ಗೋಕಾಕ:ಅಕ್ಕಮಹಾದೇವಿಯ ಬದುಕು, ಬರಹ ಮನುಕುಲಕ್ಕೆ ದಾರಿದೀಪ : ಮಾತೋಶ್ರೀ ಶಿವಶರಣೆ ಸಂಗಮ್ಮ ತಾಯಿ

ಅಕ್ಕಮಹಾದೇವಿಯ ಬದುಕು, ಬರಹ ಮನುಕುಲಕ್ಕೆ ದಾರಿದೀಪ : ಮಾತೋಶ್ರೀ ಶಿವಶರಣೆ ಸಂಗಮ್ಮ ತಾಯಿ
ಗೋಕಾಕ ಏ 12 : ಅಕ್ಕಮಹಾದೇವಿಯ ಬದುಕು, ಬರಹ ಮನುಕುಲಕ್ಕೆ ದಾರಿದೀಪ ಎಂದು ಝಾಂಗಟಿಹಾಳ ಯಲ್ಲಾಲೀಂಗೇಶ್ವರ ಮಠದ ಮಾತೋಶ್ರೀ ಶಿವಶರಣೆ ಸಂಗಮ್ಮ ತಾಯಿ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಇಲ್ಲಿನ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆಯಲ್ಲಿ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 185ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಒಬ್ಬ ಮಹಿಳೆ ಉಡುತಡಿಯಿಂದ ಕಲ್ಯಾಣದವರೆಗೆ ನಡೆದುಕೊಂಡು ಬಂದದ್ದು ದೊಡ್ಡ ಸಾಹಸ. ಅನುಭವ ಮಂಟಪದಲ್ಲಿ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ನಡುವಿನ ಸಂವಾದ ಆಧ್ಯಾತ್ಮ ಜಗತ್ತಿನಲ್ಲಿ ಅಪರೂಪದ್ದು. ಅಕ್ಕಮಹಾದೇವಿ ಶ್ರೇಷ್ಠ ವಚನಕಾರ್ತಿ. ಅವರ ವಚನಗಳು ನಮ್ಮ ಬದಕನ್ನು ಹಸನಗೊಳಿಸುತ್ತವೆ ಎಂದ ಅವರು ನರಜನ್ಮವ ತೊಡೆದು ಹರ ಜನ್ಮವ ಮಾಡಿದ ಗುರುವೇ ಭವ ಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೇ ಭವಿ ಎಂಬುದ ತೊಡೆದು ಭಕ್ತ ಎಂದೆನಿಸಿದ ಗುರುವೇ ಚೆನ್ನ ಮಲ್ಲಿಕಾರ್ಜುನನ ತಂದೆನ್ನ ಕೈವಶಕೆ ಕೊಟ್ಟ ಗುರುವೇ ನಮೋನಮಃ ಎಂಬ ವಚನದ ಸಾಲು ಸುಖಿ ಜೀವನದ ಪಾಠವನ್ನು ತಿಳಿಸಿಕೊಡುತ್ತದೆ ಎಂದು ಹೇಳಿದರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಕೊಡಿಸಲು ಶ್ರಮಿಸಿದ್ದ ಅಕ್ಕಮಹಾದೇವಿ ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿ ಆಗಿದ್ದರು ಅವರ ಅವರು ಹಾಕಿ ಕೊಟ್ಟು ದಾರಿಯಲ್ಲಿ ನಾವಿಂದು ಸಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು.
ವೇದಿಕೆಯಲ್ಲಿ ಲಿಂಗಾಯತ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಭಾರತಿ ಮರೆನ್ನವರ, ಶ್ರೀಮತಿ ಶಕುಂತಲಾ ಶಿವಪುತ್ರಪ್ಪಾ ಕಟ್ಟಿ, ಸಿ.ಎಸ್.ಮೆಣಸಿನಕಾಯಿ ಉಪಸ್ಥಿತರಿದ್ದರು.