ಗೋಕಾಕ:ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ : ನ್ಯಾಯವಾದಿ ವೀರನಗೌಡ ಪಾಟೀಲ
ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ : ನ್ಯಾಯವಾದಿ ವೀರನಗೌಡ ಪಾಟೀಲ
ಗೋಕಾಕ ಡಿ 12: ಲೋಕದಲ್ಲಿ ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ. ಸ್ವಾರ್ಥವು ಪರಿಧಿಯಲ್ಲಿದ್ದು, ಸಮಾಜಮುಖಿಯಾಗಿ ಮನುಕುಲದ ಉದ್ಧಾರಕ್ಕೆ ಬಾಳಿದ ಅನೇಕ ದಿಗ್ಗಜರನ್ನು ಭಾರತೀಯ ಸನಾತನ ಸಂಸ್ಕøತಿಯಲ್ಲಿ ಕಾಣಬಹುದಾಗಿದೆ ಎಂದು ಹಿರಿಯ ನ್ಯಾಯವಾದಿ ವೀರನಗೌಡ ಪಾಟೀಲರು ಹೇಳಿದರು.
ಅವರು ಇತ್ತಿಚಿಗೆ ನಗರದ ದಂಡಗಿ ನಿಸರ್ಗ ನಿಲಯದಲ್ಲಿ ಶ್ರೀ ಸರ್ವೇಶ್ವರ ಜಾನಪದ ಕಲಾಬಳಗ ಹಾಗೂ ಗೋಕಾಕ ಲೇಖಕಿಯರ ಸಂಘ, ಸಾಹಿತ್ಯ ಚಿಂತನ ಕಮ್ಮಟ ಇವುಗಳ ಸಂಯುಕ್ತಾಶ್ರಯದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.
ಗುರು-ಹಿರಿಯರನ್ನು ಗೌರವಿಸುವವರು ತಮ್ಮನ್ನು ತಾವೇ ಗೌರವಿಸಿಕೊಂಡತಾಗುತ್ತದೆ. ಪರಾರ್ಥದಲ್ಲಿ ಪರಮಾತ್ಮನನ್ನೂ ಕಾಣುವುದು ಜನಪದೀಯ ಸಂಸ್ಕøತಿಯಾಗಿದೆ ಎಂದರಲ್ಲದೇ ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ ಟ್ರಸ್ಟಿ ಶ್ರೀಮತಿ ಇಂದಿರಾ ಬಾಳಕೃಷ್ಣ ಅವರು ಇತ್ತೀಚೆಗೆ ದಿವಂಗತರಾದುದು ಜಾನಪದ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ತಂದೆ ನಾಡೋಜ ಡಾ| ಎಚ್. ಎಲ್. ನಾಗೇಗೌಡ ಅವರ ನಂತರ ಜಾನಪದ ಲೋಕವನ್ನು ಮುನ್ನಡೆಸುತ್ತಾ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿರುವದನ್ನು ಸ್ಮರಿಸಿದರು.
ಅಧ್ಯಕ್ಷತೆಯನ್ನು ಗೋಕಾಕ ಲೇಖಕಿಯರ ಸಂಘದ ಅಧ್ಯಕ್ಷೆ ಹಿರಿಯ ಸಾಹಿತಿ ಶ್ರೀಮತಿ ಶಕುಂತಲಾ ದಂಡಗಿಯವರು ಮಾತನಾಡಿ ಗೋಕಾಕ ಪರಿಸರದ ಡಾ| ನಿಂಗಣ್ಣಾ ಸಣ್ಣಕ್ಕಿ, ಡಾ| ಸಿ.ಕೆ.ನಾವಲಗಿ, ಡಾ| ಶ್ರೀರಾಮ ಇಟ್ಟನ್ನವರ, ಡಾ| ಚಂದ್ರಶೇಖರ ಕಂಬಾರ ಮುಂತಾದವರು ಜಾನಪದ ಲೋಕದ ಒಡನಾಟದಲ್ಲಿದ್ದವರು. ಕರ್ನಾಟಕದಾದ್ಯಂತ ಸೇವಾ ವಿಸ್ತ್ರತಿಯನ್ನು ಹೊಂದಿದ ಜಾನಪದ ಲೋಕದಲ್ಲಿ ಅದೆಷ್ಟೋ ತೆರೆಯ ಮರೆಯ ಪ್ರತಿಭೆಗಳು ಕೀರ್ತಿಯ ಬೆಳಕು ಕಂಡಿರುವುದು ಸ್ತುತ್ಯಾರ್ಹ ಎಂದರು.
ಜಾನಪದ ರಂಗ ಕಲಾವಿದ ಈಶ್ವರಚಂದ್ರ ಬೆಟಗೇರಿ ಅವರು 2014 ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಮಗೆ ನಾಗೇಗೌಡರ ತಂದೆ ಲಿಂಗೇಗೌಡರ ಹೆಸರಿನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನ ಮಾಡಿದ ಸಂದರ್ಭದಲ್ಲಿ ದಿ| ಶ್ರೀಮತಿ ಇಂದಿರಾ ಬಾಲಕೃಷ್ಣ, ಅಧ್ಯಕ್ಷರಾದ ಟಿ.ತಿಮ್ಮೆಗೌಡರು, ಆದಿ ಚುಂಚನಗಿರಿ ಪೀಠದ ಪೂಜ್ಯ ಶ್ರೀ ನಿರ್ಮಲಾನಂದ ಮಹಾಸ್ವಾಮಿಜೀಯವರೊಂದಿಗೆ ಮಾಜಿ ಸಚಿವೆ ಮೋಟಮ್ಮ ಮುಂತಾದವರು ಉಪಸ್ಥಿತರಿದ್ದುದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಿ.ವಾಯ್.ಕೊಳದೂರ, ಶಿವಲಿಂಗಪ್ಪ ಬಾಗೇವಾಡಿ, ಬಸವಲಿಂಗಪ್ಪ ಚೌಬಾರಿಯವರ ನ್ಯಾಯವಾದಿ ಬಲದೇವ ನಿಂಗಣ್ಣ ಸಣ್ಣಕ್ಕಿ, ಪ್ರೊ. ಶಿವಲೀಲಾ ಲಿಂಗರಾಜ ಪಾಟೀಲ ಇದ್ದರು.
ಕೊನೆಗೆ ಶ್ರೀಮತಿ ಇಂದಿರಾ ಬಾಲಕೃಷ್ಣರವರ ಆತ್ಮಕ್ಕೆ ಶಾಂತಿಯನ್ನು ಕೋರಿ ಮೌನ ಶೃದ್ಧಾಂಜಲಿಯನ್ನು ಸಮರ್ಪಿಸಲಾಯಿತು.
ಕಾರ್ಯಕ್ರಮವನ್ನು ರಾಜೇಶ್ವರಿ ವಡೇಯರ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಚಂದ್ರ ಬೆಟಗೇರಿ ನಿರೂಪಿಸಿದರು. ಶಿಕ್ಷಕ ಆನಂದ ಮಾಳೋದೆ ವಂದಿಸಿದರು.