ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ : ಜಯಾನಂದ ಮುನವಳ್ಳಿ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ : ಜಯಾನಂದ ಮುನವಳ್ಳಿ
ಗೋಕಾಕ ಜು 12 : ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ಅವರು, ಶನಿವಾರದಂದು ನಗರದ ಕೆಎಲ್ಇ ಐಟಿಐನ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
2004ರಲ್ಲಿ ನಗರದಲ್ಲಿ ಕೆಎಲ್ಇ ಸಂಸ್ಥೆಯಿಂದ ಪ್ರಾರಂಭಿಸಲಾದ ಐಟಿಐ ಕಾಲೇಜು ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿ ಈ ಬಾರಿ ಬೆಂಗಳೂರಿನ ಟುಯೋಟೊ ಕಿರ್ಲೋಸ್ಕರ ಕಂಪನಿಗೆ 55 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಸಂತಸ ತಂದಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇದ್ದು ಅದನ್ನು ಪ್ರೋತ್ಸಾಹಿಸಿಕೊಳ್ಳಬೇಕು. ಉನ್ನತ ಗುರಿಯೊಂದಿಗೆ ಕಠೀಣ ಪರಿಶ್ರಮದಿಂದ ಸ್ವ ಉದ್ಯೋಗಿಗಳಾಗಿ ಇತರರಿಗೂ ಉದ್ಯೋಗ ನೀಡಿ ತಮ್ಮ ಭವಿಷ್ಯದೊಂದಿಗೆ ಇತರರ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೆಸ್ಕಾಂನ ಘಟಪ್ರಭಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ನಿರಂಜನಗೌಡ ಮೂಡಲಗಿ ಮಾತನಾಡಿ, ತಾವು ಕಲಿತ ಜ್ಞಾನದ ಸದುಪಯೋಗದಿಂದ ವೃತ್ತಿ ಜೀವನದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಅರಭಾಂವಿಯ ಜಿಟಿಟಿಸಿ ಪ್ರಾಚಾರ್ಯ ಉಮೇಶ ಬಡಕುಂದ್ರಿ, ಸ್ಥಳೀಯ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಮ್ ಡಿ ಚುನಮರಿ, ಆಡಳಿತಾಧಿಕಾರಿ ಜಿ ಎಮ್ ಅಂದಾನಿ, ಪ್ರಾಚಾರ್ಯ ಮಂಜುನಾಥ ಕಂಬಾರ ಇದ್ದರು.
ಇದೇ ಸಂದರ್ಭದಲ್ಲಿ ಟುಯೋಟೊ ಕಿರ್ಲೋಸ್ಕರ ಕಂಪನಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆದೇಶ ಪತ್ರ ನೀಡಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.