ಗೋಕಾಕ:ಬಿಇಒ ಜಿ.ಬಿ.ಬಳಗಾರ ಗೆ ಸಿಕ್ತು ಮೊದಲ “ರಾಷ್ಟ್ರೀಯ ಪ್ರಶಸ್ತಿ”

ಬಿಇಒ ಜಿ.ಬಿ.ಬಳಗಾರ ಗೆ ಸಿಕ್ತು ಮೊದಲ “ರಾಷ್ಟ್ರೀಯ ಪ್ರಶಸ್ತಿ”
ಗೋಕಾಕ ಸೆ 3 : ಭಾರತೀಯ ಶೈಕ್ಷಣಿಕ ರಂಗದಲ್ಲಿ ಅತ್ಯುನ್ನತ ಗೌರವಗಳಲ್ಲಿ ಒಂದಾದ ಅತ್ಯುತ್ತಮ ಶಿಕ್ಷಣಾಧಿಕಾರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವು ಗುರುವಾರದಂದು ನವದೆಹಲಿಯಲ್ಲಿ ಜರುಗಿತು.
ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಆಯೋಜಿಸುವ ‘ ಮಿಸ್ ಕಾಲ ಮಾಡಿ ಉತ್ತರ ಪಡೆಯಿರಿ” ವಿನೂತನ ಕಾರ್ಯಕ್ರಮಕ್ಕೆ ಭಾರತ ಸರಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ ನವದೆಹಲಿ (ನೀಫಾ) ಇವರು ಪ್ರತಿ ವರ್ಷ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಿ ಉತ್ತಮ ಪರಿಣಾಮ ಪಡೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗಾಗಿ ಕೊಡಮಾಡುವ 2024-25ನೇ ಸಾಲಿನ “ರಾಷ್ಟ್ರ ಪ್ರಶಸ್ತಿ” ಯನ್ನು ಬಿಇಒ ಜಿ.ಬಿ.ಬಳಗಾರ ಅವರು ಸ್ವೀಕರಿಸಿದರು. ಈ ವರ್ಷ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕದ ಏಕೈಕ ಬಿಇಒ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕಳೆದ 1 ದಶಕದಿಂದ ಗೋಕಾಕ ವಲಯದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ ನವದೆಹಲಿಯವರು ವತಿಯಿಂದ ಈ ಪ್ರಶಸ್ತಿಯನ್ನು ಶಿಕ್ಷಣ ತಜ್ಞ ಪದ್ಮಶ್ರೀ ಪ್ರೋ.ಜಿ.ಎಸ್.ರಜಪೂತ ಅವರು ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ನೀಫಾ ಸಂಸ್ಥೆಯ ಕುಲಪತಿ ರಾಮ ದುಬೇ, ಉಪಕುಲಪತಿ ಶಶಿಕಲಾ ವಂಜಾರಿ,ಕಾರ್ಯಕ್ರಮ ನಿರ್ದೇಶಕಿಯರುಗಳಾದ ಡಾ. ವಿ.ಸುಚರಿತ್ರಾ, ವಿನೀತಾ ಶಿರೋರಿ ಉಪಸ್ಥಿತರಿದ್ದರು.
