RNI NO. KARKAN/2006/27779|Friday, March 20, 2026
You are here: Home » breaking news » ಬೆಳಗಾವಿ :ಸಹಕಾರಿ ಮಾರಾಟ ಮಂಡಳಿ ಚುನಾವಣೆ : ಜಾರಕಿಹೊಳಿ- ಕತ್ತಿ ಗುಂಪುಗೆ ಭಾರಿ ಜಯ

ಬೆಳಗಾವಿ :ಸಹಕಾರಿ ಮಾರಾಟ ಮಂಡಳಿ ಚುನಾವಣೆ : ಜಾರಕಿಹೊಳಿ- ಕತ್ತಿ ಗುಂಪುಗೆ ಭಾರಿ ಜಯ 

ಚುನಾವಣೆಯಲ್ಲಿ ಜಯಶಾಲಿಯಾದ ಬಿ.ಆರ್.ಪಾಟೀಲ(ನಾಗನೂರ) ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದರು.

ಸಹಕಾರಿ ಮಾರಾಟ ಮಂಡಳಿ ಚುನಾವಣೆ : ಜಾರಕಿಹೊಳಿ- ಕತ್ತಿ ಗುಂಪುಗೆ ಭಾರಿ ಜಯ

ಗೋಕಾಕ / ಬೆಳಗಾವಿ ಸೆ 24: ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳ ನಿ., ಬೆಂಗಳೂರು ಇದರ ಆಡಳಿತ ಮಂಡಳಿಯ ಬೆಳಗಾವಿ ವಿಭಾಗಕ್ಕೆ ನಡೆದ ಚುನಾವಣೆಯಲ್ಲಿ ಜಾರಕಿಹೊಳಿ-ಕತ್ತಿ ಅವರ ನೇತೃತ್ವದ ಗುಂಪು ಜಯಭೇರಿ ಬಾರಿಸಿದೆ.

ಭಾನುವಾರದಂದು ಮಾರಾಟ ಮಂಡಳದ ಕಾರ್ಯಾಲಯದಲ್ಲಿ ಜರುಗಿದ ಈ ಚುನಾವಣೆಯಲ್ಲಿ ಬೆಳಗಾವಿ ವಿಭಾಗದ ಎಲ್ಲ 5 ಜನ ಅಭ್ಯರ್ಥಿಗಳು ಜಾರಕಿಹೊಳಿ-ಕತ್ತಿ ಬಣದಿಂದ ಜಯಶಾಲಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಸಂಸದ ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮಣ ಸವದಿ, ಮಹಾಂತೇಶ ಕವಟಗಿಮಠ ಅವರ ನೇತೃತ್ವದ ಗುಂಪು ಹೀನಾಯ ಸೋಲು ಅನುಭವಿಸಿದೆ.

ಜಾರಕಿಹೊಳಿ-ಕತ್ತಿ ಅವರ ಗುಂಪಿನಿಂದ ಸ್ಪರ್ಧಿಸಿದ್ದ ಬೆಳಗಾವಿ ಜಿಲ್ಲೆಯಿಂದ ಬಸನಗೌಡ ರಾಮನಗೌಡ ಪಾಟೀಲ(29), ಬಾಗಲಕೋಟ ಜಿಲ್ಲೆಯಿಂದ ತಿಮ್ಮಣ್ಣಾ ಮೆಳ್ಳಿ(28), ವಿಜಯಪುರ ಜಿಲ್ಲೆಯಿಂದ ಭೀಮರಾಯಿ ಬಸಪ್ಪ ಗುಡ್ಡದ(26), ಧಾರವಾಡ ಜಿಲ್ಲೆಯಿಂದ ಶಿವಕುಮಾರಗೌಡ ಪಾಟೀಲ(26) ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಷಣ್ಮುಕ ಬಸವರಾಜೇಗೌಡ ಅವರು 26 ಮತಗಳನ್ನು ಪಡೆದು ಕೋರೆ-ಸವದಿ ಅವರ ಗುಂಪಿನ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ.

ಬಹು ತುರುಸಿನಿಂದ ಜರುಗಿದ ಈ ಚುನಾವಣೆಯು ಜಿಲ್ಲೆಯ ಜಾರಕಿಹೊಳಿ-ಕತ್ತಿ ಹಾಗೂ ಕೋರೆ-ಸವದಿ ಅವರ ಗುಂಪುಗಳಿಗೆ ಪ್ರತಿಷ್ಠೆಯ ಕಣವಾಗಿತ್ತು.
ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಹಾಗೂ ಮಾಜಿ ಸಚಿವರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ಗುಂಪಿನ ಎಲ್ಲ ಐದೂ ಜನ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

Related posts: