ಬೆಳಗಾವಿ:ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬಿಜೆಪಿಯ ರಾಜೀವ ಟೋಪಣ್ಣವರ ಸೇರಿ ಹಲವರ ಬಂಧನ
ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬಿಜೆಪಿಯ ರಾಜೀವ ಟೋಪಣ್ಣವರ ಸೇರಿ ಹಲವರ ಬಂಧನ
ಬೆಳಗಾವಿ ಅ 15: ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಪರಿಶೀಲನೆ ಮತ್ತು ಗ್ರಾಮೀಣ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಬೆಳಗಾವಿಯ ಧರ್ಮನಾಥ ಭವನದಿಂದ ತೆರಳುತ್ತಿದ್ದ ಎಐಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ತೋರಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.
ವೇಣುಗೋಪಾಲ್ ಅವರು ಧರ್ಮನಾಥ ಭವನ ಆವರಣದಿಂದ ನಿರ್ಗಮಿಸುವ ಸುಳಿವು ಸಿಗುತ್ತಿದ್ದಂತೆಯೇ ಹೊರಗಡೆ ಗುಂಪು ಸೇರಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ವೇಣುಗೋಪಾಲ್ ವಿರುದ್ಧ ಘೋಷಣೆ ಕೂಗಿದರು. ಕಪ್ಪು ಬಾವುಟ ಹಿಡಿದು ವೇಣುಗೋಪಾಲ್ ಅವರು ತೆರಳುತ್ತಿದ್ದ ವಾಹನವನ್ನು ತಡೆಯಲು ಯತ್ನಿಸಿದರು.
ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರನ್ನು ಚದುರಿಸಲು ಹಲವು ಪ್ರಯತ್ನ ಕೈಗೊಂಡು, ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಲವನ್ನು ಬಂದೋಬಸ್ತ್ ಗೆ ನಿಯೋಜಿಸಿದರು. ನಂತರ ಪ್ರತಿಭಟನೆ ನಿರತ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರನ್ನು ವಶಕ್ಕೆ ತೆಗೆದುಕೊಂಡರು.
ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಜಿಲ್ಲಾ ಕಾರ್ಯದರ್ಶಿ ರಾಜು ಟೋಪಣ್ಣವರ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಕೆ.ಸಿ.ವೇಣುಗೋಪಾಲ್ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ಕೇರಳದ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಬಿಜೆಪಿ ರಾಜ್ಯ ಘಟಕದ ಸೂಚನೆಯಂತೆ ಪ್ರತಿಭಟನೆ ನಡೆದಿದೆ ಎಂದು ಗೊತ್ತಾಗಿದೆ.