ಗೋಕಾಕ:ಫೆಬ್ರುವರಿ 1,2 ಮತ್ತು 3 ರಂದು 21ನೇ ಶರಣ ಸಂಸ್ಕೃತಿ ಉತ್ಸವ: ಮುರುಘರಾಜೇಂದ್ರ ಶ್ರೀ

ಫೆಬ್ರುವರಿ 1,2 ಮತ್ತು 3 ರಂದು 21ನೇ ಶರಣ ಸಂಸ್ಕೃತಿ ಉತ್ಸವ: ಮುರುಘರಾಜೇಂದ್ರ ಶ್ರೀ
ಗೋಕಾಕ ಡಿ 1 : ಬರುವ ಫೆಬ್ರುವರಿ 1,2 ಮತ್ತು 3 ರಂದು
21ನೇ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಕಾಯಕಶ್ರೀ ಪ್ರಶಸ್ತಿಯನ್ನು ಸಮಾಜ ಸೇವಕಿ ಹೋರಾಟಗಾರ್ತಿ ಆಂಧ್ರಪ್ರದೇಶದ ಸುನೀತಾ ಕೃಷ್ಣನ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಹಮ್ಮಿಕೊಂಡ 21 ನೇ ವರ್ಷದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆಬ್ರುವರಿ 1ರಂದು ಬೆಳಿಗ್ಗೆ ಉದ್ಯೋಗ ಮೇಳ , ಸಾಯಂಕಾಲ 6 ಘಂಟೆಗೆ ಸಂಗೀತ ಹಾಗೂ ಯುವ ಸಮಾವೇಶ , ಫೆಬ್ರವರಿ 2 ರಂದು ಕಾಯಕಶ್ರೀ ಪ್ರಶಸ್ತಿ ಮತ್ತು ಮಹಿಳಾ ಸಮಾವೇಶ, ಫೆಬ್ರವರಿ 3 ರಂದು ಮುಂಜಾನೆ 6 ಘಂಟೆಗೆ ಕರ್ತೃ ಗದ್ದುಗೆ ಅಭಿಷೇಕ ಮತ್ತು ವಚನ ತಾಡೋಳೆ ಪ್ರತಿಗಳು ಹಾಗೂ ವಿಶ್ವ ಗುರು ಬಸವಣ್ಣನವರ ಭಾವಚಿತ್ರ ಮೆರವಣಿಗೆ ನಡೆಯಲಿದೆ, ಪ್ರತಿದಿನದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಿದ್ವಾಂಸರು, ಶ್ರೀಗಳು ಭಾಗವಹಿಸಿ ತಮ್ಮ ವಿಚಾರಗಳನ್ನು ಉಣಬಡಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಪ್ರತಿದಿನ ಸಾಯಂಕಾಲ 6 ಘಂಟೆಗೆ ಜರುಗಲಿದ್ದು, ಸದ್ಬಕ್ತರು ಪ್ರತಿದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿದರು.
ಈ ಬಾರಿಯ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷರಾಗಿ ಶಂಕರ ಗೋರೋಶಿ, ಪ್ರಧಾನ ಕಾರ್ಯಾದರ್ಶಿಯಾಗಿ ಬಿ.ಬಿ.ಉಳ್ಳಾಗಡ್ಡಿ, ಕೋಶಾಧ್ಯಕ್ಷರಾಗಿ ಮಹಾಂತೇಶ ಕುಡಚಿ ಅವರನ್ನು ಆಯ್ಕೆ ಮಾಡಲಾಯಿತು.
ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮುಖಂಡರುಗಳಾದ ಎಂ.ಡಿ.ಚುನಮರಿ, ಜಯಾನಂದ ಮುನವಳ್ಳಿ, ಡಾ.ವಿಶ್ವನಾಥ್ ಸುಣಧೋಳಿಮಠ, ಡಾ.ಮಹಾಂತೇಶ ಕಡಾಡಿ, ಮಲ್ಲಿಕಾರ್ಜುನ ಈಟಿ, ಮಲ್ಲಿಕಾರ್ಜುನ ಕಲ್ಲೋಳಿ, ಬಸನಗೌಡ ಪಾಟೀಲ್, ಸೇರಿದಂತೆ ಅನೇಕರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಬಟಕುರ್ಕಿಯ ಚೌಕಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಬಸವಪ್ರಭು ಸ್ವಾಮೀಜಿ ಸೇರಿದಂತೆ ಮಠದ ನೂರಾರು ಸದ್ಭಕ್ತರು ಉಪಸ್ಥಿತರಿದ್ದರು .

