ಗೋಕಾಕ:ಕಾನೂನು ವಿದ್ಯಾರ್ಥಿಗಳು ಒಳ್ಳೆಯ ನ್ಯಾಯವಾದಿ ಆಗಬೇಕು ಎಂಬ ಆಸೆಯಿಂದ ವಿಧ್ಯಾಭ್ಯಾಸ ಮಾಡಬೇಕು : ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ

ಕಾನೂನು ವಿದ್ಯಾರ್ಥಿಗಳು ಒಳ್ಳೆಯ ನ್ಯಾಯವಾದಿ ಆಗಬೇಕು ಎಂಬ ಆಸೆಯಿಂದ ವಿಧ್ಯಾಭ್ಯಾಸ ಮಾಡಬೇಕು : ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ
ಗೋಕಾಕ ಅ 19 : ಕಾನೂನು ವಿದ್ಯಾರ್ಥಿಗಳು ಒಳ್ಳೆಯ ನ್ಯಾಯವಾದಿ ಆಗಬೇಕು ಎಂಬ ಆಸೆಯಿಂದ ವಿಧ್ಯಾಭ್ಯಾಸ ಮಾಡಿದರೆ ವೃತ್ತಿಯಲ್ಲಿ ಸಾಧಿಸಲು ಸಾಧ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಹೇಳಿದರು.
ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದವರು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡಿದರು.
ವಕೀಲ ವೃತ್ತಿ ಅಭ್ಯಾಸದ ಸಮಯದಲ್ಲಿ ಒಳ್ಳೆಯ ನ್ಯಾಯವಾದಿ ಆದರೆ ಮುಂದೆ ಒಳ್ಳೆಯ ನ್ಯಾಯಮೂರ್ತಿ ಆಗಬಹುದು. ವಕೀಲ ವೃತ್ತಿಯಲ್ಲಿ ಪ್ರಾಮಾಣಿಕತೆ ಅತ್ಯಂತ ಮುಖ್ಯವಾದದ್ದು, ವೃತ್ತಿಯಲ್ಲಿ ಒಮ್ಮೆ ಹೆಸರು ಕೆಡಿಸಿಕೊಂಡರೆ ಎಂದಿಗೂ ಒಳ್ಳೆಯ ನ್ಯಾಯವಾದಿ ಅನಿಸಿಕೊಳ್ಳಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ವಕೀಲ ವೃತ್ತಿಯ ಅಭ್ಯಾಸದ ಸಮಯದಲ್ಲಿ ಜಾಗೃಕತೆಯಿಂದ ಅಭ್ಯಾಸ ಮಾಡಬೇಕು.
ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಇದು ಜೀವನದಲ್ಲಿ ಮತ್ತೆ ಸಿಗೋದಿಲ್ಲ. ಒಳ್ಳೆಯ ವಿದ್ಯಾಭ್ಯಾಸ ಮಾಡಿ ಒಳ್ಳೆಯ ನ್ಯಾಯವಾದಿ ಆಗಬೇಕು. ನ್ಯಾಯವಾದಿ ಆಗುವುದು ಹಣ ಗಳಿಸಲು ಅಲ್ಲಾ ಬದಲಾಗಿ ಸಮಾಜ ಸೇವೆ ಮಾಡಲು ಎಂಬ ದೇಹ ಹೊಂದಿ ವಿದ್ಯಾಭ್ಯಾಸ ಮಾಡಬೇಕು. ಒಬ್ಬ ವಕೀಲ ಎಷ್ಟು ಪಳಗುತ್ತಾನೆ ಅಷ್ಟು ಒಳ್ಳೆಯ ವಕೀಲನಾಗಿ ಬೆಳೆಯಲು ಸಾಧ್ಯ.
ವಕೀಲ ವಿದ್ಯಾಭ್ಯಾಸ ಪ್ರಾರಂಭಿಸುವ ಮೊದಲು ವಿದ್ಯಾರ್ಥಿ ಮಾನಸಿಕವಾಗಿ ತಯಾರಾಗಿ ನ್ಯಾಯವಾದಿ ವೃತ್ತಿಗೆ ಸೇರಬೇಕು. ನ್ಯಾಯವಾದಿ ಹುದ್ದೆಯಲ್ಲಿ ಹಲವು ಕಷ್ಟಗಳು ಬರುತ್ತವೆ ಅದನ್ನು ಎದುರಿಸಿದರೆ ಮಾತ್ರ ಒಬ್ಬ ಒಳ್ಳೆಯ ಯನ್ಯಾಯವಾದಿ ಆಗಬಹುದು.
ನ್ಯಾಯಾಂಗ ವಿದ್ಯಾಭ್ಯಾಸದಲ್ಲಿ ಹಲವು ಅವಕಾಶಗಳು ಇವೆ ಅವುಗಳನ್ನು ಅರಿತು ಕಷ್ಟಪಟ್ಟು ಓದಿದರೆ ಒಳ್ಳೆಯ ನ್ಯಾಯವಾದಿ ಮತ್ತು ನ್ಯಾಯಾಧೀಶರು ಆಗಬಹುದು.
ಸುಪ್ರೀಂಕೋರ್ಟ್, ಹೈಕೋರ್ಟ್ ನಲ್ಲಿ ಪ್ರ್ಯಾಕ್ಟಿಸ ಮಾಡಿ ಒಳ್ಳೆಯ ವಕೀಲರಾಗಲು ಸಾಧ್ಯವಿದೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ಅಭ್ಯಾಸ ಮಾಡಿದ ವಕೀಲರಿಗೆ ನ್ಯಾಯಮೂರ್ತಿಯಾಗಲು ಅವಕಾಶವಿದೆ ಅದರ ಸದುಪಯೋಗ ಪಡೆದುಕೊಂಡು ವೃತ್ತಿಯ ಜೊತೆಗೆ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಆ ದಿಸೆಯಲ್ಲಿ ವಕೀಲ ವೃತ್ತಿ ಓದುತ್ತಿರುವ ವಿದ್ಯಾರ್ಥಿಗಳು ಕಾರ್ಯಪ್ರವೃತವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಅಪ್ರತಿಮ ವ್ಯಕ್ತಿಗಳನ್ನು ಆದರ್ಶವಾಡಿಟ್ಟುಕೊಂಡು ಓದಬೇಕು. ಅವರ ಹಾಗೆ ಆಗದಿದ್ದರೂ ಸಹ ಅವರ ಹಾಗೆ ಆಗುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಒಳ್ಳೆಯ ಜೀವನ ರೂಪಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ವಹಿಸಿದ್ದರು.
ವೇದಿಕೆಯಲ್ಲಿ ಆಡಳಿತಾಧಿಕಾರಿ ಬಿ.ಕೆ ಕುಲಕರ್ಣಿ, ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ಜಿ.ಆರ್.ನಿಡೋನಿ ಉಪಸ್ಥಿತರಿದ್ದರು.