ಬೆಳಗಾವಿ:ಮೌಢ್ಯವಿರೋಧಿ ಸಂಕಲ್ಪ ದಿನಕ್ಕೆ ಚಾಲನೆ : ನಟ ಪ್ರಕಾಶ ರೈ , ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿ
ಮೌಢ್ಯವಿರೋಧಿ ಸಂಕಲ್ಪ ದಿನಕ್ಕೆ ಚಾಲನೆ : ನಟ ಪ್ರಕಾಶ ರೈ , ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿ
ಬೆಳಗಾವಿ ಡಿ 6 : ಇಲ್ಲಿನ ಸದಾಶಿವ ನಗರದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಮೌಢ್ಯವಿರೋಧಿ ಸಂಕಲ್ಪ ದಿನ’ ನಾಲ್ಕನೇ ವರ್ಷದ ಆಚರಣೆ ಇಂದು ನಡೆಯಿತು. ಬಹುಭಾಷಾ ನಟ ಪ್ರಕಾಶ ರೈ, ಶಾಸಕ ಸತೀಶ ಜಾರಕಿಹೊಳಿ, ಬೈಲೂರು ನಿಷ್ಕಲಾಮಂಟಪದ ನಿಜಗುಣಾನಂದ ಸ್ವಾಮೀಜಿ, ಜೆ ಎನ್ ಯು ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ನಗಾರಿ ಬಾರಿಸಿ ಚಾಲನೆ ನೀಡಿದರು.
ಮೂಢನಂಬಿಕೆ ಮತ್ತು ಸಕಲ ಮಾನವ ಜಾತಿಯ ಅಭಿವೃದ್ಧಿಗೆ ಅಡ್ಡ ಬರುತ್ತಿರುವ ಸಂಪ್ರದಾಯಗಳು ಮತ್ತು ಅನಾಚಾರಗಳ ವಿರುದ್ಧ ಜನರನ್ನು ಎಚ್ಚರಿಸಿ ತಿಳಿವಳಿಕೆ ನೀಡುವ ಯತ್ನದ ಸಂಜೆವರೆಗೆ ಉಪನ್ಯಾಸಗಳ ಮಾಲಿಕೆ ಕಾರ್ಯಕ್ರಮ ಮುಂದುವರೆಯಿತು. JNU ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ, ನಟ ಪ್ರಕಾಶ ರೈ, ಕೆ. ನೀಲಾ, ವಿಲ್ಫರ್ ಡಿಸೋಜಾ ಮೌಢ್ಯಗಳು ಮತ್ತು ಅನಾಚಾರಗಳ ವಿರುದ್ಧ ಜನತೆಯನ್ನು ಬಿಡಿಸುವ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. ಸ್ಮಶಾನದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ಸೇರಿದ್ದ ಸಾವಿರಾರು ಜನರ ನಡುವೆ ಮೌಢ್ಯವಿರೋಧಿ ಸಂಕಲ್ಪ ದಿನ ನಡೆಯಿತು.
ಸ್ಮಶಾನದಲ್ಲಿ ಇಂದೂ ಸಹ ಎಂದಿನಂತೆ ತೀರಿಹೋದವರ ಅಂತಿಮ ಕ್ರಿಯೆಗಳು ಸಹ ನಡೆದಿದ್ದವು. ಪುಸ್ತಕ ಮತ್ತು ಹಲವು ಸಾಮಗ್ರಿಗಳ ವ್ಯಾಪಾರ ಸಹ ನಡೆದಿತ್ತು. ಸಂಕಲ್ಪ ದಿನ ಕಾರ್ಯಕ್ರಮ ಇಡೀ ದಿನ ಸಂಜೆವರೆಗೆ ನಡೆಯಲಿದೆ. ಸತ್ತವರ ಕಳೆಬರಗಳ ಪೂಜೆ ಮತ್ತು ಸಂಸ್ಕಾರ ಮತ್ತು ಅಗ್ನಿಸ್ಪರ್ಷ ಕ್ರಿಯೆಗಳು ಕಾರ್ಯಕ್ರಮ ವೇದಿಕೆ ಪಕ್ಕ ಸಹಜವಾಗಿ ನಡೆದಿದ್ದವು.