ಗೋಕಾಕ:ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿ : ಈರಣ್ಣ ಕಡಾಡಿ
ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿ : ಈರಣ್ಣ ಕಡಾಡಿ
ಗೋಕಾಕ ನ 8 : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಪ್ರತಿ ತಿಂಗಳು 20 ನೇ ತಾರೀಖು ಬಸ್ ದಿನ ಆಚರಿಸಲು ಯೋಚನೆ ಮಾಡಿರುವ ಸಂಗತಿ ಶ್ಲಾಘನೀಯವಾಗಿದೆ. ದ್ವಿಚಕ್ರ, ಕಾರ್, ಜೀಪ್ ಸೇರಿದಂತೆ ವಿವಿಧ ವಾಹನ ಹೊಂದಿದ ಎಲ್ಲರೂ ತಮ್ಮ ವಾಹನಗಳನ್ನು ಮನೆಗಳಲ್ಲಿ ಬಿಟ್ಟು ಅಂದು ಬಸ್ಗಳಲ್ಲಿ ಪ್ರಯಾಣ ಕೈಗೊಂಡರೆ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿದಂತಾಗುತ್ತದೆ ಎಂದು ಬೆಳಗಾವಿ ಜಿಪಂ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಅಭಿಪ್ರಾಯ ಪಟ್ಟಿದ್ದಾರೆ.
ಬುಧವಾರದಂದು ಪತ್ರಿಕೆ ಹೇಳಿಕೆ ನೀಡಿರುವ ಅವರು, ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಬಹಳ ಹದೆಗೆಟ್ಟಿದ್ದು, ಸೋಮವಾರ ನ.6 ರಿಂದ ಹೊಗೆ ಮತ್ತು ಮಂಜು ಮುಸಕಿದ ವಾತಾವರಣ ಉಂಟಾಗಿ ವಾಯು ಗುಣಮಟ್ಟ ಕುಸಿಯತೊಡಗಿದ್ದು, ಹೀಗಾಗಿ ದೆಹಲಿಯಲ್ಲಿ ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ ಕಾರಣ ರಾಜ್ಯದ ಬೆಳಗಾವಿ ಮಹಾನಗರದಲ್ಲಿ ವಾಹನ ಸಂಚಾರ ದಟ್ಟನೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದರಿಂದ ವಾಯು ಮಾಲಿನ್ಯ ಉಂಟಾಗುವ ಸಾಧ್ಯತೆ ಹೆಚ್ಚು, ಆದ್ದರಿಂದ ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ವಾಯವ್ಯ ಮಾಲಿನ್ಯ ಬಿಡಗಾಯಿಸುವ ಮುನ್ನ ಮಹಾನಗರ ಮತ್ತು ಜಿಲ್ಲೆಯಲ್ಲೆಡೆ ಬಸ್ ದಿನ ಅಭಿಯಾನದಂತಹ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ತಿಂಗಳಲ್ಲಿ 20 ನೇ ತಾರೀಖಿನಂದು ವಾಕಸಾಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವುದರಿಂದ ಪ್ರಕೃತಿ ಸಂರಕ್ಷಣೆ ಮಾಡುವ ಜೊತೆಗೆ ಇಂಧನ ಉಳಿತಾಯ ಮಾಡಿದಂತಾಗುತ್ತದೆ. ಅಲ್ಲದೆ ರಸ್ತೆಗಳ ಮೇಲೆ ವಾಹನ ಸಂಚಾರ ದಟ್ಟಣೆ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮಾಡುವಲ್ಲಿ ಬಸ್ ದಿನ ಅಭಿಯಾನಕ್ಕೆ ಸಾರ್ವಜನಿಕರು ಸಹಕರಿಸುವದು ಅತ್ಯಂತ ಅವಶ್ಯಕವಾಗಿದೆ. ಈ ಅಭಿಯಾನದ ಬಗ್ಗೆ ಜಿಲ್ಲೆಯ ಎಲ್ಲ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾಕರಸಾ ಸಂಸ್ಥೆ ಅಧಿಕಾರಿಗಳು ಪ್ರಯತ್ನಿಸಬೇಕೆಂದು ತಿಳಿಸಿದ್ದಾರೆ.