ಗೋಕಾಕ:ಬೀದಿ ನಾಯಿಗಳ ಕಾಟ ತಡೆದು, ನಗರೋತ್ಥಾನ ಯೋಜನೆಯಲ್ಲಿಕಾಮಗಾರಿಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರವೇ ಹೋರಾಟ

ಬೀದಿ ನಾಯಿಗಳ ಕಾಟ ತಡೆದು, ನಗರೋತ್ಥಾನ ಯೋಜನೆಯಲ್ಲಿಕಾಮಗಾರಿಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರವೇ ಹೋರಾಟ
ಗೋಕಾಕ ಅ 23 : ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಕಾಟವನ್ನು ತಡೆದು, ನಗರದ ನಾಕಾ ನಂ 1 ರಿಂದ ಡಿವಾಯ್ಎಸ್ಪಿ ಕಛೇರಿಯವರೆಗೆ ನಗರೋತ್ಥಾನ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಅವೈಜ್ಞಾನಿಕ ಗಟಾರುಗಳ ಕಾಮಗಾರಿಯನ್ನು ಸರಿಪಡಿಸುವಂತೆ ಆಗ್ರಹಿಸಿ ಬುಧವಾರದಂದು ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪೌರಾಯುಕ್ತ ಮಹಾಜನ್ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಕಳೆದ ಹಲವಾರು ತಿಂಗಳಿನಿಂದ ನಗರದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.
ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ.
ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ನಗರಸಭೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ. ಇಲ್ಲಿನ ಅಂಬೇಡ್ಕರ್ ನಗರ, ಗುರುವಾರ ಪೇಠ, ಹೊಸಪೇಟೆ ಗಲ್ಲಿ, ಜಲಾಲಗಲ್ಲಿ, ಕಿಲ್ಲಾ, ಬಾಂಬೆ ಚಾಳ, ಸೇರಿದಂತೆ ಇತರ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಿಂಧೆಕೂಟ ಮಾರ್ಗದ ರಸ್ತೆಗಳಲ್ಲಿ ಮಾಂಸದಂಗಡಿಗಳು ಇವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ಕಾಣಿಸುತ್ತವೆ. ಸಾರ್ವಜನಿಕ ಸ್ಥಳ, ಕಸದ ತೊಟ್ಟಿಯಲ್ಲಿ ತ್ಯಾಜ್ಯ ಹಾಕುವುದರಿಂದ ನಾಯಿಗಳು ಚೆಲ್ಲಾಟ ಹೆಚ್ಚಾಗಿದೆ. ನಾಯಿಗಳ ಹಾವಳಿ ತಡೆಯಲು ವರ್ಷದ ಹಿಂದೆಷ್ಟೆ ನಗರಸಭೆ ಅವರು ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದರು. ಇದರಿಂದ ಕೆಲ ತಿಂಗಳು ಜನರ ಬೀದಿ ನಾಯಿಗಳ ಕಾಟದಿಂದ ನಗರ ಮುಕ್ತವಾಗಿತ್ತು, ಆದರೆ ದೂರದ ಪ್ರದೇಶದಲ್ಲಿ ಬಿಟ್ಟು ಬಂದ ನಾಯಿಗಳು ಮತ್ತೆ ನಗರ ಪ್ರವೇಶಿಸಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ನಗರಾದ್ಯಂತ ಬೀದಿ ನಾಯಿಗಳ ಕಾಟ ಮತ್ತೆ ಶುರುವಾಗಿದೆ. ಇದರಿಂದ ಮನೆಗಳ ಮುಂದೆ ಮಕ್ಕಳು ಆಟವಾಡುವುದು ಕಷ್ಟವಾಗಿದೆ.
