ಗೋಕಾಕ:ಕರ್ನಾಟಕ ಹೈಕೋರ್ಟ ನ್ಯಾಯಮೂರ್ತಿ ಆರ್.ಡಿ.ಹುದ್ದಾರ ಅವರಿಗೆ ತವರಿನ ಸತ್ಕಾರ

ಕರ್ನಾಟಕ ಹೈಕೋರ್ಟ ನ್ಯಾಯಮೂರ್ತಿ ಆರ್.ಡಿ.ಹುದ್ದಾರ ಅವರಿಗೆ ತವರಿನ ಸತ್ಕಾರ
ಗೋಕಾಕ ಅ 18 : ಮೂಲತಃ ತಾಲ್ಲೂಕಿನ ಮಲ್ಲಾಪೂರ ಪಿಜಿ / ಘಟಪ್ರಭಾ’ದ ನಿವಾಸಿ ಹಾಲಿ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾದ ರಾಮಚಂದ್ರ ಡಿ. ಹುದ್ದಾರ ಅವರಿಗೆ ತವರಿನ ಸತ್ಕಾರ ಇದೇ ಶನಿವಾರ ದಿ. 19ರಂದು ಸಂಜೆ 5.45ಕ್ಕೆ ಗೋಕಾಕ ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಕರ್ನಾಟಕ ಆಡಳಿತಾತ್ಮಕ ಪ್ರಾಧಿಕಾರದ ನ್ಯಾಯಿಕ ಸದಸ್ಯ ಎಸ್.ವೈ.ವಟವಟಿ ಮತ್ತು ಬೆಳಗಾವಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ.ಕುಡವಕ್ಕಲಿಗೆರ ಅವರನ್ನೂ ಸತ್ಕರಿಸಲಾಗುವುದು.
ಅಧ್ಯಕ್ಷತೆಯನ್ನು ಗೋಕಾಕ ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಕೋಟಗಿ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಇಲ್ಲಿನ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತ ಉಪಾಧ್ಯಕ್ಷ ವಿನಯ ಮಾಂಗಳೇಕರ ಮತ್ತು ಸದಸ್ಯ ಕೆ.ಬಿ.ನಾಯಿಕ ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಾಗಿ ಇಲ್ಲಿನ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ದೀಪಾ ಜಿ., 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಶಂಕರ ಕೆ.ಎಂ., ಪ್ರಧಾನ ದಿವಾಣಿ ನ್ಯಾಯಾಧೀಶ ರಾಜೀವ ಗೋಳಸಾರ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಸೂರ್ಯಪ್ರಭಾ ಎಚ್.ಡಿ. ಮತ್ತು 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ರೂಪಾ ಮಟ್ಟಿ ಅವರು ಆಗಮಿಸಲಿದ್ದಾರೆ.
ಗೋಕಾಕ ವಕೀಲರ ಸಂಘದ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತೆ ಸಂಘದ ಪ್ರಕಟಣೆ ತಿಳಿಸಿದೆ.