ಗೋಕಾಕ:ಮಾರ್ಚ್ 4ರಂದು ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಮೈದಾನದಲ್ಲಿ ʼಹೋಳಿಹಬ್ಬʼ ಆಚರಣೆ

ಮಾರ್ಚ್ 4ರಂದು ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಮೈದಾನದಲ್ಲಿ ʼಹೋಳಿಹಬ್ಬʼ ಆಚರಣೆ
ಗೋಕಾಕ ಮಾ 1 : ನಾಗರಿಕ ಸಮಾಜ ಬಂಧು-ಭ್ರಾತೃತ್ವದೊಂದಿಗೆ ಒಗ್ಗೂಡಿ ಜೀವನದ ವಿವಿಧ ಸಂದರ್ಭಗಳಲ್ಲಿ ಪಾಲ್ಗೊಳ್ಳುವಿಕೆಗೆ ನೆರವಾಗಬಲ್ಲ ʼಹೋಳಿಹಬ್ಬʼ ಆಚರಣೆಗೆ ಇದೇ ಮೊದಲ ಬಾರಿಗೆ ಇಲ್ಲಿನ ಜೆಸಿಐ ಮತ್ತು ಜ್ಯೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇಂಡಿಯಾ ಸಂಸ್ಥೆ ಇದೇ ಮಾರ್ಚ್ 4ರಂದು ನಗರದ ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಮೈದಾನದಲ್ಲಿ ಮುಂಜಾನೆ 8.30ರ ಬಳಿಕ ಕುಟುಂಬದ ಸದಸ್ಯರೊಂದಿಗೆ ʼರಂಗ ಬರ್ಸೆʼ ಹೋಳಿಹಬ್ಬ ಆಚರಣೆಯನ್ನು ಹಮ್ಮಿಕೊಂಡಿದೆ.
ಗುರುವಾರ ಇಲ್ಲಿನ ಡಾಲರ್ಸ್ ಕಾಲೋನಿಯ ಡಾಲರ್ಸ್ ಕ್ಲಬ್ ಸಭಾ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಸಿಐ ಸಂಸ್ಥೆಯ ವಿಷ್ಣು ಲಾತೂರ ಅವರು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಹೆಬ್ಬಯಕೆಯ ಭಾಗವಾಗಿ ಸಂಸ್ಥೆಯು ಮಕ್ಕಳು ಆದಿಯಾಗಿ ಕುಟುಂಬದ ಎಲ್ಲರೂ ರಾಸಾಯನಿಕ ಮುಕ್ತ ನೈಸರ್ಗಿಕ ಬಣ್ಣ ಬಳಸಿ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುವ ಸದವಕಾಶ ಕಲ್ಪಿಸಿದೆ ಎಂದು ವಿವರಿಸಿದರು.
ʼರಂಗ ಬರ್ಸೆʼ ಆಚರಣೆ ಆರಂಭಕ್ಕೂ ಮುನ್ನ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಶೂನ್ಯ ಸಂಪಾದನಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಶಾಸಕ ರಮೇಶ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಕು. ಪ್ರಿಯಾಂಕಾ ಜಾರಕಿಹೊಳಿ, ಯುಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರತಿಕಾ ಗೋಷ್ಠಿಯಲ್ಲಿ ಜೆಸಿಐ ಸಂಸ್ಥೆ ಅಧ್ಯಕ್ಷ ಕಿರಣ ಗಂಗರಡ್ಡಿ, ಉಪಾಧ್ಯಕ್ಷ ಇಮ್ತಿಯಾಜ ದಫೇದಾರ, ನಿಕಟ ಪೂರ್ವ ಅಧ್ಯಕ್ಷ ಶೇಖರ ಉಳ್ಳೇಗಡ್ಡಿ, ಸಂಸ್ಥೆಯ ಮಹಿಳಾ ಘಟಕ ಅಧ್ಯಕ್ಷೆ ಮೀನಾಕ್ಷಿ ಸವದಿ, ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ, ನಿರ್ದೇಶಕರುಗಳಾದ ಕೃಷ್ಣಾ ಮುಳಗುಂದ, ಅನ್ನಪೂರ್ಣಾ ಉಳ್ಳೇಗಡ್ಡಿ, ಭಾಗೀರತಿ ನಂದಗಾಂವಿ, ನೇತ್ರಾವತಿ ಲಾತೂರ ಇತರರು ಇದ್ದರು.
