ಗೋಕಾಕ:ಅನುಭವದಿಂದ ಮಾತ್ರ ಕಲಾವಿದ ಪ್ರಸಿದ್ಧನಾಗಲು ಸಾಧ್ಯವಿದೆ: ಡಾ.ರಾಜೇಂದ್ರ ಸಣ್ಣಕ್ಕಿ

ಅನುಭವದಿಂದ ಮಾತ್ರ ಕಲಾವಿದ ಪ್ರಸಿದ್ಧನಾಗಲು ಸಾಧ್ಯವಿದೆ: ಡಾ.ರಾಜೇಂದ್ರ ಸಣ್ಣಕ್ಕಿ
ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಸೆ 8 :
ಜನಪದವು ಜಾತ್ಯಾತೀತ ಕಲೆಯಾಗಿದೆ ಅನುಭವದಿಂದ ಮಾತ್ರ ಕಲಾವಿದ ಪ್ರಸಿದ್ಧನಾಗಲು ಸಾಧ್ಯವಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು
ಇತ್ತೀಚೆಗೆ ಪ್ರೊ. ಕೆ.ಜಿ.ಕುಂದಣಗಾರ ಗಜಾನನ ಉತ್ಸವ ಕಮೀಟಿಯ ಆಶ್ರಯದಲ್ಲಿ ಜರುಗಿದ ಗಣೇಶೋತ್ಸವ ನಿಮಿತ್ತ ಇಮಾಮಸಾಬ ನಾಗನೂರರ ಅವರ ಡೊಳ್ಳಿನ ಹಾಡುಗಾರಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದ ದೇಶ-ಭಾಷೆ-ಜಾತಿಯನ್ನು ಮೀರಿದ ಪ್ರತಿಭಾವಂತನಾಗಿದ್ದು, ಕಲೆಗಳನ್ನು ಆಳವಾಗಿ ಅಧ್ಯಯನ ಮಾಡಿದವನಾಗಿರುತ್ತಾನೆ. ಇಂಥವರಲ್ಲಿ ಇಮಾಮಸಾಬ ನಾಗನೂರ ಒರ್ವ ಪ್ರಖ್ಯಾತ ಡೊಳ್ಳಿನ ಹಾಡುಗಾರಿಕೆ ಕಲಾವಿದನಾಗಿದ್ದಾರೆ ಇವರ ಡೊಳ್ಳಿನ ಹಾಡುಗಾರಿಕೆ ಕಲೆ ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿದೆ. ಮನುಷ್ಯ ಸೀಮಿತ ಸಂಬಂಧಗಳಿಗಿಂತ ಹೃದಯ ವೈಶಾಲ್ಯತೆಯ ಮಾನವೀಯ ಸಂಬಂಧಗಳನ್ನು ಕಟ್ಟಿಕೊಳ್ಳಬೇಕೆಂದು ಜನಪದ ಕಲೆಗಳು ತಿಳಿಸುತ್ತವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ರವಿ ಪರುಶೆಟ್ಟಿ, ಸಾಹಿತಿ ಡಾ.ರಾಜು ಕಂಬಾರ, ಅವಿನಾಶ ಮೋಡಿ, ಬಸವರಾಜ ಜೋಗಿ, ನೀಲಪ್ಪ ಕೇವಟಿ, ಮಹಾಲಿಂಗ ಹಳ್ಳೂರ, ಯಲ್ಲಪ್ಪ ದಾನನ್ನವರ, ಅಶೋಕ ಶಿವಾಪೂರ, ಅಯ್ಯಪ್ಪ ದಳವಾಯಿ, ಪರಶುರಾಮ ದಳವಾಯಿ ಮುಂತಾದವರು ಉಪಸ್ಥಿತರಿದ್ದರು.