ಗೋಕಾಕ:ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ : ಗೋಕಾಕಿನಲ್ಲಿ ಬಿ.ಜೆ.ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ
ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ : ಗೋಕಾಕಿನಲ್ಲಿ ಬಿ.ಜೆ.ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ
ಗೋಕಾಕ ಜು 13: ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ, ದೇಶದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಶರವೇಗದ ಬದಲಾವಣೆ ಮಾಡುವುದರ ಜೊತೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸಿದ ಕೀರ್ತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಬಿ.ಜೆ.ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಗುರುವಾರದಂದು ನಗರದಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದ ವಿಸ್ತಾರಕರ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಮಾಜದ ಎಲ್ಲ ವರ್ಗದ ಜನರಿಗೂ ಮೂಲಭೂತ ಸೌಲಭ್ಯಗಳು ದೊರೆಯುವಂತೆ ಮಾಡುವದೇ ಪ್ರಧಾನ ಮಂತ್ರಿಗಳ ದ್ಯೇಯವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಿಂದ ಉದ್ಯೋಗಕ್ಕಾಗಿ ಸಬ್ಸಿಡಿ ಸಹಿತ ಕಡಿಮೆ ಬಡ್ಡಿಯ ಸುಲಭ ಸಾಲ, ಗೃಹ ನಿರ್ಮಾಣ ಸಾಲ, ರೈತರಿಗೆ ಭೀಮಾ ಯೋಜನೆ, ಬಡ ಕುಟುಂಬಗಳಿಗೆ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ, ಅನ್ನಭಾಗ್ಯ ಯೋಜನೆಗೆ ಕೇಂದ್ರದ ದೊಡ್ಡ ಮಟ್ಟದ ಅನುದಾನ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣ ಮುಂತಾದ ಕಾರ್ಯಗಳನ್ನು ಯಶಸ್ವಿಯಾಗಿ ಜಾರಿ ಮಾಡುತ್ತಿರುವ ಅವರು ಆಡಳಿತ ವ್ಯವಸ್ಥೆಗೆ ಬಿಗಿ ತರುವುದರ ಜೊತೆಗೆ ನೋಟು ಬದಲಾವಣೆ ಹಾಗೂ ಡಿಜಿಟಲೀಕರಣ ಹಾಗೂ ನಗದು ರಹಿತ ವಹಿವಾಟಿಗೆ ಚಾಲನೆ ಕೊಡುವುದರ ಮೂಲಕ ದೇಶದ ಅರ್ಥವ್ಯವಸ್ಥೆಗೆ ಹೊಸ ಆಯಾಮ ನೀಡಿದ್ದಾರೆ ಎಂದು ಹೇಳಿದರು.
ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟುವಂತೆ ಮಾಡುವ ಸದುದ್ದೇಶದಿಂದ ಪಕ್ಷದ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರಿಗೆ ವಿಸ್ತಾರಕರನ್ನಾಗಿ ನೇಮಿಸಿ ಪಕ್ಷದ ಸಾಧನೆಗಳ ಪ್ರಚಾರಕ್ಕೆ ತೊಡಗಿಸಲಾಗಿದೆ. ಅದಕ್ಕೆ ಪೂರಕವಾಗಿಯೇ ಇದೇ ದಿ. 16 ರಂದು ಬೂತ್ ಮಟ್ಟದ ಪದಾಧಿಕಾರಿಗಳ ಸಭೆ ಹಾಗೂ ದಿ: 23,24 ರಂದು ಬೂತ್ ಮಟ್ಟದಲ್ಲಿ ಪ್ರಚಾರ ಸಭೆಗಳನ್ನು ಏರ್ಪಡಿಸಲು ಪಕ್ಷದಿಂದ ನಿರ್ದೇಶನ ನೀಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದಿಗೂ ರಾಜ್ಯದ ಅತ್ಯಂತ ಜನಪ್ರೀಯ ನಾಯಕರಾಗಿದ್ದಾರೆ. ಅವರ ಆಡಳಿತದ ಅವಧಿಯಲ್ಲಿ ಜಾರಿಗೆ ತಂದ ಅನೇಕ ಜನಪರ ಯೋಜನೆಗಳು ಇಂದಿಗೂ ಜನಮನದಾಳದಲ್ಲಿ ಆಳವಾಗಿ ಪರಿಣಾಮ ಬೀರಿವೆ. ರಾಜ್ಯದ ಜನತೆ ಇನ್ನೊಮ್ಮೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೋಡುವ ತವಕದಲ್ಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪನವರ ಜನಪ್ರೀಯತೆಯ ಅಲೆ ರಾಜ್ಯದಲ್ಲಿ ಬಿ.ಜೆ.ಪಿ. ಸರಕಾರ ತರುವುದರಲ್ಲಿ ಎರಡು ಮಾತಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಶಾಸಕ ವಿಶ್ವನಾಥ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಪಕ್ಷದ ವಿಸ್ತಾರಕರು ತಮಗೆ ಜವಾಬ್ದಾರಿ ವಹಿಸಿದ ಕಾರ್ಯವನ್ನು ಬೂತ್ ಮಟ್ಟದಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರದ ನೂರಾರು ವಿಸ್ತಾರಕರು ನಗರದ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಅವರ ಮನೆಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಸರಕಾರ ಮತ್ತು ಈ ಹಿಂದಿನ ಬಿ.ಜೆ.ಪಿ. ಪಕ್ಷದ ರಾಜ್ಯ ಸರಕಾರದ ಸಾಧನೆಗಳನ್ನು ವಿವರಿಸಿ ಹೇಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ಪಕ್ಷವನ್ನು ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೂಳಪ್ಪ ಹೊಸಮನಿ, ಗುರುಪಾದ ಕಳ್ಳಿ, ಉಪಾಧ್ಯಕ್ಷ ಚಿನವಾಲರ, ಜಿಲ್ಲಾ ವಿಸ್ತಾರಕ ದೀಪಕ ಜಮಖಂಡಿ, ಗೋಕಾಕ ವಿಧಾನಸಭಾ ಕ್ಷೇತ್ರ ಬಿ.ಜೆ.ಪಿ. ಪಕ್ಷದ ಗ್ರಾಮೀಣ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ ,ರಾಜ್ಯ ಪದಾಧಿಕಾರಿ ಶಕೀಲ ಧಾರವಾಢಕರ, ಜಿಲ್ಲಾ ಮಹಿಳಾ ಅಧ್ಯಕ್ಷ ಶ್ರೀದೇವಿ ತಡಕೋಡ, ಕಾರ್ಯದರ್ಶಿ ಪ್ರೇಮಾ ಭಂಡಾರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಈರಣ್ಣಾ ಅಂಗಡಿ, ಶ್ರೀರಾಮ ಸೇನೆಯ ಮುಖಂಡ ಸುನೀಲ ಮುರ್ಕಿಭಾಂವಿ, ಶ್ರೀಕಾಂತ ಕಲ್ಯಾಣಶಟ್ಟಿ, ಅರ್ಜುನ ಜರತಾರಕರ, ರಾಜು ಹಿರೇಅಂಬಿಗೇರ, ಕರುಣಾ ಗರುಡಕರ, ದಸ್ತಗೀರ ಪೈಲವಾನ, ಅಜರ ಮುಜಾವರ, ಪಕ್ಷದ ಪದಾಧಿಕಾರಿಗಳಾದ ರುದ್ರಗೌಡ ಪಾಟೀಲ, ನಾಗಲಿಂಗ ಪೋತದಾರ, ಬಸವರಾಜ ಹುಳ್ಳೇರ, ಲಕ್ಕಪ್ಪ ತಹಶೀಲ್ದಾರ, ಚಿದಾನಂದ ದೇಮಶಟ್ಟಿ, ಪ್ರಮೋದ ವಾರಿಮನಿ, ಪ್ರೇಮಾ ಚಿಕ್ಕೋಡಿ, ಶಾಂತವ್ವ ಸವಸುದ್ದಿ, ರಾಜು ಪಾಟೀಲ, ಮಹಾದೇವ ಇಂಚಲ, ಮಲ್ಲಯ್ಯ ಮಠದ, ಬಸವಣ್ಣೆಪ್ಪ ಸವಸುದ್ದಿ, ಮಹಾಂತೇಶ ಜನ್ಮಟ್ಟಿ, ಮಹಾಂತೇಶ ಮಲಕನ್ನವರ, ನಿಂಗಪ್ಪ ಅಮ್ಮಿನಭಾಂವಿ, ಯಲ್ಲಪ್ಪ ಹುಕ್ಕೇರಿ, ಮಾಳಪ್ಪ ಭಂಡಾರಿ, ಲಕ್ಷ್ಮಣ ತೋಳಿ, ಲಕ್ಕಪ್ಪ ಬಂಡಿ, ರಾಮಪ್ಪ ದೇವನ್ನವರ, ರಮೇಶ ಹಿರೇಮಠ, ಅಡಿವೆಪ್ಪ ಪಾಟೀಲ, ಲಕ್ಷ್ಮಣ ನಾರಿ, ಲಕ್ಷ್ಮಣ ಕರಮುಶಿ, ಬೀಮಶಿ ರಾಮಾಪೂರ, ಶೇಖರ ಹೊಸೂರ, ಹಣಮಂತ ತಳಕಟ್ನಾಳ ಸೇರಿದಂತೆ ಹಲವರು ಇದ್ದರು.