ಘಟಪ್ರಭಾ:ಬಿಜೆಪಿ ಪಕ್ಷ ಉಪ್ಪಾರ ಸಮಾಜವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ : ಮಲ್ಲಿಕಾರ್ಜುನ ಚೌಕಶಿ ಆಕ್ರೋಶ
ಬಿಜೆಪಿ ಪಕ್ಷ ಉಪ್ಪಾರ ಸಮಾಜವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ : ಮಲ್ಲಿಕಾರ್ಜುನ ಚೌಕಶಿ ಆಕ್ರೋಶ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಡಿ 4 :
ಬಿಜೆಪಿ ಪಕ್ಷ ಉಪ್ಪಾರ ಸಮಾಜವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಮತಬ್ಯಾಂಕ ಆಗಿ ಬಳಸಿಕೊಳ್ಳುತ್ತಿದ್ದು, ಖಂಡನೀಯವಾಗಿದೆ ಎಂದು ಕರ್ನಾಟಕ ರಾಜ್ಯ ಉಪ್ಪಾರ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು 2006 ರಲ್ಲಿ ಹುಬ್ಬಳ್ಳಿಯ ನೆಹರು ನಗರದಲ್ಲಿ ನಡೆದ ಉಪ್ಪಾರರ ಬ್ರಹತ್ ಸಮಾವೇಶದಲ್ಲಿ ಉಪ್ಪಾರ ಸಮಾಜದ ಲಕ್ಷ್ಮಣ ಉಪ್ಪಾರ ಅವರನ್ನು ಎಂಎಲ್ಸಿ ಮಾಡುವುದಾಗಿ ಹಾಗೂ ಉಪ್ಪಾರರನ್ನು ಎಸ್ಟಿ ಪಟ್ಟಿಗೆ ಸೇರಿಸುವುದಾಗಿ ಅಂದಿನ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಭರವಸೆ ನೀಡಿದ್ದರು ಆದರೆ ಅದು ಇಂದಿನ ವರೆಗೂ ಈಡೆರಿಸಿಲ್ಲ.
ರಾಜ್ಯದಲ್ಲಿ ಸುಮಾರು 40 ಲಕ್ಷ ಉಪ್ಪಾರರಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಉಪ್ಪಾರರು ಬೆಳಗಾವಿ ಜಿಲ್ಲೆಯಲ್ಲಿ ಇದ್ದಾರೆ. ಬೆಳಗಾವಿ ಎಂ.ಪಿ ಚುನಾವಣೆಯ ಬಿಜೆಪಿ ಟಿಕೇಟನ್ನು ಹಿಂದಿನಿಂದಲೂ ಬಿಜೆಪಿ ಹಾಗೂ ಸಂಘ ಪರಿವಾರದಲ್ಲಿ ಪಕ್ಷದಲ್ಲಿ ಗುರುತಿಸಿ ಕೊಂಡಿರುವ ಉಪ್ಪಾರ ಸಮಾಜದ ಶಾಮಾನಂದ ಪೂಜೇರಿ, ವಾಸುದೇವ ಸವತಿಕಾಯಿ, ಲಕ್ಕಪ್ಪ ತಹಶೀಲ್ದಾರ, ಶಂಕರ ಬಿಲಕುಂದಿ ಅಥವಾ ಮೂಡಲಗಿಯ ಉಪ್ಪಾರ ಸಮಾಜದ ನಾಯಕರಾದ ಭೀಮಶಿ ಹಂದಿಗುಂದ ಅವರಲ್ಲಿ ಯಾರಾದರಿಗೊಬ್ಬರಿಗೆ
ನೀಡಬೇಕು. ಮತ್ತು ಹುಬ್ಬಳ್ಳಿಯ ಲಕ್ಷ್ಮಣ ಉಪ್ಪಾರ ಅವರನ್ನು ರಾಜ್ಯಸಭೆ ಅಥವಾ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕು.
ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ರದ್ದು ಮಾಡಿದ್ದು, ಉಪ್ಪಾರರಿಗೆ ಹಾಗೂ ಸಮಾಜದ ಪೀಠಕ್ಕೆ ಮಾಡಿದ ಅವಮಾನವಾಗಿದ್ದು, ನಿಗಮಕ್ಕೆ ಗೋಕಾಕ ತಾಲೂಕಿನ ಒಬ್ಬರನ್ನ ಅಧ್ಯಕ್ಷರಾಗಿ ನೇಮಕ ಮಾಡಬೇಕು. ಬೆಳಗಾವಿ ಡಿಸಿಸಿ ಬ್ಯಾಂಕಿನ ಸರ್ಕಾರದ ನಾಮನಿರ್ದೇಶಕರನ್ನಾಗಿ ಗೋಕಾಕ ತಾಲ್ಲೂಕಿನ ಯಾವುದಾದರೊಬ್ಬ ಉಪ್ಪಾರ ನಾಯಕರನ್ನು ನಿಯಮಿಸಬೇಕು. ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಕೇವಲ 2.5 ಕೋಟಿ ರೂಪಾಯಿ ಹಣವಿದ್ದು ಅದು ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗಿದ್ದು ಉಪ್ಪಾರ ಅಭಿವೃದ್ದಿಗೆ 100 ಕೋಟಿ ರೂಪಾಯಿ ಅನುದಾನ ನೀಡಬೇಕು.
ಬೆಳಗಾವಿ ಸೇರಿದಂತೆ ಪ್ರತಿ ಜಿಲ್ಲೆಯಲ್ಲಿ ಭಗೀರಥ ಭವನ ನಿರ್ಮಾಣ ಮಾಡಲು ಉಚಿತ ನೀವೆಶನ ಹಾಗೂ ಅನುದಾನ ನೀಡಬೇಕು. ಉಪ್ಪಾರ ಸಮಾಜವನ್ನು ಎಸ್ಟಿಗೆ ಸೇರಿಸಬೇಕು. ಹಾಗೂ ಇತರೆ ಪ್ರಮುಖ ನಿಗಮ ಮಂಡಳಿಗಳಿಗೆ ಉಪ್ಪಾರರನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿರುವ ಬಹುತೇಕ ಕ್ಷೇತ್ರಗಳಲ್ಲಿ ಉಪ್ಪಾರರು ನಿರ್ಣಾಯಕ ಸಂಖ್ಯೆಯಲ್ಲಿ ಇದ್ದು ಆ ಎಲ್ಲ ಕ್ಷೇತ್ರಗಳಲ್ಲೂ ಉಪ್ಪಾರರು ಬಿಜೆಪಿಯನ್ನು ಮಾತ್ರ ಬೆಂಬಲಿಸಿದ್ದಾರೆ. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂಬರುವ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಉಪ್ಪಾರರು ಪ್ರತ್ಯೇಕ ಅಭ್ಯರ್ಥಿಯನ್ನು ನಿಲ್ಲಿಸ ಬೇಕಾಗುತ್ತದೆ. ಇಲ್ಲವೆ ಉಪ್ಪಾರ ಸಮಾಜ ನೋಟಾಗೆ ಮತ ನೀಡಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಚೌಕಶಿ ಎಚ್ಚರಿಸಿದ್ದಾರೆ.