ಗೋಕಾಕ:ತಮಿಳು ನಟ ಕಮಲ್ ಹಾಸನ್ ಭಾವಚಿತ್ರ ಸುಟ್ಟು ಕರವೇ ಆಕ್ರೋಶ

ತಮಿಳು ನಟ ಕಮಲ್ ಹಾಸನ್ ಭಾವಚಿತ್ರ ಸುಟ್ಟು ಕರವೇ ಆಕ್ರೋಶ
ಗೋಕಾಕ ಮೇ 28 : ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದಿರುವ ತಮಿಳು ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ನಟ ಕಮಲ್ ಹಾಸನ್ ಭಾವಚಿತ್ರವನ್ನು ಸುಟ್ಟು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಕನ್ನಡಕ್ಕೆ ತಮಿಳು ಭಾಷೆ ಮೂಲ ಎಂದು ಹೇಳಿರುವ ನಟ ಕಮಲ್ ಹಾಸನ್ ಹೇಳಿಕೆ ತರವಲ್ಲ ತಮಿಳಿಗಿಂತಲೂ ಕನ್ನಡ ಬಹಳ ಹಳೆಯ ಭಾಷೆಯಾಗಿದ್ದು, ಕನ್ನಡಕ್ಕೆ ಎರೆಡು ಸಾವಿರ ವರ್ಷಗಳಕ್ಕಿಂತೂ ಹೆಚ್ಚು ವರ್ಷಗಳ ಇತಿಹಾಸವಿದೆ. ನಟ ಕಮಲ್ ಹಾಸನ್ ರಾಜಕೀಯ ಪಕ್ಷ ಕಟ್ಟಿರುವ ಕಾರಣ ಒಂದು ರಾಜ್ಯದ ಜನರ ಒಲೆಕೆಯ ಮಾತುಗಳನ್ನು ಆಡಿರುವುದು ಖಂಡನೀಯವಾಗಿದ್ದು, ಕನ್ನಡದ ಬಗ್ಗೆ ಮಾತನಾಡುವಾಗ ಬಾಯಿ ಬಿಗಿ ಹಿಡಿದು ಮಾತನಾಡಬೇಕು. ಅದನ್ನು ಬಿಟ್ಟು ಉದ್ಧಟತನದ ಹೇಳಿಕೆ ನೀಡಿದರೆ ಯಾರೇ ಆದರೂ ಕನ್ನಡಿಗರು ಸಹಿಸಿಕೊಳ್ಳುವುದಿಲ್ಲ ನಟ ಕಮಲ್ ಈ ಕೂಡಲೇ ಕನ್ನಡಿಗರ ಕ್ಷಮೆ ಕೋರಬೇಕು ಇಲ್ಲದಿದ್ದರೆ ಅವರ ನಟನೆಯ ಥಗಲೈಫ್ ಚಿತ್ರ ಯಾವುದೇ ಚಿತ್ರಮಂದಿರಕ್ಕೆ ಬಂದರೆ ಅದನ್ನು ನಡೆಯಲು ಕೊಡುವುದಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾದಿಕ್ ಹಲ್ಯಾಳ, ದೀಪಕ ಹಂಜಿ, ಮಹಾದೇವ ಮಕ್ಕಳಗೇರಿ, ಹನೀಫಸಾಬ ಸನದಿ, ನಿಜಾಮ ನದಾಫ, ಕೆಂಪಣ್ಣ ಕಡಕೋಳ, ಬಸು ಗಾಡಿವಡ್ಡರ, ಶಾಂತಿನಾಥ ಹುಳ್ಳಿ, ಮಲ್ಲು ಸಂಪಗಾರ, ಸಿದ್ದು ತಿಪ್ಪವಗೋಳ, ಕಲ್ಲೋಳೆಪ್ಪ ಗಾಡಿವಡ್ಡರ, ಅಬ್ಬು ಮುಜಾವರ, ರಮಜಾನ ಅಂಡಗಿ, ಗುರು ಮುನ್ನೋಳಿಮಠ, ಆನಂದ ಖಾನಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.