ಗೋಕಾಕ:ಅರವಿಂದ ದಳವಾಯಿ ಅರಬಾಂವಿ ” ಕೈ” ಟಿಕೆಟ್ : ಕಲ್ಲಪ್ಪ ಲಕ್ಕಾರ ಆಕ್ರೋಶ

ಅರವಿಂದ ದಳವಾಯಿ ಅರಬಾಂವಿ ” ಕೈ” ಟಿಕೆಟ್ : ಕಲ್ಲಪ್ಪ ಲಕ್ಕಾರ ಆಕ್ರೋಶ
ಗೋಕಾಕ ಏ 16 : ಅರಭಾವಿ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ದಳವಾಯಿ ಅವರನ್ನು ಘೋಷಣೆ ಮಾಡಿರುವ ಬೆನ್ನಲ್ಲೆ ಕಾಂಗ್ರೇಸ್ ವಲಯದಲ್ಲಿ ಅತೃಪ್ತಿಯ ಹೊಗೆ ಕಾಣಿಸಿಕೊಂಡಿದೆ. ನಿಷ್ಠಾವಂತ ಕಾರ್ಯಕರ್ತರು ಪಕ್ಷದ ವರಿಷ್ಠರ ವಿರುದ್ಧ ಕೌಜಲಗಿ ಬ್ಲಾಕ್ ಪ್ರಚಾರ ಸಮೀತಿ ಅಧ್ಯಕ್ಷ ಕಲ್ಲಪ್ಪ ಲಕ್ಕಾರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರದಂದು ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಅರವಿಂದ ದಳವಾಯಿ ಅವರ ಉಮೇದುವಾರಿಕೆಯನ್ನು ಪ್ರಶ್ನಿಸಿದ್ದಾರೆ.
ಮೂಲತಃ ಕೌಜಲಗಿಯವರಾದ ದಳವಾಯಿ ಅವರು ಈಗಷ್ಟೇ ಕಾಂಗ್ರೇಸ್ ಪಕ್ಷವನ್ನು ಸೇರಿದ್ದಾರೆ. ಇದಕ್ಕೂ ಮುನ್ನ ದಳವಾಯಿ ಅವರು ಜೆಡಿಎಸ್-ಜೆಡಿಯು ಸೇರಿದಂತೆ ಮನಸ್ಸಿಗೆ ಬಂದಂತೆ ಪಕ್ಷಗಳನ್ನು ಬದಲಾಯಿಸುವ ಮನೋಭಾವನೆ ಹೊಂದಿರುವ ಇವರನ್ನು ಕಾಂಗ್ರೇಸ್ ಪಕ್ಷ ಯಾವ ಆಧಾರದ ಮೇಲೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತು ಎಂಬುದು ತಿಳಿಯುತ್ತಿಲ್ಲ. ಈ ಹಿಂದೆ ಅರಭಾವಿ ಹಾಗೂ ರಾಮದುರ್ಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಠೇವಣಿ ಕಳೆದುಕೊಂಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರಾಗಲಿಕ್ಕೂ ಯೋಗ್ಯ ಇರದ ಇಂತಹ ವ್ಯಕ್ತಿಗೆ ಪಕ್ಷದ ಟಿಕೇಟು ನೀಡಿರುವುದು ನಿಷ್ಠಾವಂತರಲ್ಲಿ ಅಸಮಾಧಾನ ಮೂಡಿದೆ ಎಂದು ಅರಭಾವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭರಮಣ್ಣಾ ಉಪ್ಪಾರ ಅವರ ನಿಲುವು. ಪಕ್ಷಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡವರಿಗೆ ವರಿಷ್ಠರು ಹೇಗೆ ಮಣೆ ಹಾಕಿದರೆಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ಪಕ್ಷಕ್ಕೆ ಕಳೆದ ಹಲವು ವರ್ಷಗಳಿಂದ ದುಡಿಯುತ್ತ ಸಂಘಟನೆಯನ್ನು ಮಾಡಿಕೊಂಡು ಬಂದಿದ್ದೇವೆ. ಅರಭಾವಿ ಮತಕ್ಷೇತ್ರದಲ್ಲಿ ಬಿಜೆಪಿ ಬಿರುಗಾಳಿಯ ಮಧ್ಯೆಯೂ ಕಾಂಗ್ರೇಸ್ ಪಕ್ಷವನ್ನು ಮುನ್ನಡೆಸಿದ್ದೇವೆ. ಅದರಲ್ಲೂ ಒಂದು ಜಿಪಂ ಹಾಗೂ 5 ತಾಪಂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿಕ್ಕೆ ಸಾಕಷ್ಟು ಶ್ರಮ ವಹಿಸಿದ್ದೇವೆ. ಇಷ್ಟಾಗಿಯೂ ನಮ್ಮನ್ನು ಕಡೆಗಣಿಸಿ ದಳವಾಯಿ ಅವರಿಗೆ ಟಿಕೇಟು ನೀಡಿರುವುದು ನಮಗೆ ಅಸಮಾಧಾನವಾಗಿದೆ. ಪಕ್ಷದ ಕಾರ್ಯಕರ್ತರೊಂದಿಗೆ ಎಂದಿಗೂ ಸಂಪರ್ಕವಿರದ ವ್ಯಕ್ತಿಯೊಬ್ಬರನ್ನು ಅಭ್ಯರ್ಥಿಯನ್ನಾಗಿ ಬಿಂಬಿಸಿರುವುದು ನಿಷ್ಠಾವಂತ ಕಾಂಗ್ರೇಸ್ಸಿಗರಿಗೆ ಅನ್ಯಾಯವಾಗಿದೆ. ಈ ಅನ್ಯಾಯವನ್ನು ತಕ್ಷಣವೇ ಪರಿಹರಿಸಬೇಕು. ದಳವಾಯಿ ಬದಲಿಗೆ ಪಕ್ಷಕ್ಕೆ ದುಡಿಯುತ್ತಿರುವವರನ್ನು ಗುರುತಿಸಿ ಟಿಕೇಟು ನೀಡಬೇಕೆಂದು ಕಲ್ಲಪ್ಪ ಲಕ್ಕಾರ ಒತ್ತಾಯಿಸಿದ್ದಾರೆ.
ಸಚಿವ ಜಾರಕಿಹೊಳಿ ಸಂಪರ್ಕಿಸಿ ಮುಂದಿನ ನಿರ್ಧಾರ : ನಮ್ಮ ನಾಯಕರಾದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಪಕ್ಷದ ಅಭ್ಯರ್ಥಿ ಬಗ್ಗೆ ತಮಗಿರುವ ಅಸಮಾಧಾನವನ್ನು ಅವರ ಮುಂದೆ ಹೇಳಿಕೊಳ್ಳುತ್ತೇವೆ. ನಮ್ಮ ಮುಂದಿನ ನಡೆಯನ್ನು ಅವರೊಂದಿಗೆ ಚರ್ಚಿಸಿ ನಿರ್ಣಯ ಕ್ಯೆಗೊಳ್ಳಲಾಗುವುದು ಎಂದು ಬ್ಲಾಕ್ ಅಧ್ಯಕ್ಷ ಭರಮಣ್ಣಾ ಉಪ್ಪಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಸದಸ್ಯ ಸುನೀಲ ಯತ್ತಿನಮನಿ, ಅರಭಾವಿ ಬ್ಲಾಕ್ ಪ್ರಚಾರ ಸಮೀತಿ ಅಧ್ಯಕ್ಷ ಸಿದ್ದಣ್ಣಾ ಮುಂಡಿಗನಾಳ, ಪ್ರಭಾಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಕೆಪಿಸಿಸಿ ಸದಸ್ಯ ಅಡಿವೆಪ್ಪ ಕಂಕಾಳಿ, ಸೇರಿದಂತೆ ಬ್ಲಾಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು.