ಗೋಕಾಕ:ಪ್ರವಾಹಕ್ಕೆ ತತ್ತರಿಸಿದ ಕುಂದರಗಿ ಗ್ರಾಮ : ಅಡವಿ ಸಿದ್ಧೇಶ್ವರ ಮಠದಲ್ಲಿ ಸಿಲುಕಿದ್ದ 19 ಜನರ ಸುರಕ್ಷಿತ ಕಾರ್ಯಚರಣೆ

ಪ್ರವಾಹಕ್ಕೆ ತತ್ತರಿಸಿದ ಕುಂದರಗಿ ಗ್ರಾಮ : ಅಡವಿ ಸಿದ್ಧೇಶ್ವರ ಮಠದಲ್ಲಿ ಸಿಲುಕಿದ್ದ 19 ಜನರ ಸುರಕ್ಷಿತ ಕಾರ್ಯಚರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 4 :
ತಾಲೂಕಿನಲ್ಲಿ ಸತತ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳಗಳು ತುಂಬಿ ಹರಿಯುತ್ತಿರುಬದರಿಂದ ಪ್ರವಾಹದ ಭೀತಿ ಉಂಟಾಗಿದ್ದು ತಾಲೂಕಿನ ಕುಂದರಗಿ ಗ್ರಾಮದಲ್ಲಿ ಶ್ರೀ ಅಡವಿ ಸಿದ್ಧೇಶ್ವರ ಮಠಕ್ಕೆ ಬಳ್ಳಾರಿ ಹಳ್ಳದ ನೀರು ಹೊಕ್ಕಿದ್ದರಿಂದ ಮಠದಲ್ಲಿ ಸಿಲುಕಿಕೊಂಡಿದ್ದ 19ಜನರನ್ನು ಪೋಲೀಸ ಇಲಾಖೆ ಮತ್ತು ತಾಲೂಕಾಡಳಿತ ಗೋಕಾಕದ ಅಯ್ಯುಬ ಖಾನ ತಂಡ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆ ತಂದಿದ್ದಾರೆ.
ಶನಿವಾರದಂದು ರಾತ್ರಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಳ್ಳಾರಿ ಹಳ್ಳಕ್ಕೆ ನೀರಿನ ಹರಿವು ಹೆಚ್ಚಾಗಿ ಮಠದಲ್ಲಿ ವಾಸವಿದ್ದ 19 ಜನರ ಸಿಲುಕಿದ್ದಾರೆ. ತಡರಾತ್ರಿಯವರೆಗೆ ಹರಿವು ಕಡಿಮೆ ಆಗದೇ ಹೆಚ್ಚಾಗುತ್ತಿರುವುದನ್ನು ಮನಗಂಡು ಮಠದಲ್ಲಿ ವಾಸವಿದ್ದ ಕಿರಿಯ ಸ್ವಾಮೀಜಿ ಅವರು ರವಿವಾರದಂದು ಮುಂಜಾನೆ ಮೊಬಾಯಿಲ್ ಮೂಲಕ ಹಿರಿಯ ಸ್ವಾಮೀಜಿ ಅವರಿಗೆ ತಿಳಿಸಿದಾಗ ಅವರು ಹತ್ತಿರದ ಅಂಕಲಗಿ ಪೋಲಿಸ ಠಾಣೆಗೆ ತಿಳಿಸಿದರು.
ನಂತರ ಕಾರ್ಯಪ್ರವೃತ್ತರಾದ ಪೋಲೀಸ ಇಲಾಖೆಯು ಆಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಆಗಮಿಸಿತು. ನೀರಿನ ಹರಿವು ಹೆಚ್ಚಾಗುತ್ತಿರುವುದನ್ನು ಮನಗಂಡು ಜಿಲ್ಲಾಡಳಿತಕ್ಕೆ ತಿಳಿಸಿದರು. ಕಾರ್ಯಾಚರಣೆ ನಿಧಾನವಾಗುತ್ತಿರುವುದನ್ನು ಗಮನಿಸಿ ಗೋಕಾಕ ನಗರದ ಅಯ್ಯುಬ ಖಾನ ಅವರಿಗೆ ಮೊಬಾಯಿಲ್ ಮೂಲಕ ಕರೆ ಮಾಡಿ ಅವರನ್ನು ಸ್ಥಳಕ್ಕೆ ಆಗಮಿಸುವಂತೆ ಕೋರಿದರು.
ಕೋರಿಕೆ ಮೇರೆಗೆ 14 ಜನರ ತಂಡ 4 ಬೋಟಗಳೊಂದಿಗೆ ಆಗಮಿಸಿದ ಅಯ್ಯುಬ ಖಾನ ಹಾಗೂ ಸ್ನೇಹಿತರು ಸುಮಾರು 3 ಗಂಟೆಗಳ ಕಾಲ ಯಶಸ್ವಿ ಕಾರ್ಯಾಚರಣೆ ನಡೆಸಿ ಮಠದಲ್ಲಿದ್ದ 12 ಮಕ್ಕಳು, ನಾಲ್ವರು ಮಹಿಳೆಯರು ಸೇರಿದಂತೆ 19 ಜನರನ್ನು ರಕ್ಷಿಸಿ ಸುತಕ್ಷಿತ ಸ್ಥಳಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಠದಲ್ಲಿ ಇದ್ದ ಸಾಕು ಪ್ರಾಣಿಗಳನ್ನು ಹಗ್ಗವನ್ನು ಬಿಚ್ಚಿ ಬೀಡಲಾಗಿದೆ.
ಘಟನಾ ಸ್ಥಳಕ್ಕೆ ಬೈಲಹೊಂಗಲ ಉಪವಿಭಾಗ ಅಧಿಕಾರಿ ಶಿವಾನಂದ ಭಜಂತ್ರಿ, ಗೋಕಾಕ ತಹಶೀಲದಾರ ಪ್ರಕಾಶ ಹೊಳೆಪ್ಪಗೊಳ, ಡಿವೈಎಸ್ಪಿ ಡಿ.ಟಿ. ಪ್ರಭು, ಸಿಪಿಐ ಶ್ರೀಧರ ಸಾತಾರೆ ಪೋಲೀಸ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಭೇಟಿ ನೀಡಿದರು. 19 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದವರು ಚಿಕ್ಕೋಡಿ ತಾಲೂಕಿನಿಂದ ಆಗಮಿಸಿದರು. ಸದ್ಯ ಅಂಕಲಗಿ ಗ್ರಾಮದ ಬಳಿ ಹೆಸ್ಕಾಂ ಇಲಾಖೆಯ ಹತ್ತಿರ ಇರುವ ಇನ್ನೂಂದು ಸೇತುವೆ ಮೇಲೆ ನೀರು ಹೆಚ್ಚಾಗಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ.