ಗೋಕಾಕ:ಜಾತ್ರಾ ಸಮಯದಲ್ಲಿ ಕಳೆದ ಬಾರಿ ಆದ ಸಮಸ್ಯೆಗಳು ಮರಕಳಿಸದಂತೆ ನಿಗಾವಹಿಸಿ : ಸಚಿವ ಸತೀಶ ಸೂಚನೆ

ಜಾತ್ರಾ ಸಮಯದಲ್ಲಿ ಕಳೆದ ಬಾರಿ ಆದ ಸಮಸ್ಯೆಗಳು ಮರಕಳಿಸದಂತೆ ನಿಗಾವಹಿಸಿ : ಸಚಿವ ಸತೀಶ ಸೂಚನೆ
ಗೋಕಾಕ ಜೂ 28 : ಗೋಕಾಕ ಗ್ರಾಮ ದೇವತೆಯರ ಜಾತ್ರೆ ಐತಿಹಾಸಿಕ ಜಾತ್ರೆಯಾಗಿದ್ದು ಲಕ್ಷಾಂತರ ಜನ ಈ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಜಾತ್ರಾ ಸಮಯದಲ್ಲಿ ಕಳೆದ ಬಾರಿ ಆದ ಸಮಸ್ಯೆಗಳು ಮರಕಳಿಸದಂತೆ ನಿಗಾವಹಿಸುವದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು, ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ಈಗಾಗಲೇ ನಗರಸಭೆಯಿಂದ ಕಳೆದ ಒಂದು ತಿಂಗಳಿನಿಂದ ನಗರದ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಪೋಲಿಸ್ ಇಲಾಖೆಯವರು ಕಾನೂನು ಸುವ್ಯಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಿಬ್ಬಂಧಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಜನದಟ್ಟನೆ ಆಗದಂತೆ ನಗರದಲ್ಲಿ ವಾಹನಗಳ ಸಂಚಾರಕ್ಕೆ ಸೂಕ್ತಕ್ರಮವನ್ನು ಇಲಾಖೆ ಕೈಗೊಂಡಿದೆ. ಸಾರ್ವಜನಿಕರು ಸಹ ಇಲಾಖೆಯೊಂದಿಗೆ ಸಹಕಾರ ನೀಡಿ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದರು.
ಬ್ಯಾನರ್ ಅಳವಢಿಕೆ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು ಜಾತ್ರಾ ಮಹೋತ್ಸವ ಶಾಂತಿಯುತವಾಗಿ ನಡೆಯಬೇಕು ಆ ನಿಟ್ಟಿನಲ್ಲಿ ನಗರಸಭೆಯಿಂದ ಬ್ಯಾನರ್ ಅಳವಢಿಸುವವರಿಗೆ ಅನುಮತಿಯನ್ನು ನೀಡಬೇಕು. ಈ ವಿಚಾರವಾಗಿ ಯಾರೂ ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ. ಇಲ್ಲಿ ಎಲ್ಲರು ಬ್ಯಾನರಗಳನ್ನು ಹಾಕಿಕೊಳ್ಳಬಹುದು. ಈ ಜಾತ್ರೆ ಭಂಡಾರದ ಜಾತ್ರೆಯಾಗಿದ್ದು ಭಂಡಾರದ ಟೇಸ್ಟಿಂಗ್ ಮಾಡಿಸಿ ಮಾರಾಟಕ್ಕೆ ಅವಕಾಶ ಕಲ್ಪಸಿಲಾಗುತ್ತಿದೆ. ಈ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಎಲ್ಲ ಸಹಕರಿಸಬೇಕು. ಜಾತ್ರೆಗೆ ಬರುವ ಜನರು ಗೋಕಾಕ ಜಲಪಾತ ವೀಕ್ಷಣೆಗೆ ತೆರಳುತ್ತಾರೆ ಅಲ್ಲಿಯೂ ಸಹ ಹೆಚ್ಚಿನ ಸಿಬ್ಬಂಧಿ ನಿಯೋಜನೆ ಮಾಡಲಾಗುತ್ತದೆ ಎಂದರು.
ಜಾತ್ರಾ ಕಮೀಟಿ ಅಧ್ಯಕ್ಷ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ಮಾತನಾಡಿ, ಕಳೆದ ಮೂರು ದಿನಗಳಿಂದ ಬ್ಯಾನರ್ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ, ಮನಸ್ತಾಪಗಳ ತಿಳಿದು ಬಂದಿಲ್ಲ. ತಾಲೂಕಾಡಳಿತ ಹಾಗೂ ನಗರಸಭೆಯವರು ಎಲ್ಲರಿಗೂ ಅವಕಾಶ ನೀಡಲಿ. ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯೊಂದಿಗೆ ಜಾತ್ರಾ ಕಮೀಟಿಯವರ ಸಹಕಾರವಿದ್ದು ಈ ಐತಿಹಾಸಿಕ ಜಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸೋಣ ಎಂದರು.
ಜಿಲ್ಲಾಧಿಕಾರಿ ಮಹ್ಮದ ರೋಷಣ ಮಾತನಾಡಿ, ಕಳೆದ ಬಾರಿ ಜಾತ್ರೆಯ ಸಂದರ್ಭದಲ್ಲಿ ಆದ ಟ್ರಾಫೀಕ್, ಪಾರ್ಕಿಂಗ್ ಮತ್ತು ಜೇಬುಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದು ಇದಕ್ಕೆ ಪೋಲಿಸ್ ಇಲಾಖೆಯಿಂದ ಸುಮಾರು 2500ಕ್ಕೂ ಹೆಚ್ಚುಜನ ಸಿಬ್ಬಂಧಿ ನಿಯೋಜನೆ ಹಾಗೂ ಫೇಸ್ ಟ್ರ್ಯಾಪಿಂಗ್ ಕ್ಯಾಮೆರಾ ಅಳವಢಿಸಲಾಗುತ್ತಿದೆ ಎಂದು ಕಳ್ಳರಿಗೆ ಎಚ್ಚರಿಕೆ ನೀಡಿದ ಅವರು, ಕಡಬಗಟ್ಟಿ ರಸ್ತೆ ಮಾರ್ಗವಾಗಿ ಬರುವ ಜನರಿಗೆ ಎರಡು ಕಡೆ ಪಾರ್ಕಿಂಗ್, ಗೋಕಾಕ ಫಾಲ್ಸ ಮಾರ್ಗವಾಗಿ, ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಹಾಗೂ ಲೋಳಸೂರ ಮಾರ್ಗವಾಗಿ ಬರುವ ಸಾರ್ವಜನಿಕರಿಗೆ ಎರಡೆರಡು ಕಡೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ನಗರದ ಮಯೂರ ಶಾಲೆಯ ಆವರಣದಲ್ಲಿ ಸೇರಿ 9ಸ್ಥಳಗಳಲ್ಲಿ ಪಾರ್ಕಿಂಗ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಕಮೀಟಿಯಿಂದ ಡ್ರೋಣಗಳ ವ್ಯವಸ್ಥೆ ಹಾಗೂ ಸಾರ್ವಜನಿಕರು ಇರುವ ಸ್ಥಳದಲ್ಲೆ ಎಲ್.ಇ.ಡಿ ಸ್ಕ್ರೀನ್ಗಳ ಮೂಲಕ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿದ್ದು ಜಾತ್ರಾ ಕಮೀಟಿಗೆ ಜಿಲ್ಲಾಧಿಕಾರಿಗಳು ಧನ್ಯವಾದ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಪ್ರಮುಖ ಸ್ಥಳಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಮತ್ತು ಅಂಬ್ಯಲೇನ್ಸ್ ವ್ಯವಸ್ಥೆ ಮಾಡಲಾಗುತ್ತದೆ. ಅಗ್ನಿ ಅವಘಡಗಳು ಆಗದಂತೆ ಹೆಸ್ಕಾಂ ಅಧಿಕಾರಿಗಳು ರಥ ಬೀದಿಯ ಪಕ್ಕದಲ್ಲಿ ಬರುವ ಗಿಡ ಮರಗಳ ರೆಂಬೆಕೊಂಬೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಲು ಹಾಗೂ ರಸ್ತೆಯ ಕ್ರಾಸ್ ಮೇಲೆ ಹಾಕಲಾಗ ವೈರಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ನಗರದ ಗ್ರಾಮ ದೇವತೆಯರ ದೇವಸ್ಥಾನ ಸೇರಿ ರಥ ಬೀದಿಯ ವರೆಗೆ ಸಂಚರಿಸಲು ಉಚಿತ ಸಾರಿಗೆ ಬಸ್ಸುಗಳ ವ್ಯವಸ್ಥೆ, ಹುಬ್ಬಳ್ಳಿ-ಧಾರವಾಡ ಭಾಗದಿಂದ ಬರುವ ಸಾರಿಗೆ ವಾಹನಗಳಿಗೆ ಎಪಿಎಮ್ಸಿಯಲ್ಲಿ ನಿಲುಗಡೆ ವ್ಯವಸ್ಥೆ ಮಾಡಿದ್ದು ಅಲ್ಲಿಂದ ನಗರಕ್ಕೆ ಬರಲು ಬಸ್ಸುಗಳ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚಕಟ್ಟಾಗಿ ನಿರ್ವಹಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕರು ದೇವಿಯರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.