RNI NO. KARKAN/2006/27779|Sunday, June 1, 2025
You are here: Home » breaking news » ಗೋಕಾಕ:ಡಿ.3ರಿಂದ ಡಿ.4ರವರೆಗೆ ಗೋಸಬಾಳ ಮಾರುತಿ ದೇವಸ್ಥಾನದ ಶತಮಾನೋತ್ಸವ, ಕಾರ್ತಿಕೋತ್ಸವ ಹಾಗೂ ಯಾತ್ರಿನಿವಾಸ ಉದ್ಘಾಟನೆ ಕಾರ್ಯಕ್ರಮ

ಗೋಕಾಕ:ಡಿ.3ರಿಂದ ಡಿ.4ರವರೆಗೆ ಗೋಸಬಾಳ ಮಾರುತಿ ದೇವಸ್ಥಾನದ ಶತಮಾನೋತ್ಸವ, ಕಾರ್ತಿಕೋತ್ಸವ ಹಾಗೂ ಯಾತ್ರಿನಿವಾಸ ಉದ್ಘಾಟನೆ ಕಾರ್ಯಕ್ರಮ 

ಡಿ.3ರಿಂದ ಡಿ.4ರವರೆಗೆ ಗೋಸಬಾಳ ಮಾರುತಿ ದೇವಸ್ಥಾನದ ಶತಮಾನೋತ್ಸವ, ಕಾರ್ತಿಕೋತ್ಸವ ಹಾಗೂ ಯಾತ್ರಿನಿವಾಸ ಉದ್ಘಾಟನೆ ಕಾರ್ಯಕ್ರಮ

ಬೆಟಗೇರಿ ಡಿ 1 : :ಸಮೀಪದ ಗೋಸಬಾಳ ಗ್ರಾಮದ ಮಾರುತಿ ದೇವರ ದೇವಸ್ಥಾನದ ಶತಮಾನೋತ್ಸವ ಮತ್ತು ಕಾರ್ತಿಕೋತ್ಸವ, ಯಾತ್ರಿ ನಿವಾಸದ ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಶನಿವಾರ ಡಿ.3ರಿಂದ ರವಿವಾರ ಡಿ.4ರವರೆಗೆ ನಡೆಯಲಿವೆ.
   ಶನಿವಾರ ಡಿ.3ರಂದು ಬೆಳಿಗ್ಗೆ 6ಗಂಟೆಗೆ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಸ್ಥಳೀಯ ಮಾರುತಿ ದೇವರ ದೇವಾಲಯದಲ್ಲಿರುವ ಗದ್ದುಗೆಗೆ ಪಂಚಾಮೃತಾಭಿಷೇಕ, ಎಲೆಪೂಜೆ, ಮಹಾಪ್ರಸಾದ, ಸ್ಥಳೀಯ ಮತ್ತು ಸುತ್ತಲಿನ ಹಳ್ಳಿಗಳ ಭಜನಾ ತಂಡದವರಿಂದ ಶಿವಭಜನೆ, ಪುರಜನರಿಂದ ಪೂಜೆ, ನೈವೇದ್ಯ ಸಮರ್ಪನೆ, ಮಧ್ಯಾಹ್ನ 2ಗಂಟೆಗೆ ಪಲ್ಲಕ್ಕಿ ಉತ್ಸವ, ಸಾಯಂಕಾಲ 4ಗಂಟೆಗೆ ಸುಮಂಗಲೆಯರಿಂದ ಕುಂಭಮೇಳ, ಸಕಲ ವಾದ್ಯಮೇಳಗಳೊಂದಿಗೆ ಇಲ್ಲಿಯ ಬಸವೇಶ್ವರ ಬಸ್ ನಿಲ್ದಾಣದಿಂದ ಬಲಭೀಮ ದೇವಸ್ಥಾನಕ್ಕೆ ಶ್ರೀಗಳು, ಗಣ್ಯರನ್ನು ಬರಮಾಡಿಕೊಳ್ಳುವದು, ಗೋಸಬಾಳ ಗ್ರಾಪಂ ಸಿಬ್ಬಂದಿ ಶ್ರೀಗಳ ಅಮೃತ ಹಸ್ತದಿಂದ ಕಾರ್ತಿಕ ದೀಪೋತ್ಸವ, ಶ್ರೀಗಳಿಂದ, ಗಣ್ಯರಿಂದ ಮಾರುತಿ ದೇವಸ್ಥಾನಕ್ಕೆ ಪುಷ್ಪಾರ್ಪನೆ ನಡೆಯಲಿದೆ.
    ನೂತನ ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ, ದೇವಸ್ಥಾನದ ಶತಮಾನೋತ್ಸವ, ದಾನಿಗಳಿಗೆ, ಗಣ್ಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ. ಗೋಕಾಕದ ಮುರುಘರಾಜೇಂದ್ರ ಸ್ವಾಮೀಜಿ, ಬನ್ನೂರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಘಟಪ್ರಭಾದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ, ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಲಖನಾಯ್ಕನಕೊಪ್ಪದ ಕೃಷ್ಣಾನಂದ ಸ್ವಾಮೀಜಿ, ತವಗದ ನಿರುಪಾದಿ ಸ್ವಾಮೀಜಿ, ಕಪರಟ್ಟಿ-ಕಳ್ಳಿಗುದ್ದಿ ಬಸವರಾಜ ಸ್ವಾಮೀಜಿ, ಮುನ್ಯಾಳ ಲಕ್ಷ್ಮಣದೇವರು ಸಮ್ಮುಖ, ಗ್ರಾಪಂ ಅಧ್ಯಕ್ಷೆ ಆಶವ್ವ ಡಬರಿ ಅಧ್ಯಕ್ಷತೆ ವಹಿಸಲಿದ್ದಾರೆ.
    ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ತಾಪಂ ಮಾಜಿ ಸದಸ್ಯೆ ನೀಲವ್ವ ಬಳಿಗಾರ, ಜಿಪಂ ಮಾಜಿ ಸದಸ್ಯ ವಿಠಲ ಸವದತ್ತಿ, ಗೋಕಾಕ ಕೆಆರ್‍ಐಡಿಎಲ್ ಎಇಇ ಆರ್.ಪಿ.ನಾರಾಯನ್ಕರ್ ಮುಖ್ಯ ಅತಿಥಿಗಳಾಗಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ರಾಜಕೀಯ ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ದಾನಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾತ್ರಿ 10 ಗಂಟೆಗೆ ಬಂಡಿಗಣಿ ಬಸವೇಶ್ವರ ನಾಟಕ ಸಂಘದವರಿಂದ ಹೆತ್ತವಳ ಹಾಲು ವಿಷವಾಯಿತು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
    ರವಿವಾರ ಡಿ.4ರಂದು ಬೆಳಿಗ್ಗೆ 6ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಪಂಚಾಮೃತಾಭಿಷೇಕ, ಮಹಾಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ 1-2 ಗಂಟೆವರೆಗೆ ವಿವಿಧ ಹಳ್ಳಿಗಳ ಪುರವಂತರಿಂದ ಶ್ರೀ ವೀರಭದ್ರೇಶ್ವರ ಒಡಪು ಹೇಳುವ ಕಾರ್ಯಕ್ರಮ, ಮಧ್ಯಾಹ್ನ 2ಗಂಟೆಗೆ ಸ್ಥಳೀಯ ಹಾಗೂ ಸುತ್ತಲಿನ ವಿವಿಧ ಹಳ್ಳಿಗಳ ಕಲಾ ತಂಡದವರಿಂದ ಕರಡಿ ಮಜಲು, ಹಲಿಗೆ ವಾದನ, ಡೊಳ್ಳಿನ ಮಜಲು, ಬ್ಯಾಂಡ್   ಸೇರಿದಂತೆ ವಿವಿಧ ಕಲಾ ತಂಡವರಿಂದ ಭಕ್ತಿಯ ಕಲಾ ಪ್ರದರ್ಶನ ಸೇವೆ, ಸಾಯಂಕಾಲ 5.30 ಗಂಟೆಗೆ ಪಲ್ಲಕ್ಕಿ ಉತ್ಸವ, ಕಾರ್ತಿಕೋತ್ಸವ, ಕಾಯಿ ಹಾರಿಸುವದು, ಸಿಹಿ ವಿತರಣೆ ಬಳಿಕ ಪ್ರಸಕ್ತ ವರ್ಷದ ಕಾರ್ತಿಕೋತ್ಸವ ಸಮಾರೋಪಗೊಳ್ಳಲಿದೆ. ಮಾರುತಿ ದೇವರ ಅಸಂಖ್ಯಾತ ಭಕ್ತರು ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಮಾರುತಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಪ್ರಕಾಶ ಮಾರುತಿ ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: