ಗೋಕಾಕ:ಸಿದ್ಧರಾಮಯ್ಯ ಒಳ್ಳೆಯ ಮನುಷ್ಯ, ಇಂದಿಗೂ ಅವರು ನಮ್ಮ ನಾಯಕ : ಶಾಸಕ ರಮೇಶ
ಸಿದ್ಧರಾಮಯ್ಯ ಒಳ್ಳೆಯ ಮನುಷ್ಯ, ಇಂದಿಗೂ ಅವರು ನಮ್ಮ ನಾಯಕ : ಶಾಸಕ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 31 :
ಸಿದ್ಧರಾಮಯ್ಯ ಒಳ್ಳೆಯ ಮನುಷ್ಯ, ಇಂದಿಗೂ ಅವರು ನಮ್ಮ ನಾಯಕರು. ಮುಂದೇನಾಗುತ್ತೋ ನೋಡೋಣ ಎಂದು ಬಿಜೆಪಿ ಶಾಸಕ ನೂತನ ಶಾಸಕ ರಮೇಶ ಜಾರಕಿಹೋಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಗಳವಾರಂದು ಗೋಕಾಕ್ ತಾಲೂಕಿನ ಬೆನಚಿಮರಡಿಯಲ್ಲಿ ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು,ಹಿಂದಿನ ಸಮೀಶ್ರ ಸರ್ಕಾರ ಕೆಡವಿದ್ದು ನಾನು ಮಂತ್ರಿಯಾಗಬೇಕೆಂಬ ಆಸೆಯಿಂದಲ್ಲ. ಕೆಟ್ಟ ಸರ್ಕಾರವನ್ನ ಕೆಡವಬೇಕೆಂಬ ಉದ್ದೇಶದಿಂದ ಸರ್ಕಾರವನ್ನ ಕೆಡವಿದ್ದೇವೆ. ಹಿಂದಿನ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದೆ. ಒಳ್ಳೆಯ ಇಲಾಖೆ ಇತ್ತು.ನಾನು ಬಂಡಾಯ ಎದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದು ಬುದ್ಧಿವಾದ ಹೇಳಿದ್ದರು.ನಾನು ಮತ್ತೆ ಕಾಂಗ್ರೆಸ್ ಗೆ ವಾಪಸ್ ಬಂದ್ರೆ ಆ ಪಕ್ಷದಲ್ಲಿನ ಕುತಂತ್ರಿಗಳು ನಮ್ಮನ್ನು ತುಳಿಯುತ್ತಾರೆ, ನಿಮ್ಮನ್ನು ತುಳಿಯುತ್ತಾರೆ ಎಂದು ಹೇಳಿದ್ದೆ ಎಂದರು.
ಸಿದ್ಧರಾಮಯ್ಯ ಒಳ್ಳೆಯ ಮನುಷ್ಯ. ನಾವು ಅವರು ಬೇರೆ ಬೇರೆ ಪಕ್ಷಗಳಿಗೆ ಹೋಗಿದ್ದು ದುರ್ದೈವ.ನಾನು ಇತ್ತೀಚಿಗೆ ಸಿದ್ಧರಾಮಯ್ಯ ಅನಾರೋಗ್ಯದ ನಿಮಿತ್ಯ ಅವರನ್ನು ಭೇಟಿ ಮಾಡಲು ಹೋದಾಗ ಬಹಳಷ್ಟು ವಿಚಾರಗಳ ಬಗ್ಗೆ ಮಾತನಾಡಿದರು.ಕೆಲವು ವಿಚಾರಗಳನ್ನು ನೆನಪುಮಾಡಿಕೊಂಡು ಭಾವುಕರಾದರು.ರಾಜಕೀಯದಲ್ಲಿ ಮುಂದೇನಾಗುತ್ತೋ ಕಾಯ್ದು ನೋಡೋಣ ಅಂತಾ ಹೇಳಿದರು.
ನಾವು ಬಂಡಾಯ ಎದ್ದು ಮತ್ತೆ ಕಾಂಗ್ರೆಸ್ ಹೋಗಿದ್ದರೆ, ಬಂಡಾಯದ ವಿಚಾರವನ್ನ ಸಿದ್ಧರಾಮಯ್ಯ ಅವರ ಹಣೆಗೆ ಕಟ್ಟಿ ಅವರನ್ನು ರಾಜಕೀಯವಾಗಿ ಮುಗಿಸುತ್ತಿದ್ದರು.ನಾವು ಬಂಡಾಯ ಎದ್ದು ಹೊರ ಬಂದು ಬಿಜೆಪಿ ಸೇರಿದ್ದಕ್ಕೆ ಅವರಿಗೂ ಒಳ್ಳೆಯದ್ದಾಗಿದೆ ಎಂದರು.
ನಾವು ಎಲ್ಲಿಯೇ ಇದ್ರೂ ಸಿದ್ಧರಾಮಯ್ಯ ಹಾಗೂ ಖರ್ಗೆ ನಮ್ಮ ನಾಯಕರು. ಇದನ್ನು ಬಹಿರಂಗವಾಗಿ ಹೇಳುತ್ತೇನೆ. ಇದನ್ನು ಹೇಳಲು ನನಗೆ ಯಾರ ಭಯವೂ ಇಲ್ಲ.ನಾನು ಸದ್ಯಕ್ಕೆ ಬಿಜೆಪಿ ಪಕ್ಷದಲ್ಲಿರುವುದರಿಂದ ಪಕ್ಷ ನಿಷ್ಠೆ ಬಂದ್ರ ನನ್ನ ನಿಷ್ಠೆ ಬಿಜೆಪಿಗೆ, ಇನ್ನೂ ವೈಯಕ್ತಿಕವಾಗಿ ವ್ಯಕ್ತಿ ನಿಷ್ಠೆ ಬಂದ್ರೆ ನನ್ನ ನಾಯಕರು ಸಿದ್ಧರಾಮಯ್ಯ ಎಂದು ಹೇಳಿದರು.
ಕುತಂತ್ರಿಗಳ ಆಟ ನಡೆಯಲಿಲ್ಲ
ಕಳೆದ ಗೋಕಾಕ್ ಉಪ ಚುನಾವಣೆಯಲ್ಲಿ ನನ್ನ ಸೋಲಿಸಲು ವಿರೋಧಿಗಳು ವಾಮಮಾರ್ಗದ ಮೂಲಕ ಏನ್ನೆಲ್ಲಾ ಪ್ರಯತ್ನಪಟ್ಟರೂ ಅವರಿಗೆ ಯಶಸ್ಸು ಸಿಗಲಿಲ್ಲ ಎಂದು ಇದೇ ಸಂದರ್ಭದಲ್ಲಿ ರಮೇಶ ಜಾರಕಿಹೋಳಿ ಹೇಳಿದ್ದಾರೆ.
ಜನರಿಗೆ ಚುನಾವಣೆ ಸಂದರ್ಭದಲ್ಲಿ ಹಲವಾರು ರೀತಿ ಆಸೆಆಮೀಷಯೊಡ್ಡಿದ್ದರು.ಬೆದರಿಕೆ ಹಾಕಿದರು.ಇಷ್ಟೆಲ್ಲಾ ಆದರೂ ಕ್ಷೇತ್ರದ ಜನರು ನನ್ನ ಕೈಬಿಡಲಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.