ಗೋಕಾಕ:ನ್ಯಾಯಾಧೀಶರ ಮೇಲೆ ಹಲ್ಲೆ , ನ್ಯಾಯವಾದಿಯ ಬರ್ಬರ ಹತ್ಯೆಗೆ ಗೋಕಾಕದಲ್ಲಿ ಖಂಡನೆ
ನ್ಯಾಯಾಧೀಶರ ಮೇಲೆ ಹಲ್ಲೆ , ನ್ಯಾಯವಾದಿಯ ಬರ್ಬರ ಹತ್ಯೆಗೆ ಗೋಕಾಕದಲ್ಲಿ ಖಂಡನೆ
ಗೋಕಾಕ ಜು 28 : ನ್ಯಾಯಾಧೀಶರ ಮೇಲೆ ಹಲ್ಲೆ ಹಾಗೂ ನ್ಯಾಯವಾದಿಯ ಬರ್ಬರ ಹತ್ಯೆಯನ್ನು ಖಂಡಿಸಿ ಶನಿವಾರದಂದು ಇಲ್ಲಿಯ ನ್ಯಾಯವಾದಿಗಳ ಸಂಘ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು, ತಹಶೀಲದಾರ ಮುಖಾಂತರ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನ್ಯಾಯವಾದಿಗಳ ಸಂಘದ ಸದಸ್ಯ ಹಾಗೂ ದಾಂಡೇಲಿ ತಾಲೂಕಾ ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಜೀತ ನಾಯಕ ಅವರ ಬರ್ಬರ ಹತ್ಯೆ ಹಾಗೂ ಲಿಂಗಸೂರಿನ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಡಾ|| ಎಮ್.ಎಸ್.ಕನಕರೆಡ್ಡಿ ಹಾಗೂ ಅವರ ಬೆಂಬಲಿಗರು ದೈಹಿಕ ಹಲ್ಲೆ ಮಾಡಿದ್ದನ್ನು ಇಲ್ಲಿಯ ನ್ಯಾಯವಾದಿಗಳ ಸಂಘ ಖಂಡಿಸಿದೆ. ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳ ಮೇಲೆ ಪದೆ-ಪದೇ ಹಲ್ಲೆ ಹಾಗೂ ಕೊಲೆಗಳನ್ನು ಮಾಡುತ್ತಿರುವುದನ್ನು ನೋಡಿದರೇ ಯಾವುದೇ ರೀತಿಯ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಇಂತಹ ಘಟನೆಗಳಿಗೆ ಕಡಿವಾಣ ಹಾಕುವಂತೆ ವಿನಂತಿಸಿದ ಅವರು, ಇಂತಹ ಘಟನೆಗಳು ಮರುಕಳಿಸಿದರೇ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ, ಉಪಾಧ್ಯಕ್ಷರಾದ ಡಿ.ವಾಯ್.ಖಂಡೆಪಟ್ಟಿ, ಡಿ.ಎಮ್.ಮಡಿವಾಳರ, ಪ್ರಧಾನ ಕಾರ್ಯದರ್ಶಿ ಸಿ.ಬಿ.ಗಿಡ್ಡನ್ನವರ, ಸಹಕಾರ್ಯದರ್ಶಿ ಎಸ್.ಎಸ್.ಜಿಡ್ಡಿಮನಿ, ಖಜಾಂಚಿ ಬಿ.ಬಿ.ಬೀರನಗಡ್ಡಿ, ಮಹಿಳಾ ಪ್ರತಿನಿಧಿ ಕೆ.ಕೆ.ಬಡಿಗೇರ ಸೇರಿದಂತೆ ಅನೇಕರು ಇದ್ದರು.