ಗೋಕಾಕ:ಅನುಭವ ಮತ್ತು ಜ್ಞಾನದಿಂದ ಭಕ್ತಿ ಹುಟ್ಟುತ್ತದೆ : ಮುರುಘರಾಜೇಂದ್ರ ಶ್ರೀ ಅಭಿಮತ

ಅನುಭವ ಮತ್ತು ಜ್ಞಾನದಿಂದ ಭಕ್ತಿ ಹುಟ್ಟುತ್ತದೆ : ಮುರುಘರಾಜೇಂದ್ರ ಶ್ರೀ ಅಭಿಮತ
ಗೋಕಾಕ ಮೇ 3 : ಅನುಭವ ಮತ್ತು ಜ್ಞಾನದಿಂದ ಭಕ್ತಿ ಹುಟ್ಟುತ್ತದೆ. ನಿಷ್ಕಾಮ ಭಕ್ತಿಯಿಂದ ಮಾತ್ರ ಪರಶಿವನ ಒಲಿಸಿಕೊಳ್ಳಲು ಸಾಧ್ಯ ಎಂದು ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ , ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 196ನೇ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಲಿಂಗಾಂಗ ಸಾಮರಸ್ಯವೆ ನಿಜವಾದ ಪೂಜೆಯಾಗಿದ್ದು, ಈ ನಿಟ್ಟಿನಲ್ಲಿ ವಚನಗಳು ನಮಗೆ ಪ್ರತಿ ಕ್ಷಣ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.
ನದಿ ಇಂಗಳಗಾವಿಯ ಗುರುಲಿಂಗ ದೇವರ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ಭೂಮಿಯ ಮೇಲಿರುವ ಸಕಲ ಪಶು, ಪಕ್ಷಿ, ಪ್ರಾಣಿಗಳು ನೆಮ್ಮದಿಯಿಂದ ಬದುಕುತ್ತಿವೆ. ಆ ನೆಮ್ಮದಿ ಮನುಷ್ಯನಿಗೆ ಇಲ್ಲವಾಗಿದೆ. ಮನುಷ್ಯರು ಅತಿಯಾಗಿ ಸಂಸಾರಕ್ಕೆ ಅಂಟಿಕೊಂಡು, ಸ್ವಾರ್ಥಿಯಾಗಿ ಬದುಕುತ್ತಿದ್ದಾರೆ. ನಿಷ್ಕಾಮ ಭಕ್ತಿಯನ್ನು ಅನುಸರಿಸಿ, ವಿಶ್ವಾಸ ಮತ್ತು ನಂಬಿಕೆಯಿಂದ ಭಗವಂತನನ್ನು ಕಾಣಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು.
ವೇದಿಕೆಯ ಮೇಲೆ ಲಿಂಗಾಯತ ಮಹಿಳಾ ವೇದಿಕೆಯ ಅಧ್ಯಕ್ಷ ಶ್ರೀಮತಿ ಸೇವಂತಾ ಅಶೋಕ ಮುಚ್ಚಂಡಿಹಿರೇಮಠ, ನೀಲಕಂಠ ಚನ್ನಬಸಪ್ಪ ತೋಟಗಿ, ಪ್ರಸನ್ನ ತಂಬಾಕೆ, ಮಲ್ಲಪ್ಪ ನೇಸರಗಿ, ಮಲ್ಲಿಕಾರ್ಜುನ್ ರಾಮಯ್ಯ ಮಡ್ದೇನಿ, ಅಭಿಷೇಕ ಮುಚ್ಚಂಡಿ ಹಿರೇಮಠ, ಆರ್.ಎಲ್. ಮಿರ್ಜಿ,ಎಸ್ ಕೆ ಮಠದ ಉಪಸ್ಥಿತರಿದ್ದರು.