ನಗರದ ನಾಕಾ ನಂ 1 ರಿಂದ ಡಿವಾಯ್ಎಸ್ಪಿ ಕಛೇರಿವರೆಗೆ ಸುಮಾರು 18 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಗಟಾರುಗಳನ್ನು ರಸ್ತೆಯಿಂದ ಒಂದು ಪೂಟ್ ಎತ್ತರವಾಗಿ ನಿರ್ಮಾಣವಾಗಿದ್ದು, ರಸ್ತೆಯಲ್ಲಿ ಬಿಳುವ ಮಳೆನೀರು ಗಟಾರಿಗೆ ಹೋಗದೆ ರಸ್ತೆಯಲ್ಲಿಯೆ ನಿಂತು ರಸ್ತೆಯ ಹಾಳಾಗುವ ಪರಿಸ್ಥಿತಿ ಎದುರಾಗಿದೆ. ಗಟಾರು ನಿರ್ಮಾಣ ಕಾರ್ಯದಲ್ಲಿ ಎಷ್ಟು ಸಿಮೆಂಟ್ ಬಳಸಬೇಕು, ಎಷ್ಟು ಎಂ.ಎಂ ಸ್ಟಿಲ್ ಬಳಸಬೇಕು ಎಂಬಿತ್ಯಾದಿ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಮಾಡಲಾಗಿದ್ದು, ಕೆಲವು ಕಡೆ ಗಟಾರಿನ ಮೇಲೆ ಸಿಲ್ಯಾಫ್ ಹಾಕಲಾಗಿಲ್ಲ ಹೀಗೆ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಗಟಾರು ಕಾಮಗಾರಿಯನ್ನು ನಿಲ್ಲಿಸಿ ವರ್ಕ ಆರ್ಡರ್ ಪ್ರಕಾರ ಅದು ನಿರ್ಮಾಣವಾಗುತ್ತಿದೆಯೇ ಎಂದು ಪರಿಗಣಿಸಿ ತಪ್ಪಿಸ್ಥ ಗುತ್ತಿಗೆದಾರನ ಮೇಲೆ ಸೂಕ್ತ ಕಾನೂನು ಕ್ರಮವನ್ನು ತಗೆದುಕೊಂಡು ಅವರ ಪರವಾಣಿಗೆಯನ್ನು ರದ್ದು ಪಡಿಸಬೇಕು ಮತ್ತು ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಕಳುಹಿಸಬೇಕು ಎಂದು ಕರವೇ ಕಾರ್ಯಕರ್ತರು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ದೀಪಕ ಹಂಜಿ, ಮಹಾದೇವ ಮಕ್ಕಳಗೇರಿ, ಹನೀಫ್ ಸನದಿ, ಅಶೋಕ ಬಂಡಿವಡ್ಡರ, ಪಪ್ಪು ಹಂದಿಗುಂದ, ರಮೇಶ ಕಮತಿ, ಮಲ್ಲು ಸಂಪಗಾರ, ಬಸವರಾಜ ಗಾಡಿವಡ್ಡರ, ಕರೆಪ್ಪ ಹೊರಟ್ಟಿ, ಕೆಂಪಣ್ಣ ಕಡಕೋಳ, ಮಹಾನಿಂಗ ಪೂಜಾರಿ, ಮಹಾದೇವ ಹುಚ್ಚನವರ,ದುಂಡಪ್ಪ ಪಾಟೀಲ, ತುಕಾರಾಮ ಪಕ್ಕೆನ್ನವರ, ರಾಮ ಕುಡ್ಡಮ್ಮಿ, ರಾಮ ಕೊಂಗನೋಳಿ,ಮಂಜುನಾಥ್ ಜಾಗನೂರ, ಜಗದೀಶ್ ರಾಣಪ್ಪಗೋಳ,ಮಲ್ಲಪ್ಪ ತಲೆಪ್ಪಗೋಳ, ಶಿವಾನಂದ ಲಿಂಚಿನ್ನವರ, ಪರಶುರಾಮ ಹೆಗಡೆ, ಮಹಾದೇವ ವಗ್ಗನವರ, ಶಿವಾನಂದ ಖಂಡ್ರಿ, ರಾಜು ಪೂಜೇರಿ, ಬಾಳಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.