ಗೋಕಾಕ:ಕೌಜಲಗಿಯ ಅಭಿವೃದ್ಧಿಗಾಗಿ ಹಗಲಿರುಳು ದುಡಿಯಲು ನಾವು ಸಿದ್ಧರಿದ್ದೇವೆ : ಡಾ.ರಾಜೇಂದ್ರ ಸಣ್ಣಕ್ಕಿ
ಕೌಜಲಗಿಯ ಅಭಿವೃದ್ಧಿಗಾಗಿ ಹಗಲಿರುಳು ದುಡಿಯಲು ನಾವು ಸಿದ್ಧರಿದ್ದೇವೆ : ಡಾ.ರಾಜೇಂದ್ರ ಸಣ್ಣಕ್ಕಿ
ಗೋಕಾಕ ಡಿ 27: ಪಟ್ಟಣದ ಪ್ರತಿಷ್ಠಿತ ಕೌಜಲಗಿ ಅರ್ಬನ್ ಬ್ಯಾಂಕಿಗೆ ವೃತ್ತಿಪರ ನಿರ್ದೇಶಕರಾಗಿ ನೇಮಕಗೊಂಡ ನ್ಯಾಯವಾದಿ ಎಂ.ಐ.ನೀಲನ್ನವರ ಅವರನ್ನು ಆಡಳಿತ ಮಂಡಳಿ ಸತ್ಕರಿಸಿ ಆತ್ಮೀಯವಾಗಿ ಸ್ವಾಗತಿಸಿತು.
ಮಂಗಳವಾರ ಅರ್ಬನ್ ಬ್ಯಾಂಕಿನ ನೂತನ ಕಟ್ಟಡದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಬೆಟಗೇರಿ ಗ್ರಾಮದ ನೀಲನ್ನವರ ಅವರನ್ನು ಬ್ಯಾಂಕಿನ ಚೇರಮನ್ ಡಾ. ರಾಜೇಂದ್ರ ಸಣ್ಣಕ್ಕಿ, ಉಪಾಧ್ಯಕ್ಷೆ ಗೌರಮ್ಮ ಮಹಾದೇವಪ್ಪ ಭೋವಿ ಹಾಗೂ ಮುಖ್ಯವ್ಯವಸ್ಥಾಪಕ ಕೇವಟಿ ಅವರು ಜಂಟಿಯಾಗಿ ಸತ್ಕರಿಸಿ, ಸ್ವಾಗತಿಸಿದರು. ನ್ಯಾಯವಾದಿ ನೀಲನ್ನವರ ಅವರನ್ನು ಸತ್ಕರಿಸಿ ಮಾತನಾಡಿದ ಬ್ಯಾಂಕಿನ ಆಡಳಿತ ಮಂಡಳಿ ಚೇರಮನ್ನರಾದ ಡಾ. ರಾಜೇಂದ್ರ ಸಣ್ಣಕ್ಕಿ ಅವರು, ಪಟ್ಟಣದ ಪ್ರತಿಷ್ಠಿತ ಅರ್ಬನ್ ಬ್ಯಾಂಕಿಗೆ 72 ವರ್ಷಗಳು ತುಂಬಿವೆ. ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಬ್ಯಾಂಕಿಗೆ ಹೊಸದಾಗಿ ಚುನಾವಣೆ ಜರುಗಿ ಹೊಸ ಆಡಳಿತ ಮಂಡಳಿ ರಚನೆಯಾಗಿದೆ. ಈಗ ಸರಕಾರ ವೃತ್ತಿಪರ ವಿಭಾಗದಲ್ಲಿ ಅರ್ಬನ್ ಬ್ಯಾಂಕಿಗೆ ನ್ಯಾಯವಾದಿ ನೀಲನ್ನವರ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿದ್ದು, ಅವರ ಆಯ್ಕೆಯನ್ನು ಆಡಳಿತ ಮಂಡಳಿ ತುಂಬು ಹೃದಯದಿಂದ ಸ್ವಾಗತಿಸುತ್ತದೆ. ನೀಲನ್ನವರ ನೇಮಕಕ್ಕೆ ಶ್ರಮಿಸಿದ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತ, ಬ್ಯಾಂಕಿನ ಪೂರೋಭಿವೃದ್ಧಿಗಾಗಿ ಹಗಲಿರುಳು ಆಡಳಿತ ಮಂಡಳಿ ಶ್ರಮಿಸುತ್ತದೆ. ಸಾಲ ಪಡೆದ ಸಾಲಗಾರರು ಸಮಯಕ್ಕೆ ತಕ್ಕಂತೆ ಸಾಲ ಮರುಪಾವತಿಸಿದರೆ ಬ್ಯಾಂಕು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ. ಕೌಜಲಗಿಯ ಅಭಿವೃದ್ಧಿಗಾಗಿ ಹಗಲಿರುಳು ದುಡಿಯಲು ನಾವು ಸಿದ್ಧರಿದ್ದೇವೆ. ಯಾರ ಮಾತಿಗೂ ಕಿವಿಗೊಡದೆ ಊರಿನ, ಬ್ಯಾಂಕಿನ ಬೆಳವಣಿಗೆಗಾಗಿ ಸಂಘಟನಾತ್ಮಕವಾಗಿ ದುಡಿಯುತ್ತೇವೆ. ಕೌಜಲಗಿ ಈಗಾಗಲೇ ದೇಶದಲ್ಲಿಯೇ 5 ಸ್ಥಾನ ಪಡೆದಿದೆ. ಇದು ಅಭಿವೃದ್ಧಿಯ ಕಾರ್ಯಗಳಿಂದ ಮಾತ್ರ ಸಾಧ್ಯವಾಗುತ್ತದೆಂದು ಹೇಳಿದರು.
ಸತ್ಕಾರವನ್ನು ಸ್ವೀಕರಿಸಿದ ನ್ಯಾಯವಾದಿ ಎಂ.ಐ. ನೀಲನ್ನವರ ಅವರು ಪ್ರತಿಷ್ಠಿತ ಕೌಜಲಗಿ ಅರ್ಬನ್ ಬ್ಯಾಂಕಿಗೆ ವೃತ್ತಿಪರ ವಿಭಾಗದಲ್ಲಿ ನೂತನ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲು ಶ್ರಮಿಸಿದ ಡಾ.ರಾಜೇಂದ್ರ ಸಣ್ಣಕ್ಕಿ, ಆಡಳಿತ ಮಂಡಳಿ ಹಾಗೂ ಶಾಸಕರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಅಶೋಕ ಪರುಶೆಟ್ಟಿ, ಅಡಿವೆಪ್ಪ ದಳವಾಯಿ, ಶಿವಾನಂದ ಲೋಕನ್ನವರ, ಸುಭಾಸ ಕೌಜಲಗಿ, ಅಶೋಕ ಹೊಸಮನಿ, ಶ್ರೀಶೈಲ ಗಾಣಿಗೇರ, ಭೀಮಶಿ ಉದ್ದಪ್ಪನವರ, ಮಹಾಂತಪ್ಪ ಶಿವನಮಾರಿ, ಪಿ.ಕೆ.ಪಿ.ಎಸ್. ಅಧ್ಯಕ್ಷ ಮಹೇಶ ಪಟ್ಟಣಶೆಟ್ಟಿ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ, ಬೆಟಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.