಂದನೆ. ಸಾಂಸ್ಕಂತಿಕ ಪಟ್ಟಣ ಕೌಜಲಗಿಯಲ್ಲಿ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ಮಾಡೋಣ! ಈ ಭಾಗದಲ್ಲಿ ಕಲೆ-ಸಾಹಿತ್ಯ-ಸಂಸ್ಕಂತಿಗಾಗಿ ದುಡಿದವರನ್ನು ಸತ್ಕರಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಪಟ್ಟಣದ ಪ್ರಮುಖರೆಲ್ಲರೂ ಹಗಲಿರುಳು ಶ್ರಮಿಸಬೇಕೆಂದು ತಿಳಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಮಾತನಾಡಿ, ಕೌಜಲಗಿಯ ಜನ ಕಲೆ-ಸಾಹಿತ್ಯದ ಅಭಿಮಾನಿಗಳಾಗಿದ್ದಾರೆ. ಕುಂದಣಗಾರ, ಕೌಜಲಗಿ ನಿಂಗಮ್ಮ, ಜನಪದ ವಿದ್ವಾಂಸ ನಿಂಗಣ್ಣ ಸಣ್ಣಕ್ಕಿಯಂಥವರನ್ನು ಪಡೆದಿದೆ. ಇಂತಹ ಸಾಹಿತಿ-ಕಲಾವಿದರ ಊರಲ್ಲಿ ಕನ್ನಡ ಸಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ರಾಜಕಾರಣಿ ಹಾಗೂ ಕನ್ನಡ ಸಾಹಿತ್ಯಾಸಕ್ತರಾದ ಡಾ.ರಾಜೇಂದ್ರ ಸಣ್ಣಕ್ಕಿಯವರು ನೇತೃತ್ವ ವಹಿಸಿರುವುದು ಹೆಮ್ಮೆಯ ವಿಷಯ. ಸಮ್ಮೇಳನ ಯಶಸ್ವಿಗೊಳಿಸಲು ಗ್ರಾಮಸ್ಥರಲ್ಲಿ ಕೋರಿದರು.
ಗೋಕಾಕ ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಮಾತನಾಡಿ, ಸಮ್ಮೇಳನಕ್ಕೆ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರನ್ನು ಕರೆಸಬೇಕು. ಅದರ ಜವಾಬ್ದಾರಿಯನ್ನು ಸಣ್ಣಕ್ಕಿಯವರು ವಹಿಸಿಕೊಳ್ಳಬೇಕು. ಶಾಸಕರನ್ನು ಆಮಂತ್ರಿಸಲು ಕನ್ನಡ ಸಾಹಿತ್ಯ ಪರಿಷತ್ತು ಗೋಕಾಕ ಘಟಕ ನಿಮ್ಮ ಜೊತೆ ಬರುತ್ತದೆಂದು ಹೇಳಿದರು.
ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಡಾ.ರಾಜೇಂದ್ರ ಸಣ್ಣಕ್ಕಿ ಕಾರ್ಯಧ್ಯಕ್ಷರಾಗಿ ಶ್ರೀ ಎಂ.ಆರ್.ಭೋವಿ, ಉಪಾಧ್ಯಕ್ಷರಾಗಿ ಅಶೋಕ ಪರುಶೆಟ್ಟಿ ಹಾಗೂ ಅರವಿಂದ ದಳವಾಯಿ ಅವರನ್ನು ನೇಮಿಸಲಾಯಿತು. ಊರಿನ ಪ್ರಮುಖರನ್ನು ಸಮಿತಿಯ ಸದಸ್ಯರಾಗಿ ನೇಮಕಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ, ಸಾಹಿತಿ ಪ್ರೊ.ರಾಜು ಕಂಬಾರ, ಸಿದ್ರಾಮ ದ್ಯಾಗಾನಟ್ಟಿ, ರಾಮಚಂದ್ರ ಕಾಕಡೆ, ರಾಜೇಶ್ವರಿ ಒಡೆಯರ, ಅಶೋಕ ಪರುಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ರಾಯಪ್ಪ ಬಳೋಲದಾರ, ಪಿ.ಕೆ.ಪಿ.ಎಸ್. ಅಧ್ಯಕ್ಷ ಮಹೇಶ ಪಟ್ಟಣಶೆಟ್ಟಿ, ನೀಲಪ್ಪ ಕೇವಟಿ ರವಿ ಪರುಶೆಟ್ಟಿ, ಮಂಜುನಾಥ ಸಣ್ಣಕ್ಕಿ, ಶ್ರೀಶೈಲ ಗಾಣಿಗೇರ, ಮಹಾಂತಪ್ಪ ಶಿವನಮಾರಿ, ಬಸವರಾಜ ಜೋಗಿ, ಹಬೀಬ ಮುಲ್ತಾನಿ, ಅಶೋಕ ಶಿವಾಪೂರ, ಸಿದ್ದಪ್ಪ ಬಿಸಗುಪ್ಪಿ, ಬಸವರಾಜ ಮರೆನ್ನವರ, ಶೌಕತಲಿ ಫರಾಸ, ಮಹಾಂತೇಶ ಹಣಗಂಡಿ, ಮನೋಹರ ಉದ್ದಪ್ಪನವರ, ಮಂಜುನಾಥ ಗೋವಿಂದಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.

Related posts: