ಗೋಕಾಕ:34 ನೇ ಸತ್ಸಂಗ ಸಮ್ಮೇಳನ ಪ್ರಯುಕ್ತ ಆಹ್ವಾನ ಪತ್ರಿಕೆ ಉದ್ಘಾಟನೆ
34 ನೇ ಸತ್ಸಂಗ ಸಮ್ಮೇಳನ ಪ್ರಯುಕ್ತ ಆಹ್ವಾನ ಪತ್ರಿಕೆ ಉದ್ಘಾಟನೆ
ಬೆಟಗೇರಿ ಅ 27 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 34 ನೇ ಸತ್ಸಂಗ ಸಮ್ಮೇಳನ ಮುಂಬರುವ ಇದೇ ಸಪ್ಟೆಂಬರ್10 ರಿಂದ 14 ರವರೆಗೆ ಪ್ರತಿ ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದ್ದು, ಈ ಸಲವೂ ಸತ್ಸಂಗ ಸಮ್ಮೇಳನದ ಯಶಸ್ವಿಗೆ ಸ್ಥಳೀಯ ಗ್ರಾಮಸ್ಥರ ಸಹಾಯ, ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಸ್ಥಳೀಯ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ರವಿವಾರ ಆಗಸ್ಟ್.26 ರಂದು ನಡೆದ ಪ್ರಸಕ್ತ ವರ್ಷದ ಸತ್ಸಂಗ ಸಮ್ಮೇಳನದ ಆಹ್ವಾನ ಪತ್ರಿಕೆ ಉದ್ಘಾಟನೆ ಮತ್ತು ವಿತರಣೆ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಇಂಚಲದ ಉಪಮಾತೀತ ಸದ್ಗುರು ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಅವರ ಘನ ಅಧ್ಯಕ್ಷತೆಯಲ್ಲಿ ಸತ್ಸಂಗ ಸಮ್ಮೇಳನ, ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಭಾರಿಯ ಸತ್ಸಂಗ ಸಮೇಳನದಲ್ಲಿ ನಾಡಿನ ಹೆಸರಾಂತ ಹಲವಾರು ಜನ ಮಹಾಸ್ವಾಮಿಜಿ, ಸಂತ, ಶರಣರು, ಆಧ್ಯಾತ್ಮ ಪ್ರವೀಣರು ಹಲವಾರು ವಿಷಯಗಳ ಕುರಿತು ಪ್ರವಚನ ಹೇಳಲಿದ್ದಾರೆ. ಆದ ಕಾರಣ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸ್ಥಳೀಯರು ಮಹಾತ್ಮರ ಜ್ಞಾನಾಮೃತ ವಾಣಿಯ ಹಾಗೂ ದರ್ಶನ ಭಾಗ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಪಾರ್ವತೇರ ತಿಳಿಸಿದರು.
ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ ಆಹ್ವಾನ ಪತ್ರಿಕೆ ಪೂಜೆ ನೆರವೇರಿಸಿದ ಬಳಿಕ ಪತ್ರಿಕೆ ವಿತರಿಸಿದರು. ಸ್ಥಳೀಯ ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ನೇತೃತ್ವ ವಹಿಸಿದ್ದರು.
ಇಲ್ಲಿಯ 34 ನೇ ಸತ್ಸಂಗ ಸಮ್ಮೇಳನ ಆಯೋಜನೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಈಶ್ವರ ಭಜನಾ ಮಂಡಳಿ ಸದಸ್ಯರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು, ಸಂತ ಶರಣರು, ಆಧ್ಯಾತ್ಮ ಆಸಕ್ತರು, ಗ್ರಾಮಸ್ಥರು ಇದ್ದರು.
ಬಸವರಾಜ ಪಣದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೀರನಾಯ್ಕ ನಾಯ್ಕರ ಕೊನೆಗೆ ವಂದಿಸಿದರು.