ಮೂಡಲಗಿ:ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ : ಶಾಸಕ ಬಾಲಚಂದ್ರ
ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ : ಶಾಸಕ ಬಾಲಚಂದ್ರ
ಮೂಡಲಗಿ ಸೆ 19 : ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಮನ್ನಿಕೇರಿ ಗ್ರಾಮದ ಶ್ರೀಮತಿ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗೋಕಾಕದ ಸಾಮಾಜಿಕ ಅರಣ್ಯ ವಲಯದ ಸಹಯೋಗದೊಂದಿಗೆ ನಡೆದ ನೀರಿಗಾಗಿ ಅರಣ್ಯ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮರ ಕಡಿಯುವುದರಿಂದ ಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿಲ್ಲ. ಮಳೆಯಾಗದಿದ್ದರೆ, ಬೆಳೆ ಸರಿಯಾಗಿ ಬರುತ್ತಿಲ್ಲ. ಬೆಳೆ ಬರದಿದ್ದರೆ ತಿನ್ನುವ ಅನ್ನಕ್ಕೂ ಬರ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕಳೆದ ಎರಡು ವಾರದಿಂದ ಮಳೆರಾಯನ ಆಗಮನದಿಂದ ನಮ್ಮ ತಾಲೂಕು ಬರದಿಂದ ಮುಕ್ತವಾಗಿದೆ. ಎಲ್ಲೆಡೆ ಮಳೆಯಾಗುತ್ತಿರುವುದರಿಂದ ರೈತನು ಸಂತಸದಲ್ಲಿ ತೇಲುತ್ತಿದ್ದಾನೆ. ಖುಷಿಯಲ್ಲಿ ಕಂಗೊಳಿಸುತ್ತಿದ್ದಾನೆಂದು ಹರ್ಷ ವ್ಯಕ್ತಪಡಿಸಿದರು.
ಮನ್ನಿಕೇರಿಯಿಂದ ಬಾಗೋಜಿಕೊಪ್ಪವರೆಗಿನ 6 ಕಿ.ಮೀ ರಸ್ತೆಯನ್ನು ಡಿಸೆಂಬರ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಮನ್ನಿಕೇರಿ ಗ್ರಾಮಸ್ಥರ ಬೇಡಿಕೆಯಾಗಿರುವ ವಸತಿ ನಿಲಯ, ಕಾಲೇಜು ಮಂಜೂರಾತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಶಿಕ್ಷಣದಂತೆ ನೀರಾವರಿ ಕ್ಷೇತ್ರಕ್ಕೂ ಆಧ್ಯತೆ ನೀಡುತ್ತಿದ್ದೇನೆ. ಈ ಭಾಗದ ರೈತರ ಪ್ರಮುಖ ಒತ್ತಾಸೆಯಾಗಿರುವ ಕಲ್ಮಡ್ಡಿ ಯಾತ ನೀರಾವರಿ ಅನುಷ್ಠಾನಕ್ಕೆ ಈಗಾಗಲೇ ಸರ್ಕಾರದ ಬಳಿ ಪ್ರಸ್ತಾವಣೆ ಸಲ್ಲಿಸಲಾಗಿದೆ. ಇದಕ್ಕೆ ಅಂದಾಜು 130 ಕೋಟಿ ರೂ. ವೆಚ್ಚ ತಗಲಲಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯವನ್ನು ಸ್ಥಳೀಯ ವಿಜಯಸಿದ್ಧೇಶ್ವರ ಸ್ವಾಮಿಗಳು ವಹಿಸಿದ್ದರು.
ಕೌಜಲಗಿ ಜಿಪಂ ಸದಸ್ಯೆ ಶಕುಂತಲಾ ಪರುಶೆಟ್ಟಿ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಮುದಕಪ್ಪ ಗೋಡಿ, ಬಾಳಪ್ಪ ಗೌಡರ, ಗ್ರಾಪಂ ಉಪಾಧ್ಯಕ್ಷ ಸತ್ತೆಪ್ಪ ಗಡಾದ, ಜಿಪಂ ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಮಾರುತಿ ತೋಳಮರಡಿ, ಪರಮೇಶ್ವರ ಹೊಸಮನಿ, ಕೌಜಲಗಿ ಗ್ರಾಪಂ ಅಧ್ಯಕ್ಷ ರಾಯಪ್ಪ ಬಳೋಲದಾರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ಎಪಿಎಂಸಿ ನಿರ್ದೇಶಕರಾದ ಅಶೋಕ ನಾಯಿಕ, ರೇವಣ್ಣಾ ಕನಕಿಕೋಡಿ, ಅಶೋಕ ಪರುಶೆಟ್ಟಿ, ಅಶೋಕ ಖಂಡ್ರಟ್ಟಿ, ಸುಭಾಸ ಕೌಜಲಗಿ, ಶಿವಾನಂದ ಲೋಕನ್ನವರ, ಹನಮಂತ ಅಳಗೋಡಿ, ಲಕ್ಷ್ಮಣ ಗಡಾದ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ, ವಲಯ ಅರಣ್ಯಾಧಿಕಾರಿ ಕೆಂಪಣ್ಣ ವಣ್ಣೂರ, ಮುಂತಾದವರು ಉಪಸ್ಥಿತರಿದ್ದರು.
ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಗಿರೀಶ ಸಂಕರಿ ಸ್ವಾಗತಿಸಿದರು. ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎ.ಬಿ. ಮಲಬನ್ನವರ ಕಾರ್ಯಕ್ರಮ ನಿರೂಪಿಸಿದರು.