ಬೆಳಗಾವಿ: ಅರಣ್ಯ ಸಚಿವ ಕತ್ತಿ ನಿಧನ : ರಾಜ್ಯಾದ್ಯಂತ ಇಂದು ಶೋಕಾಚರಣೆ, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

ಅರಣ್ಯ ಸಚಿವ ಕತ್ತಿ ನಿಧನ : ರಾಜ್ಯಾದ್ಯಂತ ಇಂದು ಶೋಕಾಚರಣೆ, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ
ನಮ್ಮ ಬೆಳಗಾವಿ ಇ – ವಾರ್ತೆ ಬೆಳಗಾವಿ ಸೆ :7
ಅರಣ್ಯ ಮತ್ತು ಆಹಾರ ನಾಗರೀಕ ಸಚಿವ ಉಮೇಶ್ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಶೋಕಾಚರಣೆ ಘೋಷಣೆ ಮಾಡಲಾಗಿದೆ.
ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಹಾಗೂ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು.
ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಿಲಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಇಂದು ಒಂದು ದಿನ ರಜೆ ಘೋಷಿಸಲಾಗಿದೆ.
ಹಾಲಿ ಸಚಿವರು ನಿಧನರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮೂರು ದಿನ ಶೋಕಾಚರಣೆ ಮಾಡಬೇಕು. ಆದರೆ ಒಂದು ದಿನ ಮಾತ್ರ ಶೋಕಾಚರಣೆ ಘೋಷಿಸಲಾಗಿದೆ.
ಆರು ಪಕ್ಷಗಳಿಂದ 9 ಬಾರಿ ಸ್ಪರ್ಧೆ, 8 ಬಾರಿ ಗೆಲುವು ಸಾಧಿಸಿದ್ದ ಉಮೇಶ್ ಕತ್ತಿ
ತಮ್ಮ 25ನೇ ವಯಸ್ಸಿನಲ್ಲಿ ಶಾಸಕರಾಗಿ ಆಯ್ಕೆಯಾದ ಉಮೇಶ್ ಕತ್ತಿ ಅವರು 8 ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1985ರಲ್ಲಿ ಮೊದಲ. ಬಾರಿಗೆ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ಉಮೇಶ್ ಕತ್ತಿ ನಂತರದಲ್ಲಿ ಆರು ಪಕ್ಷಗಳನ್ನು ಬದಲಾಯಿಸಿದ್ದರು.
ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕತ್ತಿ ಅವರು 2004 ರಲ್ಲಿ ಮಾತ್ರ ಸೋತಿದ್ದರು. ಉಳಿದಂತೆ ಸತತ ಗೆಲುವಿನ ಮೂಲಕ ಆಯ್ಕೆಯಾಗಿ ಸಕ್ಕರೆ, ಬಂಧಿಖಾನೆ, ಕೃಷಿ, ಆಹಾರ ಮತ್ತು ನಾಗರೀಕ, ಅರಣ್ಯ ಸಚಿವರಾಗಿದ್ದರು.
ಮೊದಲ ಬಾರಿಗೆ ಜನತಾ ಪಕ್ಷ 1989, 1994ರಲ್ಲಿ ಜನತಾದಳ, 1999ರಲ್ಲಿ ಸಂಯುಕ್ತ ಜನತಾದಳ, 2004ರಲ್ಲಿ ಕಾಂಗ್ರೆಸ್, 2008ರಲ್ಲಿ ಜೆಡಿಎಸ್ ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿಕೊಂಡು ಬಂದಿದ್ದರು.
ನಾನು ಮುಖ್ಯಮಂತ್ರಿ ಆಕಾಂಕ್ಷಿ, ಪ್ರತ್ಯೇಕ ರಾಜ್ಯದ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುತ್ತಿದ್ದ ಉಮೇಶ್ ಕತ್ತಿ ರಾಜಕೀಯವಾಗಿ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.
ನಿನ್ನೆ ರಾತ್ರಿ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದ ಸಚಿವ ಉಮೇಶ್ ಕತ್ತಿ ಅವರಿಗೆ ಈ ಹಿಂದೆ ಮೂರು ಬಾರಿ ಕೂಡ ಹೃದಯಾಘಾತ ಸಂಭವಿಸಿತ್ತು ಎಂಬುದು ತಿಳಿದುಬಂದಿದೆ.
61 ವಯಸ್ಸಿನಲ್ಲಿ ಮೃತಪಟ್ಟಿರುವ ಉಮೇಶ್ ಕತ್ತಿ ಅವರು ಹೃದಯಾಘಾತ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ಇಂದು ಸಂಜೆ ಬೆಳಗಾವಿ ಜಿಲ್ಲೆಯ ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಹುಟ್ಟಿ ಬೆಳೆದ ಊರಿನಲ್ಲಿ, ತಂದೆ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಂಜೆ ಐದು ಗಂಟೆಗೆ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಏರ್ ಲಿಫ್ಟ್ ಮೂಲಕ ಬೆಳಗಾವಿಗೆ ತೆಗೆದುಕೊಂಡು ಹೋಗಲಾಗುತ್ತದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕತ್ತಿ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.